ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಲಿ: ವಿ.ಸೋಮಣ್ಣ

Update: 2021-08-03 17:44 GMT

ಬೆಂಗಳೂರು, ಆ.3: ನಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕೆಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಂಗಳವಾರ ನಗರದ ಪ್ರೀಡಂ ಪಾರ್ಕ್‍ನಲ್ಲಿ ಹಸಿರು ಕರ್ನಾಟಕ ಪರಿಸರ ರಕ್ಷಣಾ ವೇದಿಕೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ಎಂ.ಹಾಲಪ್ಪ ನೆನಪಿನಾರ್ಥ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಆರೋಗ್ಯಕರವಾಗಿದ್ದರೆ ನಾವು ಆರೋಗ್ಯಕರವಾಗಿರಲು ಸಾಧ್ಯ ಎಂದರು.

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಪರಿಸರ ಬಗ್ಗೆ ಜಾಗೃತಿ ವಹಿಸದೆ ಹೋದರೆ ಮುಂದಿನ ದಿನಗಳು ಆತಂಕಕಾರಿಯಾಗಲಿವೆ. ಹೀಗಾಗಿ ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕೆಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಭೃಂಗೀಶ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿದರು. ಈ ವೇಳೆ ಪತ್ರಕರ್ತರಾದ ಗಂಡಸಿ ಸದಾನಂದ, ಹಸಿರು ಪರಿಸರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಜಯಣ್ಣ ಕಾರ್ಯಾಧ್ಯಕ್ಷರಾದ ಬಸವರಾಜ್ ಜಿ ವಿ ಟಿ ಬಸವರಾಜ್, ರಾಜ್ಯದ ಉಪಾಧ್ಯಕ್ಷರಾದ ಚಂದ್ರಶೇಖರ್ ಬೆಳಗುಂಬ ಹಾಲಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News