ಆನಂದ ಭಾಷ್ಪಕ್ಕೂ, ಕಣ್ಣೀರಿಗೂ ವ್ಯತ್ಯಾಸವಿದೆ: ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿ ಟೀಕೆ

Update: 2021-07-26 15:36 GMT

ಬೆಂಗಳೂರು, ಜು. 26: `ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ತಂದೆ ಇಹಲೋಕ ತ್ಯಜಿಸಿದ ದಿನವೇ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ದಾಹ ತೋರ್ಪಡಿಸಿದ ಇತಿಹಾಸ ನಿಮ್ಮದು. ಹಿರಿಯ ನಾಯಕರ ಕಣ್ಣೀರು ಹಾಕಿಸುವುದು ಕಾಂಗ್ರೆಸ್ ಪಕ್ಷದ ಹುಟ್ಟುಗುಣ. ಆನಂದ ಭಾಷ್ಪಕ್ಕೂ, ಕಣ್ಣೀರಿಗೂ ವ್ಯತ್ಯಾಸವಿದೆ. ಇದರಲ್ಲಿ ಬಹಿರಂಗಗೊಳಿಸುವ ಗುಟ್ಟೇನು ಇಲ್ಲ' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಕಾಂಗ್ರೆಸ್ ಪಕ್ಷದಲ್ಲಿರು ಸಂತ್ರಸ್ಥರ ಪಟ್ಟಿಯನ್ನು ತೆರೆದಿಡಬೇಕೇ? ಮಧ್ಯಪ್ರದೇಶದಲ್ಲಿ ಆಗಿದ್ದೇನು, ರಾಜಸ್ಥಾನ, ಪಂಜಾಬ್‍ನಲ್ಲಿ ಆಗುತ್ತಿರುವುದೇನು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಜಿ-23 ನಾಯಕರನ್ನು ಸೃಷ್ಟಿಸಿದ್ದು ಯಾರು ಗಾಂಧಿ ಕುಟುಂಬವೋ ಅಥವಾ ಕಾಂಗ್ರೆಸ್ ಪಕ್ಷವೋ?' ಎಂದು ತಿರುಗೇಟು ನೀಡಿದೆ.

`ನಮ್ಮ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ, ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಲು ರಾಜೀನಾಮೆ ನೀಡಿದ್ದೇನೆ' ಎಂದು ಬಿಎಸ್‍ವೈ ತಿಳಿಸಿದ್ದಾರೆ. ವಿಶ್ವ ದಾಖಲೆಯ ಅತಿ ದೀರ್ಘ ಅವಧಿಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರೆಯುತ್ತಿದ್ದಾರೆ. ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿಕೊಳ್ಳಿ' ಎಂದು ಬಿಜೆಪಿ ಸಲಹೆ ನೀಡಿದೆ.

`ವಿಪಕ್ಷ ನಾಯಕ ಸಿದ್ದರಾಮಯ್ಯ ನಂತಹ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ರಾಜ್ಯ ಕಂಡಿಲ್ಲ. ಅರ್ಕಾವತಿ ಡಿನೋಟಿಫಿಕೇಶನ್ ಅವ್ಯವಹಾರದ ಜತೆಗೆ ಹಿಂದು ಕಾರ್ಯಕರ್ತರ ಕಗ್ಗೊಲೆಗೆ ಕಾರಣನಾದ ನರ ರೂಪದ ರಾಕ್ಷಸ ಎಂದರೂ ತಪ್ಪಾಗಲಾರದು. ಗಾಂಧಿ ಕುಟುಂಬದ ಗುಲಾಮರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ?' ಎಂದು ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

`ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸಿದ್ಧಾಂತ, ಆಂತರಿಕ ಶಿಸ್ತಿಗೆ ಒಳಪಟ್ಟು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಈ ವಿಚಾರದಲ್ಲಿ ಗಾಂಧಿ ಕುಟುಂಬದ ಗುಲಾಮರಿಂದ ಕಿವಿ ಮಾತು ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿ ಪಕ್ಷಕ್ಕಿಲ್ಲ ಎಂಬುದನ್ನು ಕಾಂಗ್ರೆಸ್ ಮನಗಾಣಬೇಕು. `ಪಕ್ಷ ನನಗೆ ತಾಯಿ ಸಮಾನ' ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬಿಎಸ್‍ವೈ ಅವರ ವಿದಾಯದಲ್ಲಿ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಭೀಷ್ಮ. ಪಕ್ಷದ ಏಳಿಗೆಗಾಗಿ ಶ್ರಮಿಸಿದ ಯಡಿಯೂರಪ್ಪ ಅವರು ಪಕ್ಷದ ಶಿಸ್ತಿಗೆ ಒಳಪಟ್ಟು ಸ್ವ-ಇಚ್ಛೆಯಿಂದ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ' ಎಂದು ಬಿಜೆಪಿ ಸ್ಪಷ್ಟಣೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News