ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರದಿಂದ ಅನ್ಯಾಯ: ಎಚ್.ಡಿ.ಕುಮಾರಸ್ವಾಮಿ

Update: 2021-07-29 12:25 GMT

ಬೆಂಗಳೂರು, ಜು.29: ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ನೀರಾವರಿ ಯೋಜನೆಗಳು ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಧೋರಣೆಗಳಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೀರಾವರಿ ಬಗ್ಗೆ ಹೆಚ್ಚು ಅರಿವು ಇದೆ. ಮಹಾದಾಯಿ ಕುರಿತು ನ್ಯಾಯಾಧೀಕರಣ ನೀರು ಹಂಚಿಕೆ ಮಾಡಿದೆ. ಆದರೆ, ಸುಪ್ರೀಂಕೋರ್ಟ್‍ನಲ್ಲಿ ಕೆಲವು ತೊಡಕುಗಳಿರುವುದರಿಂದ ಕೇಂದ್ರ ಸರಕಾರ ಇನ್ನೂ ನೋಟಿಫಿಕೇಷನ್ ಹೊರಡಿಸಿಲ್ಲ ಎಂದರು.

ಅದೇ ರೀತಿ ಕೃಷ್ಮಾ ಮೇಲ್ದಂಡೆ ವಿಷಯದಲ್ಲೂ ನೋಟಿಫಿಕೇಷನ್ ಆಗಿಲ್ಲ. ಇದರಿಂದ, ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಹಲವಾರು ವರ್ಷಗಳಿಂದ ಚರ್ಚೆ ಮಾಡುತ್ತಿದ್ದೇವೆ. ಕೆಲವು ಸಂದರ್ಭದಲ್ಲಿ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಮತ್ತೆ ತಮಿಳುನಾಡಿನವರು ಹೋಗಿ ಹೇಳುತ್ತಿದ್ದಂತೆ ಅನುಮತಿ ಕೊಟ್ಟಿಲ್ಲ ಎನ್ನುತ್ತಾರೆ. ರಾಜ್ಯದ ಜನತೆಯ ಬಗ್ಗೆ ಚೆಲ್ಲಾಟ ಮಾಡುತ್ತಿರುವ ಕೇಂದ್ರ ಸರಕಾರದ ನಡವಳಿಕೆ ಬಗ್ಗೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ಮೊದಲ ಹಂತದಲ್ಲಿ ನಮ್ಮ ಪಕ್ಷದಿಂದ ಈ ಮೂರು ನೀರಾವರಿ ಯೋಜನೆಗಳ ಬಗ್ಗೆ ರಾಷ್ಟ್ರಪತಿ ಮೂಲಕ ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ. ಪ್ರಧಾನಮಂತ್ರಿಗೂ ಆ ಮನವಿ ಪತ್ರದ ಪ್ರತಿಯನ್ನು ಕಳುಹಿಸಿಕೊಡುತ್ತೇವೆ. ಇದು ಪ್ರಾರಂಭಿಕ ಹಂತದಲ್ಲಿ ನಾವು ಮಾಡಿರುವುದು. ಆನಂತರ ಕೇಂದ್ರ ಸರಕಾರದ ಸ್ಪಂದನೆ ಹೇಗಿರುತ್ತೆ ಅನ್ನೋದನ್ನು ನೋಡಿಕೊಂಡು ನಮ್ಮ ಮುಂದಿನ ಹೋರಾಟ ನಿರ್ಧರಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ, ರೈತರಿಗೆ ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದವರಿಗೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿ ಕೊಟ್ಟಿರುವ ಕೊಡುಗೆಗಳನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ಪ್ರಾದೇಶಿಕ ನೆಲಗಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕಳೆದ ಮೂರು ನಾಲ್ಕು ವರ್ಷಗಳಿಂದ ಆಗುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ನೀರು ಯಥೇಚ್ಚವಾಗಿ ಸಮುದ್ರದ ಪಾಲು ಆಗುತ್ತಿದೆ. ನಮ್ಮ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೊಷಿಸುವಂತೆ ಹಲವು ಸರಕಾರಗಳು ಮನವಿ ಸಲ್ಲಿಸಿವೆ. ಆದರೆ, ಯಾವುದೆ ಪ್ರಯೋಜನವಾಗುತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ಹೊಸ ಸಿಎಂಗೆ ಅನುಭವ ಇದೆ. ಮೂಲತಃ ಅವರು ಜನತಾ ಪರಿವಾರದವರು. ಅವರು ಬಿಜೆಪಿ ಪಕ್ಷದವರು ಆಗಿದ್ದರೂ ಜನತಾದಳದವರೇ ಸಿಎಂ ಆಗಿದ್ದಾರೆ ಅನ್ನೋ ಭಾವನೆ ನಮ್ಮಲ್ಲಿದೆ. ಅವರು ಒಳ್ಳೆಯ ಕೆಲಸ ಮಾಡಲಿ, ಬಿಜೆಪಿಯವರು ಸಹಕಾರ ನೀಡಲಿ. ಕೇಂದ್ರ ಸರಕಾರ ಕಳೆದ ಎರಡು ವರ್ಷಗಳಲ್ಲಿ ಯಡಿಯೂರಪ್ಪಗೆ ಯಾವುದೆ ಸಹಕಾರ ನೀಡಿಲ್ಲ. ರಾಜ್ಯದ ಹಲವಾರು ಬೇಡಿಕೆಗಳು, ಜಿಎಸ್‍ಟಿ ಪಾಲು, ಹಲವಾರು ಇಲಾಖೆಗಳಿಗೆ ಕೇಂದ್ರ ಸರಕಾರದಿಂದ ಬರಬೇಕಿರುವ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅವರು ದೂರಿದರು.

ನಮ್ಮ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರ ನೆರವು ನೀಡಲಿ. ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ವಿಕಲಚೇತನರು, ವಿಧವೆಯರು ಹಾಗೂ ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಹೆಚ್ಚಳ ಮಾಡಿದ್ದಾರೆ. ಆದರೆ, ಈಗಿರುವ ವಿದ್ಯಾರ್ಥಿವೇತನವೇ ಮಕ್ಕಳಿಗೆ ಸಿಗುತ್ತಿಲ್ಲ. ವಿಕಲಚೇತನರು, ವಿಧವೆಯರು, ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಕಳೆದ ಆರು ತಿಂಗಳುಗಳಿಂದ ಬಿಡುಗಡೆಯಾಗಿಲ್ಲ. ಇದು ಕೇವಲ ಘೋಷಣೆಯಾಗಿರಬಾರದು ಎಂದು ಕುಮಾರಸ್ವಾಮಿ ಹೇಳಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್‍ನಿಂದ ಮೃತಪಡುವವರಿಗೆ ಒಂದು ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ, ಈವರೆಗೆ ಈ ಸಂಬಂಧ ಸರಕಾರಿ ಆದೇಶ ಹೊರಡಿಸಿಲ್ಲ. 2019 ರಿಂದ ಮಳೆ ಆನಾಹುತದಿಂದ ಸಂತ್ರಸ್ತರಾದವರಿಗೆ ಹಣವು ಬಿಡುಗಡೆಯಾಗಿಲ್ಲ, ಬೆಳೆ ಹಾಗೂ ಮನೆಗಳಿಗೆ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಅವರು ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News