ಕೋವಿಡ್ ಸಾವುಗಳಿಗೆ ಆಡಳಿತ ಪಕ್ಷದ ನಾಯಕರ ಬೇಜವಾಬ್ದಾರಿ ಕಾರಣ: ಸಿದ್ದರಾಮಯ್ಯ

Update: 2021-08-03 13:58 GMT

ಬೆಂಗಳೂರು, ಆ.3: ರಾಜ್ಯದಲ್ಲಿ ಕೇವಲ 36 ಸಾವಿರ ಜನ ಕೊರೋನದಿಂದ ಸಾವಿಗೀಡಾಗಿದ್ದಾರೆ ಎಂದು ಸರಕಾರ ಸುಳ್ಳು ಹೇಳುತ್ತಿದೆ. ವಾಸ್ತವದಲ್ಲಿ ಸುಮಾರು 4 ಲಕ್ಷ ಮಂದಿ ಸತ್ತಿದ್ದಾರೆ. ಇಡೀ ದೇಶದಲ್ಲಿ ಕನಿಷ್ಠ 50 ಲಕ್ಷ ಮಂದಿ ಸತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೊರೋನ ರೋಗಕ್ಕೆ ತ್ವರಿತವಾಗಿ ಲಸಿಕೆ ನೀಡುವ ಬದಲು ಜನರಿಗೆ ಚಪ್ಪಾಳೆ ತಟ್ಟಲು, ಜಾಗಟೆ ಬಾರಿಸಲು ಹೇಳಿದರು. ವಿಜ್ಞಾನದ ಯುಗದಲ್ಲಿ ಇಂಥಾ ಮೌಢ್ಯ ಬಿತ್ತುವುದು ಎಷ್ಟು ಸರಿ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳವಾರ ಇಲ್ಲಿನ ಪದ್ಮನಾಭನಗರದಲ್ಲಿ ಆಯೋಜಿಸಿದ್ದ ಬಡವರಿಗೆ ದಿನಸಿ ಕಿಟ್‍ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನ ಎರಡನೇ ಅಲೆಯಲ್ಲಿ ಸಾವಿರಾರು ಜನ ಸಾವಿಗೀಡಾದರು. ಇದಕ್ಕೆ ಯಾರು ಕಾರಣ? ಅಧಿಕಾರದಲ್ಲಿರುವ ಪಕ್ಷದ ನಾಯಕರ ಬೇಜವಾಬ್ದಾರಿ ಕಾರಣವಾಗುತ್ತದೆ ಎಂದರು.

ಪದ್ಮನಾಭ ನಗರದಲ್ಲಿ ಕೊರೋನ ಸೋಂಕಿಗೆ ಯಾರಾದರೂ ಬಲಿಯಾಗಿದ್ದರೆ ಅದಕ್ಕೆ ಕ್ಷೇತ್ರದ ಶಾಸಕ ಆರ್.ಅಶೋಕ್ ಕಾರಣ. ಸರಕಾರದ ಭಾಗವಾಗಿ ಸಚಿವರಾಗಿ ಅವರು ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಕ್ಷೇತ್ರದಿಂದ ಗೆದ್ದಿದ್ದಾರೆ, ಕೊರೋನ ಸೋಂಕಿತರಿಗೆ ಆಹಾರ, ಔಷಧಿ, ಆಸ್ಪತ್ರೆ ಒದಗಿಸಬೇಕಾಗಿದ್ದು ಅವರ ಕರ್ತವ್ಯವಲ್ಲವೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಭೆ ಮಾಡಲು ಅಶೋಕ್ ಅವರ ಅನುಮತಿ ಪಡೆಯಬೇಕು ಅಂತಾರೆ, ಇದೇನು ಅಶೋಕ್ ಅವರ ಸ್ವಂತ ಸ್ವತ್ತೇ? ಇಂತಹಾ ಅಸಂಬದ್ಧ ವಿಷಯಗಳಿಗೆ ಪೊಲೀಸ್ ಇಲಾಖೆ ಸೊಪ್ಪು ಹಾಕಬಾರದು, ಇನ್ನು ಒಂದೂವರೆ ವರ್ಷ ಕಳೆದರೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಇದಕ್ಕೆಲ್ಲ ಉತ್ತರ ಕೊಡಬೇಕಾಗುತ್ತದೆ ಎಂದು ಅವರು ಹೇಳಿದರು.

ಬೆಂಗಳೂರಿನ ಬಹುತೇಕ ಕೇಂದ್ರಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಬಡಜನರಿಗೆ ನೆರವಾಗುವ ಕೆಲಸವನ್ನು ಮಾಡಿದ್ದಾರೆ, ಅದರಂತೆ ಇಂದು ನಮ್ಮ ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಪದ್ಮನಾಭ ನಗರದ ಬಡಜನರಿಗೆ ಉಚಿತ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹರಿಪ್ರಸಾದ್ ಅವರ ಜನಪರ ಕಾಳಜಿಗೆ ನನ್ನ ಧನ್ಯವಾದಗಳು ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಬಹುಕಾಲದಿಂದ ಬೆಂಗಳೂರಿನಲ್ಲಿ ರಾಜಕಾರಣ ಮಾಡಿದವರು ಹರಿಪ್ರಸಾದ್. ಅವರಿಗೆ ನಗರದ ಒಂದೊಂದು ಇಂಚು ಗೊತ್ತಿದೆ, ಅಷ್ಟರ ಮಟ್ಟಿಗೆ ಅರಿತಿದ್ದಾರೆ. ಆಡಳಿತ ಪಕ್ಷದವರಿಗಿಂತ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಕೊರೋನ ಕಾಲದಲ್ಲಿ ಬಡಜನರಿಗೆ ನೆರವಾಗಿದ್ದಾರೆ ಎಂಬುದು ಶ್ಲಾಘನೀಯ. ನಮ್ಮ ನಾಯಕಿ ಸೋನಿಯಾ ಗಾಂಧಿ, ರಾಜ್ಯದ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ, ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು.ಅಂದಿನಿಂದ ಇಡೀ ರಾಜ್ಯದ 224 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದೆ ಎಂದು ಅವರು ಹೇಳಿದರು.

ಬಡಜನರ ತೆರಿಗೆ ಹಣದಲ್ಲಿ ಬಡವರಿಗೆ ಉಚಿತ ಅಕ್ಕಿ ಕೊಡಲು ಸರಕಾರಕ್ಕೇನು ಸಮಸ್ಯೆ? ಬಡವರ ಹಣ ಯಾರಪ್ಪನ ಮನೆಯ ಸ್ವತ್ತಲ್ಲ, ಆ ಹಣವನ್ನು ಬಡವರಿಗಾಗಿಯೇ ಖರ್ಚು ಮಾಡುವುದರಲ್ಲಿ ಏನು ತಪ್ಪಿದೆ? ನಮ್ಮ ಸರಕಾರ ಅನ್ನಭಾಗ್ಯ ಯೋಜನೆಯಡಿ ಏಳು ಕೆ.ಜಿ ಅಕ್ಕಿ ಕೊಡುತ್ತಿದ್ದೆವು, ಈ ಬಿಜೆಪಿ ಸರಕಾರ ಅದಕ್ಕೆ ಕತ್ತರಿ ಹಾಕಿದೆ. ಇವರಿಗೆ ಬಡವರ ಅನ್ನ ಕಸಿಯುವ ಬುದ್ದಿ ಏಕೆ ಬಂದಿದೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಬಂದರೆ ಸ್ವರ್ಗ ಸೃಷ್ಟಿಯಾಗುತ್ತೆ ಎಂದಿದ್ದರು. ಯಡಿಯೂರಪ್ಪ ಅವರ  ಭ್ರಷ್ಟಾಚಾರ ಜಾಸ್ತಿಯಾದ ಕಾರಣ ಅಧಿಕಾರದಿಂದ ಕಿತ್ತು ಹಾಕಿದ್ದಾರೆ ಇದು ಸತ್ಯಸಂಗತಿ. ಆರ್.ಟಿ.ಜಿ.ಎಸ್ ಮೂಲಕ ಲಂಚ ಪಡೆದ ಭ್ರಷ್ಟ ರಾಜಕಾರಣಿ ಯಾರಾದ್ರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಈ ವಿಚಾರವನ್ನು ಹೇಳಲು ನಮ್ಮ ಕಾರ್ಯಕರ್ತರು ಹೆದರಬಾರದು ಎಂದು ಅವರು ತಿಳಿಸಿದರು.

ಯುವಕರಿಗೆ ಉದ್ಯೋಗ ಇಲ್ಲ, ಬಡತನ ಪ್ರಮಾಣ ಮಿತಿಮೀರಿದೆ, ಹಸಿವಿನಿಂದ ಸತ್ತವರ ಬಗ್ಗೆ, ದೇಶದ ಡಿ.ಜಿ.ಪಿ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ, ಅದನ್ನು ಬಿಟ್ಟು ಪಾಕಿಸ್ತಾನ, ರಾಮಮಂದಿರ ಮುಂತಾದ ಭಾವನಾತ್ಮಕ ವಿಚಾರಗಳ ಬಗ್ಗೆಯಷ್ಟೇ ಜನರ ಗಮನ ಸೆಳೆಯುತ್ತಾರೆ. ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ, ಏಳು ವರ್ಷದಲ್ಲಿ ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ. ಮೋದಿ ಮೋದಿ ಎಂದು ಕುಣಿಯುತ್ತಿದ್ದವರಿಗೆ ಮೋದಿಯವರು ಮೂರು ನಾಮ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬೊಮ್ಮಾಯಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವೇ?

ಯಡಿಯೂರಪ್ಪ ಅವರಿಗೆ ಮುಂಬಾಗಿಲ ಮೂಲಕ ರಾಜಕಾರಣ ಮಾಡಿಯೇ ಗೊತ್ತಿಲ್ಲ. ಆಪರೇಷನ್ ಕಮಲ, ಕುದುರೆ ವ್ಯಾಪಾರದಂತ ಹಿಂಬಾಗಿಲ ರಾಜಕಾರಣ ಮಾಡೋಕೆ ಮಾತ್ರ ಗೊತ್ತಿದೆ. ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿಸಿರುವುದೇ ಯಡಿಯೂರಪ್ಪ. ಹಾಗಾಗಿ ಬೊಮ್ಮಾಯಿಯವರು ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ರೀತಿ ಕೆಲಸ ಮಾಡದೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಾ ಇರಬೇಕು, ಅಪ್ಪ ಹಾಕಿದ ಆಲದ ಮರ ಎಂದು ನೇಣು ಹಾಕಿಕೊಳ್ಳೋಕೆ ಆಗುತ್ತಾ? ಹಾಗಾಗಿ ಮುಂದಿನ ಬಾರಿ ಜನರ ಹಿತ ಕಾಪಾಡಲು ವಿಫಲರಾಗಿರುವ ಅಶೋಕ್ ಅವರನ್ನು ಸೋಲಿಸಿ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಅಂತ ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ. ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಪಕ್ಷದ ಪರವಾಗಿ ಹಾಕುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಬಂಡವಾಳ ಶಾಹಿಗಳ ಪಕ್ಷ, ಕಾಂಗ್ರೆಸ್ ಬಡವರ ಪರವಾದ ಪಕ್ಷ. ಗರೀಭಿ ಹಠಾವೋ ಘೋಷಣೆ ಮಾಡಿದ್ದು ಇಂದಿರಾ ಗಾಂಧಿ,ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡಿದವರು ನೆಹರು, ದೂರಸಂಪರ್ಕ ಅಭಿವೃದ್ಧಿ ಮಾಡಿದವರು ರಾಜೀವ್ ಗಾಂಧಿ, ದೇಶಕ್ಕೆ ಬಿಜೆಪಿಯ ಕೊಡುಗೆ ಏನು? ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರೋದು ಬಿಜೆಪಿಯವರು ಎಂದು ಅವರು ಕಿಡಿಗಾರಿದರು.

ಕಳೆದ ಬಾರಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಹದಿನಾರು ಸ್ಥಾನ ಗೆದ್ದಿದ್ದೆವು, ಮುಂದಿನ ಬಾರಿ ಕನಿಷ್ಟ 25 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಹಾಗಾಗಿ ಪದ್ಮನಾಭ ನಗರದಲ್ಲಿ ಜನ ಬದಲಾವಣೆ ಮಾಡಬೇಕು. ಬಿಜೆಪಿ ಭ್ರಷ್ಟ ಪಕ್ಷ, ಈ ಪಕ್ಷದಿಂದ ಅಭಿವೃದ್ಧಿ ನಿರೀಕ್ಷೆ ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಂಸದ ಪ್ರೊ.ರಾಜೀವ್ ಗೌಡ, ಮುಖಂಡರಾದ ಶಿವಣ್ಣ, ವೆಂಕಟೇಶಮೂರ್ತಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News