ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿ ಇರಲಿ: ಬಿಎಸ್‍ವೈ ವಿರುದ್ಧ ಯತ್ನಾಳ್ ಪರೋಕ್ಷ ಆಕ್ರೋಶ

Update: 2021-08-02 12:13 GMT

ವಿಜಯಪುರ, ಆ. 2: `ಯಾರು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅಡೆತಡೆ ಮಾಡಿದರೂ ಅವರ ರಾಜಕೀಯ ಭವಿಷ್ಯ ಮುಗಿದಿದೆ. ಪಾಪ ಅವರು ವಿಶ್ರಾಂತಿ ಪಡೆದುಕೊಳ್ಳಲಿ. ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿ ಇರಲಿ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಲೇವಡಿ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಆದರೆ, ಹೈಕಮಾಂಡ್ ನನಗೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದೇನೆ. ನನಗೆ ಕರ್ನಾಟಕದ ಸಿಎಂ ಆಗಿ ಕೆಲಸ ಮಾಡುವ ತಾಕತ್ತು ಇದೆ. ನನ್ನನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ನನ್ನ ಸದುಪಯೋಗ ಮಾಡಿಕೊಂಡರೆ ಮುಂದಿನ ಬಾರಿ ರಾಜ್ಯದಲ್ಲಿ 150 ಸ್ಥಾನಗಳು ಬರುತ್ತದೆ' ಎಂದು ನುಡಿದರು.

`ವಿಜಯಪುರಕ್ಕೆ ಈ ಬಾರಿ ಅನ್ಯಾಯ ಆಗುವುದಿಲ್ಲ, ಯಡ್ಡಿಯೂರಪ್ಪ ಅವರ ಮನೆಯಲ್ಲಿ ಈಗಾಗಲೇ ಒಬ್ಬರು ಇದ್ದಾರೆ. ಎಷ್ಟು ಜನರಿಗೆ ಎಂದು ಕೊಡುವುದು. ಒಂದು ಮನೆಯಲ್ಲಿ ಎಷ್ಟು ಜನ ಎಂಎಲ್‍ಎ, ಎಂಪಿ ಆಗಬೇಕು ಎಂದು ಹೈಕಮಾಂಡ್‍ಗೆ ಗೊತ್ತಿದೆ. ಈ ಅನುವಂಶಿಕವನ್ನು ಮುಂದುವರಿಸಬಾರದೆಂದು ಯಡ್ಡಿಯೂರಪ್ಪ, ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ಅವರಿಗೂ ಬೆನ್ನಿಗೆ ಚೂರಿ ಹಾಕದೆ ಇದ್ದರೆ ಸಾಕು' ಎಂದು ಯತ್ನಾಳ್ ಟೀಕಿಸಿದರು.

`ವಿಜಯಪುರದಿಂದ ಬಾಗಲಕೋಟೆ ವರೆಗೆ ಕೆ.ಎಸ್.ಈಶ್ವರಪ್ಪ ಜೊತೆ ಪ್ರಯಾಣ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂಬರುವ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ, ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಗೆಲ್ಲಿಸುವ ಬಗ್ಗೆ ಚರ್ಚಿಸಿದ್ದೇವೆ. ಭ್ರಷ್ಟರಿಗೆ ಹೊಗಳ ಭಟ್ಟರಿಗೆ ಇಟ್ಟುಕೊಂಡರೆ ಮುಂದಿನ ಚುನಾವಣೆಯಲ್ಲಿ ಕಷ್ಟವಾಗಲಿದೆ' ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.

`ನಿನ್ನ ಹಠ ಸಾಧಿಸ್ತಿದ್ದಿಯಾ, ಇನ್ನು ಮುಂದೆ ಎಲ್ಲರು ಪಕ್ಷ ಕಟ್ಟೋಣ. ಬಹಿರಂಗವಾಗಿ ಹೇಳಿಕೆ ಕೊಡಬೇಡ ಎಂದು ನನಗೆ ಸಲಹೆ ನೀಡಿದರು. ಅವರು ಹಿರಿಯರು ಅವರ ಮಾತಿಗೆ ನಾನು ಒಪ್ಪಿದ್ದೇನೆ. ಅಲ್ಲದೆ, ಯಡ್ಡಿಯೂರಪ್ಪನವರು ಗೌರವಯುತವಾಗಿ ನಿರ್ಗಮನ ಆಗಿದ್ದಾರೆ. ಹೈಕಮಾಂಡ್ ಅವರಿಗೆ ಬಹಳ ಗೌರವ ಕೊಟ್ಟು ಪ್ರಧಾನಿ ಮೋದಿ, ರಾಷ್ಟ್ರೀಯಾಧ್ಯಕ್ಷ ನಡ್ಡಾ, ಅಮಿತ್ ಶಾ ಅವರು ಅವರಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

ನೀವು ಸಾಕಷ್ಟು ಕಷ್ಟ ಪಟ್ಟಿದ್ದೀರಿ. ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ. ಈಗ ನೀವು ಸ್ವಂತ ಹೆಲಿಕಾಪ್ಟರ್‍ನಲ್ಲಿ ತಿರುಗಾಡುವಂತಹ ಶಕ್ತಿ ಬಿಜೆಪಿಯಿಂದ ಸಿಕ್ಕಿದೆ. ಬಿಜೆಪಿ ಋಣ ಬಹಳ ಇದೆ. ಅದಕ್ಕೆ ನಿಮ್ಮ ನಿವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಎಂದು ಸಂದೇಶದೊಂದಿಗೆ ಸ್ಪಷ್ಟವಾದ ಸಂಕೇತ ಕೊಟ್ಟಿದೆ' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.

`ಬಸವರಾಜ ಬೊಮ್ಮಾಯಿ ಅವರ ಆಯ್ಕೆ ಯಡ್ಡಿಯೂರಪ್ಪನವರದು. ಬೊಮ್ಮಾಯಿ ಅವರಿಗೂ ಬೆಂಬಲ ಕೊಡಲಿಲ್ಲ ಎಂದರೆ, ಇವರು ಯಾರನ್ನು ಸಹಿಸುವುದಿಲ್ಲ. ಇವರು ಮುಂದೆ ತಮ್ಮ ಮಗನನ್ನೇ ಉತ್ತರಾಧಿಕಾರಿಯಾಗಿ ಮಾಡಲು ಬೊಮ್ಮಾಯಿ ಅವರನ್ನು ತಾತ್ಕಾಲಿವಾಗಿ ತಯಾರಿ ಮಾಡಿದ್ದಾರೆಂಬ ಸಂಶಯ ಬರಲು ಪ್ರಾರಂಭವಾಗುತ್ತೆ' ಎಂದು ಯತ್ನಾಳ್, `ನಿನ್ನೆ ದೇವೆಗೌಡರು ಬೊಮ್ಮಾಯಿ ಸರಕಾರಕ್ಕೆ ಏನಾದರೂ ತೊಂದರೆ ಆದರೆ, ನಾವು ಬೆಂಬಲಕೊಡುತ್ತೇವೆ ಎಂದಿದ್ದಾರೆ. ಯಡ್ಡಿಯೂರಪ್ಪ ಜೊತೆ 10-20 ಜನರು ಹೋಗುತ್ತೀವಿ ಎಂದರೆ, ಜೆಡಿಎಸ್ ಬೆಂಬಲ ಇದೆ. ಇದು ಕೇಂದ್ರದ ಸೂಚನೆಯ ಮೇರೆಗೆ ಬೊಮ್ಮಾಯಿ ದೇವೆಗೌಡರನ್ನು ಭೇಟಿ ಮಾಡಿದ್ದಾರೆಂದು ನನಗೆ ಅನಿಸುತ್ತಿದೆ' ಎಂದು ಸಂಶಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News