ಬಿಜೆಪಿ 'ಭ್ರಷ್ಟಾಚಾರಿ ಜನರ ಪಕ್ಷ' ಎಂದು ಮತ್ತೊಮ್ಮೆ ಸಾಬೀತಾಗಿದೆ: ಸಿದ್ದರಾಮಯ್ಯ

Update: 2021-07-29 14:16 GMT

ಬೆಂಗಳೂರು, ಜು. 29: `ಹುಟ್ಟುತ್ತಲೇ ಹುಣ್ಣಾಗಿದ್ದ ಬಿಜೆಪಿ ಸರಕಾರ ಎರಡು ವರ್ಷ ಪೂರೈಸುವುದರೊಳಗೆ `ಭ್ರಷ್ಟಾಚಾರಿ ಜನರ ಪಕ್ಷ' ಎಂದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಕರ್ನಾಟಕದಲ್ಲಿ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಭ್ರಮೆ ಸೃಷ್ಟಿಸಿ ಅಧಿಕಾರಕ್ಕೇರಿದ ಡಬಲ್ ಇಂಜಿನ್ ಸರಕಾರದ ಬಗ್ಗೆ ನಾಡಿನ ಜನ ಭ್ರಮನಿರಸನಗೊಂಡು ಛೀಮಾರಿ ಹಾಕುತ್ತಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಬಿಜೆಪಿ ಸರಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ `ಜನಪೀಡಕ ಸರಕಾರ' ಎಂಬ ಕಿರು ಹೊತ್ತಿಗೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, `ಭ್ರಷ್ಟಾಚಾರ ಮತ್ತು ಕಪ್ಪುಹಣದ ಮೂಲಕವೇ ರಚಿತವಾದ ಸರಕಾರ ಎರಡು ವರ್ಷಗಳುದ್ದಕ್ಕೂ ಆಚರಿಸಿದ್ದು ದುರಾಡಳಿತ, ಅನೀತಿ ಮತ್ತು ಭ್ರಷ್ಟಾಚಾರವನ್ನೆ. ಭ್ರಷ್ಟಾಚಾರದ ನೆಪದಲ್ಲಿ ಸಿಎಂ ಬದಲಾಗುವ ಮೂರು ದಿನದ ಮೊದಲು ಬಡವರ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವುದಕ್ಕಾಗಿ ಮೀಸಲಿಟ್ಟ ಮೊಟ್ಟೆಯ ಹಣವನ್ನೂ ಈ ಸರಕಾರ ನುಂಗಿ ಹಾಕಿದೆ. ತಮ್ಮದೇ ಸರಕಾರದ ಬಗ್ಗೆ ಬಿಜೆಪಿಯ ಸದಸ್ಯರುಗಳು, ಶಾಸಕರೇ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಹೊರಿಸುತ್ತಲೇ ಇದ್ದಾರೆ. ಹಲವು ಸಚಿವರುಗಳ ಹಗರಣಗಳ ಕುರಿತು ಜನ ಮತ್ತು ಇಲಾಖೆಯ ನೌಕರರೇ ನನಗೆ ಪತ್ರ ಬರೆದಿದ್ದಾರೆ' ಎಂದು ದೂರಿದರು. 

`ಈ ನಡುವೆ ಸಿಎಂ ಒಬ್ಬರನ್ನು ಬದಲಾಯಿಸಿ ಸರಕಾರದ ಘನತೆ ಉಳಿಸಿಕೊಳ್ಳಬಹುದು ಎನ್ನುವ ಬಿಜೆಪಿ ಹೈಕಮಾಂಡ್ ಭ್ರಮಿಸಿದಂತಿದೆ. ಈ ನಾಟಕ ನಾಡಿನ ಜನತೆಗೆ ಅರ್ಥ ಆಗಿದೆ. ಹಲವಾರು ಸಚಿವರುಗಳು, ಶಾಸಕರುಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಮ್ಮ ಮಾನ ಉಳಿಯಿತು ಎಂದು ಓಡಾಡಿಕೊಂಡಿದ್ದಾರೆ. ಪ್ರತಿ ಇಲಾಖೆಯ ಒಂದಲ್ಲಾ ಒಂದು ವೈಫಲ್ಯಗಳು, ಭ್ರಷ್ಟಾಚಾರಗಳು ಹೊರಗೆ ಬರುತ್ತಲೇ ಇವೆ' ಎಂದು ಸಿದ್ದರಾಮಯ್ಯ ಟೀಕಿಸಿದರು.

`ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರಕಾರಕ್ಕೆ ಜು.26ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನಾ ಕಾರ್ಯಕ್ರಮವನ್ನು ಮಾಡಿ, ಕಷ್ಟದ ಕಾಲದಲ್ಲೂ ತಾವೇನೋ ಸಾಧನೆ ಮಾಡಿದ್ದೇವೆಂದು ಸುಳ್ಳುಗಳನ್ನು ಹೇಳಿದರು. ನನ್ನ ಪ್ರಕಾರ ಭ್ರಷ್ಟಾಚಾರವೇ ಇವರ ಎರಡು ವರ್ಷದ ದೊಡ್ಡ ಸಾಧನೆ. ಮಕ್ಕಳು ತಿನ್ನುವ ಮೊಟ್ಟೆಯಲ್ಲಿ, ಕೊರೊನ ಚಿಕಿತ್ಸಕ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ ಮಾಡಿದಂತಹ ಭಂಡ ಸರಕಾರ ಬಿಜೆಪಿಯದ್ದು, ಇವೆಲ್ಲವನ್ನು ಸಾಕ್ಷಿ ಸಮೇತ ಸದನದಲ್ಲಿ ಪ್ರಸ್ತಾಪ ಮಾಡಿದರೆ ಯಡಿಯೂರಪ್ಪ ನನ್ನ ಆರೋಪಕ್ಕೆ ತುಟಿ ಬಿಚ್ಚಲಿಲ್ಲ' ಎಂದು ಲೇವಡಿ ಮಾಡಿದರು.

`ಕೊರೊನ ರೋಗದಿಂದ ಮೃತಪಟ್ಟವರ ಸಂಖ್ಯೆ ಸರಕಾರ ನೀಡುವ ಅಂಕಿ ಅಂಶಗಳಿಗಿಂತ 10 ಪಟ್ಟು ಹೆಚ್ಚಿದೆ. ಮೊದಲ ಅಲೆಯಲ್ಲೇ ಲಕ್ಷಾಂತರ ಜನ ಸತ್ತಿದ್ದರೂ ಎರಡನೇ ಅಲೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಕೊರೋನ ಉಲ್ಬಣಗೊಂಡ ನಂತರ ಆಕ್ಸಿಜನ್, ಬೆಡ್‍ಗಳು, ಔಷಧಿಗಳು, ಆಂಬುಲೆನ್ಸ್‍ಗಳ ಕೊರತೆಯಾಯಿತು. ಇದರಿಂದ ಹಲವರು ರಸ್ತೆಗಳಲ್ಲಿ ಪ್ರಾಣ ಬಿಡುವಂತಾಯಿತು. ಶವ ಸಂಸ್ಕಾರಕ್ಕೂ ಸ್ಥಳ ಸಿಗದೆ ನದಿಗಳಲ್ಲಿ ಹೆಣಗಳು ತೇಲಿ ಬಂದವು' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

`ಚಾಮರಾಜನಗರದ ದುರಂತ ನಮ್ಮ ಕಣ್ಣೆದುರೇ ಇದೆ, ಆದರೂ ಕೇಂದ್ರದ ಮಂತ್ರಿ ಒಬ್ಬರು ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂದು ಹೇಳುತ್ತಾರೆ. ರೋಗಿಗಳ ಸಂಬಂಧಿಕರು ತಮ್ಮವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಒದ್ದಾಡಿದ ರೀತಿಯನ್ನು ಇಡೀ ದೇಶ ಕಂಡಿದೆ. ರಾಜ್ಯ ಬಿಜೆಪಿ ಸರಕಾರ ಲಾಕ್‍ಡೌನ್ ಘೋಷಣೆ ಮಾಡಿತು. ಇದರಿಂದ ದಿನಗೂಲಿ ನೌಕಕರು, ಆಟೋ, ವಾಹನ ಚಾಲಕರು, ಕುಶಲಕರ್ಮಿಗಳು, ಕೈಗಾರಿಕೆಗಳು, ಅಕ್ಕಸಾಲಿಗರು, ಸವಿತಾ ಸಮಾಜದವರು ಹೀಗೆ ದುಡಿಯುವ ವರ್ಗದ ಜನ ಕೆಲಸವಿಲ್ಲದೆ ನಷ್ಟಕ್ಕೀಡಾದರು. ಅವರ ನೆರವಿಗೆ ನಿಲ್ಲಬೇಕಿದ್ದ ಸರಕಾರ ಕೈಕಟ್ಟಿ ಕೂತಿತ್ತು' ಎಂದು ದೂರಿದರು.

`ದುಡಿಯುವ ವರ್ಗದ ಜನರಿಗೆ ಸರಕಾರದ ಪರವಾಗಿ 10ಸಾವಿರ ರೂ.ಲಾಕ್‍ಡೌನ್ ಪರಿಹಾರದ ಹಣ ನೀಡಿ ಎಂದು ನಾನು ಹಲವು ಬಾರಿ ಪತ್ರ ಬರೆದೆ, ಮಾಧ್ಯಮಗಳ ಮೂಲಕ ಒತ್ತಾಯಿಸಿದೆ. ನನ್ನ ಮನವಿಗಲ್ಲದಿದ್ದರೂ ಬಡವರ ಕಷ್ಟಕ್ಕಾದರೂ ಬಿಜೆಪಿ ಸರಕಾರದ ಹೃದಯ ಮಿಡಿಯಬೇಕಿತ್ತು. ಕಳೆದ ಬಾರಿಯಂತೂ ಪರಿಹಾರದ ಆಸೆ ಹುಟ್ಟಿಸಿ, ಮೂಗಿಗೆ ತುಪ್ಪ ಸವರಿ ಕೈತೊಳೆದುಕೊಂಡಿದ್ದ ಸರಕಾರ ಈ ಬಾರಿ ಲಾಕ್‍ಡೌನ್ ಮಾಡಿದಾಗಲಾದರೂ ಬಡಜನರ ನೆರವಿಗೆ ನಿಲ್ಲಬೇಕಿತ್ತು. ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್‍ಡೌನ್‍ನ ಹೆಸರನ್ನೆ ಬದಲಿಸಿ ಕೊರೊನ ಕಫ್ರ್ಯೂ ಎಂಬ ಹೊಸ ನಾಮಾಕರಣದೊಂದಿಗೆ ಲಾಕ್‍ಡೌನ್ ಹೇರಿತು' ಎಂದು ಟೀಕಿಸಿದರು.

`ಬಡಜನರಿಗೆ ಕನಿಷ್ಠ 10ಕೆ.ಜಿ ಉಚಿತ ಅಕ್ಕಿ ನೀಡಿ ಎಂದು ಒತ್ತಾಯಿಸಿದ್ದೆ, ಆದರೆ, ಬಿಜೆಪಿ ಸರಕಾರ ನಮ್ಮ ಕಾಲದಲ್ಲಿ ನೀಡುತ್ತಿದ್ದ 7ಕೆ.ಜಿ ಅಕ್ಕಿಯನ್ನೇ ಕಡಿತ ಮಾಡಿ ರಾಜ್ಯದ ಜನ ಹಸಿವಿನಿಂದ ಬಳಲುವಂತೆ ಮಾಡಿತು. ಇದನ್ನೆಲ್ಲಾ ಸರಕಾರದ ಸಾಧನೆ ಎಂದು ಕರೆಯಬೇಕೋ ಅಥವಾ ವೈಫಲ್ಯವೆಂದು ಕರೆಯಬೇಕೋ? ನಮ್ಮ ಸರಕಾರ ಜಾರಿಗೊಳಿಸಿದ್ದ ಜನಪರ ಯೋಜನೆಗಳಿಗೆ ಹಣ ನೀಡುತ್ತಿಲ್ಲ, ಹೊಸ ಯೋಜನೆಗಳನ್ನೂ ಘೋಷಿಸುತ್ತಿಲ್ಲ. ಮಾತ್ತೆತ್ತಿದರೆ ಕೊರೊನ ನಿರ್ವಹಣೆಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ಕೊರೊನ ನಿರ್ವಹಣೆಗೆ ರಾಜ್ಯ ಬಿಜೆಪಿ ಸರಕಾರ ಖರ್ಚು ಮಾಡಿರುವ ಒಟ್ಟು ಹಣ 4 ಸಾವಿರ ಕೋಟಿ ರೂ.ಅಷ್ಟೇ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

ತುಪ್ಪ ತಿಂದವರು ಯಾರು: `ಸಿದ್ದರಾಮಯ್ಯನವರ ಸರಕಾರ ಸಾಲ ಮಾಡಿದೆ ಎನ್ನುತ್ತಾರೆ. ನಮ್ಮ 5 ವರ್ಷದ ಆಡಳಿತದಲ್ಲಿ ಮಾಡಿದ ಒಟ್ಟು ಸಾಲ 1.25 ಲಕ್ಷ ಕೋಟಿ ರೂ., ನಾನು ಅಧಿಕಾರದಿಂದ ಇಳಿಯುವಾಗ ಇದ್ದ ರಾಜ್ಯದ ಒಟ್ಟು ಸಾಲ 2.42 ಲಕ್ಷ ಕೋಟಿ ರೂ., ಈ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.57 ಲಕ್ಷ ಕೋಟಿ ರೂ. ಈಗ ಹೇಳಿ ಸಾಲ ಮಾಡಿ ತುಪ್ಪ ತಿಂದವರು ಯಾರು ಎಂದು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

`ಬಿಜೆಪಿ ಸರಕಾರದ ಅವಧಿಯಲ್ಲಿ ಬದ್ಧತಾ ಖರ್ಚುಗಳು ರಾಜ್ಯದ ಆದಾಯದಕ್ಕಿಂತ 17ಸಾವಿರ ಕೋಟಿ ರೂ.ಹೆಚ್ಚಿದೆ. ನೌಕರರ ಸಂಬಳ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಪಿಂಚಣಿ ಹಣ ನೀಡಲು ಸಾಲ ಮಾಡಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ರಾಜಸ್ವ ಕೊರತೆಯ ಸ್ಥಿತಿ ಎದುರಾಗಿರುವುದು ಇದೇ ಮೊದಲು' ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಅಮಾನವೀಯ ಮನುಷ್ಯ ಮೋದಿ: `ಕೊರೊನ ರೋಗಕ್ಕೆ ಬಳಸುವ ಔಷಧಿಗಳ ಮೇಲೂ ಜಿಎಸ್‍ಟಿ ಹಾಕಿದಂತಹ ಅಮಾನವೀಯ ಮನುಷ್ಯ ಪ್ರಧಾನಿ ಮೋದಿ. ಇದನ್ನು ಬಿಎಸ್‍ವೈ ಅವರಾಗಲೀ, ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರಾಗಲೀ ಯಾವತ್ತಾದರೂ ಪ್ರಶ್ನಿಸಿದ್ದಾರೆಯೇ? ಇಲ್ಲಿ ರಾಜಾಹುಲಿ, ಮೋದಿಯವರ ಮುಂದೆ ಇಲಿ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

`ಗುಜರಾತ್‍ನಲ್ಲಿ, ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಬಂದರೆ ಪ್ರಧಾನಿ ಮೋದಿ ಓಡೋಡಿ ಹೋಗುತ್ತಾರೆ. ಆದರೆ ಕರ್ನಾಟಕ ರಾಜ್ಯ ಎರಡು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಪ್ರಧಾನಿ ಮೋದಿ ಸೌಜನ್ಯಕ್ಕಾದರೂ ಒಮ್ಮೆ ಬಂದು ಹೋಗಬಹುದಿತ್ತಲ್ಲವೇ? ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು 15ನೆ ವೇತನ ಆಯೋಗ ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ 5,495 ಕೋಟಿ ರೂ.ವಿಶೇಷ ಅನುದಾನವನ್ನು ತಿರಸ್ಕರಿಸಿದರು. ಡಬಲ್ ಇಂಜಿನ್ ಸರಕಾರ ಬಂದರೆ ಸ್ವರ್ಗ ಸೃಷ್ಟಿಸುತ್ತೇವೆ ಎಂದಿದ್ದರು, ಇದಾ ಸ್ವರ್ಗ?' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

`ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ. ರಾಜ್ಯಕ್ಕೆ ನಿರ್ಮಲಾ ಸೀತಾರಾಮನ್ ಅವರು ಬಂದಾಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿ ಎಂದರೆ ಬೆಲೆ ನಿಯಂತ್ರಣ ನಮ್ಮ ಕೈಲಿಲ್ಲ ಎಂದು ಜಾರಿಕೊಂಡರು. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಪೆಟ್ರೋಲ್, ಗ್ಯಾಸ್ ಬೆಲೆ ತುಸು ಹೆಚ್ಚಾದರೂ ಬೀದಿಗಿಳಿಯುತ್ತಿದ್ದವರು ಇವರೇ ಅಲ್ಲವೇ?. ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲೆ 9 ರೂ., ಡೀಸೆಲ್ ಮೇಲೆ 3.82 ರೂ.ಅಬಕಾರಿ ಸುಂಕ ಇತ್ತು. ಈಗ ಮೋದಿ ಸರಕಾರ ಪೆಟ್ರೋಲ್ ಮೇಲೆ 32 ರೂ.ಹಾಗೂ ಡೀಸೆಲ್ ಮೇಲೆ 33 ರೂ.ಅಬಕಾರಿ ಸುಂಕ ವಿಧಿಸುತ್ತಿದೆ' ಎಂದು ದೂರಿದರು.

`ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಅಧಿವೇಶನವನ್ನೇ ಮಾಡಿಲ್ಲ, 371(ಜೆ) ಅಡಿ ಹೈದ್ರಾಬಾದ್ ಕರ್ನಾಟದ ಅಭಿವೃದ್ಧಿಗೆ ನೀಡಬೇಕಿದ್ದ ಅನುದಾನವನ್ನು 1 ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದರೆ ಸಾಕೆ? ಕರ್ನಾಟಕ ಕಲ್ಯಾಣವಾಗುವುದು ಬೇಡವೇ?' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 

`ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಅಡುಗೆ ಅನಿಲ ಬೆಲೆ 413 ರೂ. ಇತ್ತು, ಈಗ ಮೋದಿ ಅವರ ಅಚ್ಚೇದಿನ್‍ನ ಪರಿಣಾಮ ಅಡುಗೆ ಅನಿಲ ಬೆಲೆ 815 ರೂ.ಆಗಿದೆ. ದೇಶದ ಜನ ಬಡವರಾಗುತ್ತಿದ್ದಾರೆ, ಆದರೆ ಮೋದಿಯವರ ಆಪ್ತ ವಲಯದವರ ಆಸ್ತಿ ದುಪ್ಪಟ್ಟಾಗುತ್ತಿದೆ. 2019-20ರ ಪ್ರವಾಹದಿಂದ 69ಲಕ್ಷ ಎಕರೆ ಬೆಳೆ ನಷ್ಟ ಆಗಿದೆ. ರೈತರಿಗೆ ನೀಡಬೇಕಾದ ಪರಿಹಾರ 35 ಸಾವಿರ ಕೋಟಿ ರೂ.ಎಂದು ಸರಕಾರ ಅಂದಾಜು ಮಾಡಿ ಈ ವರೆಗೆ 2,500 ಕೋಟಿ ರೂ.ಪರಿಹಾರ ನೀಡಿದೆ. ಉಳಿದ ಪರಿಹಾರದ ಹಣ ಸಂತ್ರಸ್ತರನ್ನು ತಲುಪಲು ಇನ್ನು ಎಷ್ಟು ಶತಮಾನಗಳು ಬೇಕು'

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

`ಸ್ವಾತಂತ್ರ್ಯ ಬಂದ ನಂತರದಿಂದ 2014ರವರೆಗೆ ಭಾರತದ ಒಟ್ಟು ಸಾಲ 53 ಲಕ್ಷ ಕೋಟಿ ರೂ.ಇತ್ತು, ಮೋದಿ ಅವರ 6 ವರ್ಷಗಳ ಆಡಳಿತದಲ್ಲಿ ಮಾಡಿರುವ ಸಾಲ 82 ಲಕ್ಷ ಕೋಟಿ ರೂ. ಈಗ ದೇಶದ ಮೇಲಿರುವ ಒಟ್ಟು ಸಾಲ 135 ಲಕ್ಷ ಕೋಟಿ ರೂ. ಇದನ್ನೇ ಅಚ್ಚೇದಿನ್ ಎಂದು ಕರೆಯುವುದಾದರೆ ನನ್ನ ಅಭ್ಯಂತರವಿಲ್ಲ'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ


`ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಜನಪರ ಆಡಳಿತ ನೀಡುವೆ ಎಂದು ಹೇಳಿದ್ದಾರೆ. ಇದೀಗ ನಾನು ಏನೂ ಹೇಳುವುದಿಲ್ಲ, ಮುಂದೆ ನೋಡೋಣ. ಅವರ ತಂದೆ ನಮ್ಮ ಆತ್ಮೀಯರಾಗಿದ್ದರು, ಇವರಲ್ಲ. ಅವರು ರಾಷ್ಟ್ರೀಯವಾದಿಯಾಗಿದ್ದಾಗ ಬಾಂಧವ್ಯ ಇತ್ತು. ಕೋಮುವಾದಿ ಪಕ್ಷ ಸೇರಿದ ಮೇಲೆ ನಮ್ಮ ರಾಜಕೀಯ ಬಾಂಧವ್ಯ ಕಡಿದುಹೋಗಿದೆ. ಹಿಂದಿನ ವರ್ಷ ಸೂಕ್ತ ನೆರೆ ಪರಿಹಾರ ಸಿಕ್ಕಿಲ್ಲ. ಮೊನ್ನೆ ಬೆಳಗಾವಿಗೆ ತೆರಳಿದ್ದಾಗ ಜನರೇ ನೋವು ತೋಡಿಕೊಂಡಿದ್ದಾರೆ'

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News