ಚಿಕ್ಕಮಗಳೂರು: ಕಂದಕಕ್ಕೆ ಉರುಳಿದ ಪ್ರವಾಸಿಗರ ಕಾರು: ಓರ್ವ ಮಹಿಳೆಗೆ ಗಂಭೀರ ಗಾಯ
ಚಿಕ್ಕಮಗಳೂರು, ಜು.28: ಜಿಲ್ಲೆಯ ಹೊರನಾಡು ಯಾತ್ರಾ ಸ್ಥಳಕ್ಕೆ ಆಗಮಿಸುತ್ತಿದ್ದ ಪ್ರವಾಸಿಗರಿದ್ದ ಕಾರೊಂದು ಎನ್.ಆರ್.ಪುರ ತಾಲೂಕಿ ಬಾಳೆಹೊನ್ನೂರು ಪಟ್ಟಣ ಸಮೀಪದಲ್ಲಿ ಕಂದಕಕ್ಕೆ ಉರುಳಿ ಬಿದ್ದಿರು ಘಟನೆ ವರದಿಯಾಗಿದ್ದು, ಅಪಘಾತದಲ್ಲಿ ಓರ್ವ ಮಹಿಳೆಗೆ ಗಂಭೀರವಾಗಿ ಗಾಯವಾಗಿದ್ದು, ಉಳಿದ 9 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಪ್ರವಾಸಿಗರು ಆನೇಕಲ್ ಪಟ್ಟಣದ ನಿವಾಸಿಗಳೆಂದು ತಿಳಿದು ಬಂದಿದ್ದು, ಚಿಕ್ಕಮಗಳೂರು, ಬಾಳೆಹೊನ್ನೂರು ಮಾರ್ಗವಾಗಿ ಗುರುವಾರ ಹೊರನಾಡು ದೇವಾಲಯ ಭೇಟಿಗೆ ಹೊರಟಿದ್ದ ಪ್ರವಾಸಿಗರ ಕಾರು ಬಾಳೆಹೊನ್ನರೂರು ಪಟ್ಟಣ ಸಮೀಪದ ವಾಟೆಕುಡಿಗೆ ಎಂಬಲ್ಲಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ 13 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಕಂದಕಕ್ಕೆ ಬಿದ್ದ ವೇಳೆ ಕಾರು ಒಂದು ಪಲ್ಟಿಯಾಗಿದ್ದರೂ ಕಾರಿನಲ್ಲಿದ್ದ ಓರ್ವ ಮಹಿಳೆ ಮಾತ್ರ ಗಂಭೀರವಾಗಿ ಗಾಯಗೊಂಡಿದ್ದು, ಉಳಿದ 9 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಐವರು ಮಕ್ಕಳು, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದರೆಂದು ತಿಳಿದು ಬಂದಿದ್ದು, ಗಾಯಗೊಂಡ ಮಹಿಳೆಯನ್ನು ಬಾಳೆಹೊನ್ನೂರು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.