ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೆ ಹೆಮ್ಮೆಯಿಂದ ಕೆಲಸ ಮಾಡುವೆ: ಕೋಟ ಶ್ರೀನಿವಾಸ ಪೂಜಾರಿ

Update: 2021-07-29 15:08 GMT

ಬೆಂಗಳೂರು, ಜು. 29: `ನನ್ನ ಕೆಲಸವನ್ನು ಮೆಚ್ಚಿ ಪಕ್ಷದ ವರಿಷ್ಠರು ಹಾಗೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನೇತೃತ್ವದ ಸಚಿವ ಸಂಪುಟದಲ್ಲಿ ತನಗೆ ಅವಕಾಶ ನೀಡಿದರೆ ಅತ್ಯಂತ ಹೆಮ್ಮೆಯಿಂದ ಕಾರ್ಯನಿರ್ವಹಿಸುತ್ತೇನೆ' ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿ ಜಗ್ನನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಹೊಸ ಸಂಪುಟದಲ್ಲಿ ಯಾರು ಸಚಿವರಾಗಬೇಕೆಂದು ವರಿಷ್ಠರು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀರ್ಮಾನ ಮಾಡಲಿದ್ದಾರೆ. ಉತ್ತಮ ಸಚಿವ ಸಂಪುಟ ರಚನೆ ಮಾಡಲಿದ್ದಾರೆಂಬ ವಿಶ್ವಾಸವಿದೆ ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬಂದು ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಉತ್ತಮ ತಂಡದ ಅಗತ್ಯವಿದೆ. ಹೀಗಾಗಿ ಪ್ರಾದೇಶಿಕತೆ, ಸಾಮಾಜಿಕ ನ್ಯಾಯವನ್ನು ಆಧರಿಸಿ ಸಂಪುಟದಲ್ಲಿ ಸಚಿವರನ್ನು ಆಯ್ಕೆ ಮಾಡಲಿದ್ದಾರೆ. ನೂತನ ಸಂಪುಟದಲ್ಲಿ ಇರಬೇಕೆಂಬ ಅಭಿಲಾಸೆ ಎಲ್ಲರಿಗೂ ಇರುತ್ತದೆ. ಬಿಎಸ್‍ವೈ ಸಂಪುಟದಲ್ಲಿ ಅವಕಾಶ ನೀಡಲಾಗಿತ್ತು. ನನ್ನ ಎರಡು ಇಲಾಖೆಯಲ್ಲಿ ಪಾರದರ್ಶಕ ಆಡಳಿತ ನೀಡಿ, ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಿದ್ದೇನೆ' ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News