ಮುಖ್ಯಮಂತ್ರಿಯಾಗಬೇಕೆಂದು ನಾನು ಗಡ್ಡ ಬಿಟ್ಟಿಲ್ಲ: ಸಿ.ಟಿ.ರವಿ

Update: 2021-08-01 17:14 GMT

ಚಿಕ್ಕಮಗಳೂರು, ಆ.1: ನಾನಂತೂ ಮುಖ್ಯಮಂತ್ರಿಯಾಗಬೇಕೆಂದು ಗಡ್ಡ ಬಿಟ್ಟಿಲ್ಲ. ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡವನ್ನು ಬಿಡುತ್ತಾ ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. 

ಗಡ್ಡಧಾರಿ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಜಯಪುರದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನಂತೂ ಮುಖ್ಯಮಂತ್ರಿಯಾಗಬೇಕೆಂದು ಗಡ್ಡ ಬಿಟ್ಟಿಲ್ಲ. ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡವನ್ನು ಬಿಡುತ್ತಾ ಬಂದಿದ್ದೇನೆ. ಅದು ನನ್ನ ಐಡೆಂಟಿಟಿ ಎಂದು ತಿಳಿಸಿದರು. 

ಮೈಲಾರಲಿಂಗೇಶ್ವರರು ಗಡ್ಡದಾರಿ ಸಿಎಂ ಆಗುತ್ತಾರೆ ಎಂದು ಹೇಳಿದರೆ ಇನ್ನು ಮುಂದೆ ಯಾರ್ಯಾರು ಮುಖ್ಯಮಂತ್ರಿಯಾಗಬೇಕೆಂದು ಆಸೆ ಇಟ್ಟುಕೊಂಡಿದ್ದಾರೋ ಅವರೆಲ್ಲರೂ ಮುಂದೆ ಗಡ್ಡ ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಆಗಲು ಯೋಗ ಇರಬೇಕು.

ಮುಖ್ಯಮಂತ್ರಿ ಆಗಲು ಯೋಗ ಇರಬೇಕು. ಬಸವರಾಜ ಬೊಮ್ಮಾಯಿ ಅವರಿಗೆ ಯೋಗ ಕೂಡಿ ಬಂದಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.

ಬೊಮ್ಮಾಯಿ ಅವರು ನನ್ನ ಸ್ನೇಹಿತರು. ಅವರು ರಾಜ್ಯದ ಹಿತಕ್ಕೆ ಮಾಡುವ ಎಲ್ಲ ಒಳ್ಳೆಯ ಕೆಲಸಗಳಿಗೆ ನಮ್ಮ ಬೆಂಬಲ ಇದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಅಭಿವೃದ್ಧಿಯ ಎಲ್ಲಾ ಕೆಲಸಗಳಿಗೆ ಸದಾ ಕಾಲ ಅವರಿಗೆ ಸಹಕಾರ ನೀಡುತ್ತೇನೆ ಎಂದರು.

ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಸಿಎಂ ಇನ್ನು ಎರಡು-ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ ಎರಡನ್ನು ಕಾಪಾಡಿಕೊಂಡು ಸಚಿವ ಸಂಪುಟವನ್ನು ವಿಸ್ತರಣೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News