ಮೈಸೂರು: ಶಾಲೆಗೆ ಸೇರಲು ಹಣವಿಲ್ಲವೆಂದು ಬಾಲಕ ಆತ್ಮಹತ್ಯೆಗೆ ಯತ್ನ
Update: 2021-07-26 17:16 GMT
ಎಚ್.ಡಿ.ಕೋಟೆ, ಜು.26: ಶಾಲೆಗೆ ಸೇರಲು ಪುಸ್ತಕ, ಬಟ್ಟೆಗೆ ಹಣ ಇಲ್ಲದ ಹಿನ್ನೆಲೆ ನೊಂದುಕೊಂಡಿದ್ದ ಬಾಲಕನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಬೀಜನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಡತ್ತೂರು-ಹೊಸಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.
ಹೊಸಳ್ಳಿ ಗ್ರಾಮದ ನಿವಾಸಿ ಜಯಮ್ಮ ಎಂಬವರ ಮಗ ಅಯ್ಯಪ್ಪ (14) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ. ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. 8ನೇ ತರಗತಿಯಲ್ಲಿ ಓದುತ್ತಿರುವ ಅಯ್ಯಪ್ಪ, ತನಗೆ ಧರಿಸಲು ಬಟ್ಟೆಗಳಿಲ್ಲ, ಅಗತ್ಯ ಪುಸ್ತಕಗಳು ಹಾಗೂ ಇತರ ಖರ್ಚಿಗೂ ಹಣಬೇಕು. ಕೂಲಿ ಕೆಲಸ ಮಾಡುವ ತನ್ನ ತಾಯಿ ಇನ್ನೆಷ್ಟು ದಿನ ಕಷ್ಟಪಡಬೇಕೆಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.