ಸರಕಾರ ಎಲ್ಲಿ ಎಲ್ಲಿ ಎಂದು ಜನ ಕೇಳುತ್ತಿದ್ದಾರೆ: ಕಾಂಗ್ರೆಸ್ ಟೀಕೆ
ಬೆಂಗಳೂರು, ಜು.29: ಇಷ್ಟು ದಿನ ಯಾವುದೇ ರಾಜ್ಯ ಬಿಜೆಪಿ ನಾಯಕರನ್ನ ಎಲ್ಲಿದ್ದೀರಿ ಎಂದು ಕೇಳಿದರೆ ದಿಲ್ಲಿ ದಿಲ್ಲಿ ದಿಲ್ಲಿ ಎನ್ನುತ್ತಿದ್ದರು. ಈಗ ಖಾತೆ ಆಸೆಗಾಗಿ, ಸಿಎಂ ಮನೆ ಮುಂದೆ ನಿಂತು ಇಲ್ಲಿ ಇಲ್ಲಿ ಇಲ್ಲಿ ಎನ್ನುತ್ತಿದ್ದಾರೆ. ನೆರೆಯಿಂದ ನೊಂದ ರಾಜ್ಯದ ಜನರು ಮಾತ್ರ ಸರಕಾರವನ್ನ ಎಲ್ಲಿ ಎಲ್ಲಿ ಎಲ್ಲಿ. ಎಂದು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಕಾಂಗ್ರೆಸ್, ಕಳೆದ ಪ್ರವಾಹಗಳಿಂಗಿಂತ ಈ ಭಾರಿಯ ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಭೀಕರ, ಲಾಕ್ಡೌನ್ನಿಂದ ಆದಾಯದ ಮೂಲವನ್ನ ಕಳೆದುಕೊಂಡ ಜನತೆಗೆ ನೆರೆ ದೊಡ್ಡ ಆಘಾತ ತಂದಿದೆ. ಸಂತ್ರಸ್ತರ ಕೈಯ್ಯಲ್ಲಿ ಹಣವಿಲ್ಲ, ತಕ್ಷಣದ ಪರಿಹಾರವಾಗಿ 10,000 ರೂ.ಗಳ ನೆರವು ನೀಡುವುದು ಅತ್ಯಗತ್ಯ. ಸಂಪುಟ ಸರ್ಕಸ್ಸಿನಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಗಮನಿಸುವರೇ? ಎಂದು ಪ್ರಶ್ನಿಸಿದೆ.
ಮಳೆ ಕಡಿಮೆಯಾದರೂ ನೆರೆ ಕಡಿಮೆಯಾಗದೆ ಜನ ತೀವ್ರ ಸಂಕಷ್ಟದಲ್ಲಿದ್ದಾರೆ, ಸಂತ್ರಸ್ತರತ್ತ ಒಬ್ಬನೇ ಒಬ್ಬ ಸರಕಾರದ ಪ್ರತಿನಿಧಿಯೂ ಹೋಗುತ್ತಿಲ್ಲ, ಈ ಹೊತ್ತಿನಲ್ಲಿ ಸಂತ್ರಸ್ತರು ಆರ್ಥಿಕ ನಿರೀಕ್ಷೆಯಲ್ಲಿದ್ದಾರೆ, ಆದರೆ ಬಿಜೆಪಿಗರು ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದಾರೆ, ಸಿಎಂ ಹೈಕಮಾಂಡ್ ಆದೇಶದ ನಿರೀಕ್ಷೆಯಲ್ಲಿದ್ದಾರೆ. ಜನರನ್ನ ಕೇಳುವವರಾರು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಾಯಕತ್ವ ಬದಲಾವಣೆಯಿಂದ ಬಿಜೆಪಿ/ಬಿಜೆಪಿ ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. ಜಗದೀಶ್ ಶೆಟ್ಟರ್ ಮುನಿಸಿಕೊಂಡಿದ್ದಾರೆ, ಕೆ.ಎಸ್.ಈಶ್ವರಪ್ಪ ಸೆಟೆದು ಕುಳಿತಿದ್ದಾರೆ. ಸಂಪುಟ ರಚನೆ ಮುಗಿಯುವಷ್ಟರಲ್ಲಿ ಮತ್ತೊಂದಿಷ್ಟು ಬಂಡಾಯಗಾರರು ಸೃಷ್ಟಿಯಾಗುತ್ತಾರೆ, ಒಟ್ಟಿನಲ್ಲಿ ರಾಜ್ಯ ಬಿಜೆಪಿ ಪಕ್ಷದಿಂದ ಸ್ಥಿರ ಸರಕಾರ ಮರೀಚಿಕೆ ಅಷ್ಟೇ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯದಲ್ಲಿ ಸುಮಾರು 1.70 ಲಕ್ಷದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದ ವರದಿ ಅತೀ ಆತಂಕಕಾರಿ. ಇದು ಬಾಲಕಾರ್ಮಿಕರನ್ನ, ಬಾಲ್ಯವಿವಾಹವನ್ನ ಹೆಚ್ಚುಗೊಳಿಸುತ್ತದೆ ಹಾಗೂ ರಾಜ್ಯದ ಶೈಕ್ಷಣಿಕ ದರ ಕುಸಿತಕ್ಕೆ ಕಾರಣವಾಗಲಿದೆ. ಈ ಗಂಭೀರ ಹಾಗೂ ಸೂಕ್ಷ್ಮ ಕಾಲದಲ್ಲಿ ರಾಜ್ಯ ಬಿಜೆಪಿ ರಾಜಕೀಯದಾಟ ಆಡುತ್ತಿದೆ, ಜನರ ಕಾಳಜಿಯನ್ನು ಕೋರ್ಟ್ ವಹಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಪಕ್ಷಕ್ಕಾಗಿ, ದೇಶಕ್ಕಾಗಿ ಬದುಕು ಸವೆಸಿದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಪಕ್ಷ ಸಂಘಟಿಸುವ ಸಂಸ್ಕೃತಿ ನಮ್ಮಲ್ಲಿದೆ. ನೀವು ಅಡ್ವಾಣಿ, ಮುರಳಿ ಮನೋಹರ್ ಜೋಶಿಯವರನ್ನ ಮೂಲೆಗೆ ಕೂರಿಸಿದಂತೆ ನಮ್ಮಲ್ಲಿಲ್ಲ. ಹೇಡಿ ಫೆಕೇಂದ್ರ ನಿಗೆ ತಾಕತ್ತಿದ್ದರೆ ಒಂದೇ ಒಂದು ಪತ್ರಿಕಾಗೋಷ್ಠಿ ಹಾಗೂ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಲು ಹೇಳಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಪಕ್ಷಕ್ಕಾಗಿ, ದೇಶಕ್ಕಾಗಿ ಬದುಕು ಸವೆಸಿದ @kharge ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಪಕ್ಷ ಸಂಘಟಿಸುವ ಸಂಸ್ಕೃತಿ ನಮ್ಮಲ್ಲಿದೆ.
— Karnataka Congress (@INCKarnataka) July 29, 2021
ನೀವು ಅಡ್ವಾಣಿ, ಮು.ಮ ಜೋಶಿಯವರನ್ನ ಮೂಲೆಗೆ ಕೂರಿಸಿದಂತೆ ನಮ್ಮಲ್ಲಿಲ್ಲ.
ಹೇಡಿ #ಫೆಕೇಂದ್ರ ನಿಗೆ ತಾಕತ್ತಿದ್ದರೆ ಒಂದೇ ಒಂದು ಪತ್ರಿಕಾಗೋಷ್ಠಿ ಹಾಗೂ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಲು ಹೇಳಿ. pic.twitter.com/uzuOOm9XC8