ಭಾರತದ ಜನಸಂಖ್ಯೆ: ಎರಡು ಸತ್ಯಗಳು

Update: 2021-08-03 19:30 GMT

ಒಬ್ಬ ದುಡಿಯುವ ವ್ಯಕ್ತಿಯ ಮೇಲೆ ಅಪ್ಪ, ಅಮ್ಮ, ತಾತ, ಅಜ್ಜಿ ಹೀಗೆ ನಾಲ್ವರು ಅವಲಂಬಿತರಾಗುವ ಪರಿಸ್ಥಿತಿ ಎದುರಾಗುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಜನರಿಗಾಗಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಈಗಾಗಲೇ ಚೀನಾದಲ್ಲಿ ಆ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಈಗ ಮೂರು ಮಕ್ಕಳನ್ನು ಪಡೆಯಲು ಉತ್ತೇಜನ ಕೊಡಲಾಗುತ್ತಿದೆ. ಭಾರತದಲ್ಲಿ ದಕ್ಷಿಣ ರಾಜ್ಯಗಳಿಗೆ ಅಂತಹ ಪರಿಸ್ಥಿತಿ ಉತ್ತರ ರಾಜ್ಯಗಳಿಗಿಂತ ಬೇಗನೆ ಬಂದೊದಗಲಿದೆ..

 ಉತ್ತರಪ್ರದೇಶದ ಯೋಗಿ ಸರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳ ಮೇಲೆ ಶಿಕ್ಷಾ ಕ್ರಮವನ್ನು ತೆಗೆದುಕೊಳ್ಳುವ ಯೋಜನೆಯನ್ನು ಘೋಷಿಸಿದೆ. ಅದನ್ನು ಅನುಸರಿಸಿ ಅಸ್ಸಾಮಿನ ಮುಖ್ಯಮಂತ್ರಿಯೂ ಕುಟುಂಬ ಶಿಕ್ಷಾ ಯೋಜನೆಯನ್ನೂ ಘೋಷಿಸಿದ್ದಾರೆ ಹಾಗೂ ಕರ್ನಾಟಕದಲ್ಲಿ ಸಿ.ಟಿ. ರವಿಯವರೂ ಸಹ ಅದೇ ರೀತಿ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಬಿಜೆಪಿ ಯೋಚಿಸುತ್ತಿದೆ ಎಂದು ಘೋಷಿಸಿದ್ದಾರೆ. ಆದರೆ ಇವೆಲ್ಲದರ ಹಿಂದೆ ಬರಲಿರುವ ಚುನಾವಣೆಯಯಲ್ಲಿ ಮುಸ್ಲಿಂ ಸಮುದಾಯವನ್ನು ದೇಶದ್ರೋಹಿ ಹಾಗೂ ದೇಶದ ಪ್ರಗತಿಗೆ ಕಂಟಕರೆಂದು ಬಿಂಬಿಸುವ ಉದ್ದೇಶ ಬಿಟ್ಟು ಬೇರೆ ಯಾವ ದೇಶಹಿತದ ಉದ್ದೇಶವೂ ಇಲ್ಲವೆಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಆದರೆ ಹಿಂದೂಪರವೆಂಬ ಹೆಸರಲ್ಲಿ ವೋಟ್‌ಬ್ಯಾಂಕ್ ಸೃಷ್ಟಿಸಿಕೊಂಡಿರುವ ಈ ಸರಕಾರಗಳ ಕುಟುಂಬ ಶಿಕ್ಷಾ ಕಾರ್ಯಕ್ರಮ ಮುಸ್ಲಿಮರಿಗಿಂತ ಹೆಚ್ಚಾಗಿ ಬಡ ದಲಿತ, ಹಿಂದುಳಿದ ಹಾಗೂ ಆದಿವಾಸಿಗಳನ್ನೇ ಶಿಕ್ಷಿಸಲಿದೆ. ಏಕೆಂದರೆ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ ಈ ದೇಶದ ಶೇ. 46 ಕುಟುಂಬಗಳಲ್ಲಿ ಶೇ. 83ರಷ್ಟು ಹಿಂದೂಗಳೇ ಹಾಗೂ ಅವರಲ್ಲಿ ಶೇ. 80ರಷ್ಟು ಬಡ ದಲಿತ, ಹಿಂದುಳಿದ ಸಮುದಾಯಗಳೇ ಆಗಿವೆ. (https://pbs.twimg.com/media/E6Ebn9iVgAUIZD3.jpg) ಅಷ್ಟು ಮಾತ್ರವಲ್ಲ. ಈ ಬಿಜೆಪಿಯ ಜನ ಒಮ್ಮೆಯಾದರೂ ಪಕ್ಷದ ಹಿತಕ್ಕಿಂತ ಹೆಚ್ಚು ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದರೆ:

- ಭಾರತವು ಜನಸಂಖ್ಯಾ ಸ್ಫೋಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲವೆಂದೂ, -ವಾಸ್ತವವಾಗಿ ಜನಸಂಖ್ಯಾ ಏರಿಕೆಯು ಭಾರತದ ಬಡತನಕ್ಕೆ ಕಾರಣವಲ್ಲ ಎಂಬುದೂ ಹಾಗೂ ಈಗ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಅದ್ಭುತ ಆರ್ಥಿಕ ಪ್ರಗತಿಯ ಅವಕಾಶವಿದೆಯೆಂಬುದೂ, - ಹಾಗೂ ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಗತಿ ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಜನಸಂಖ್ಯೆಯ ಏರಿಕೆಯ ಗತಿಗಿಂತ ತೀವ್ರವಾಗಿ ಕುಸಿಯುತ್ತಿರುವುದೂ ಸ್ಪಷ್ಟವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಭಾರತ ಸರಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯೂ ಭಾಗವಾಗಿರುವ ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇ (NFHS)ನ 3, 4 ಮತ್ತು 5ನೇ ಸುತ್ತಿನ ಸರ್ವೇಗಳು ಹಾಗೂ ಭಾರತದ 1991, 2001 ಹಾಗೂ 2011ರ ಜನಸಂಖ್ಯಾ ಸೆನ್ಸಸ್ ವರದಿಗಳೂ ಸ್ಪಷ್ಟಪಡಿಸುತ್ತವೆ.

ಭಾರತೀಯರ ಬಡತನಕ್ಕೆ ಜನಸಂಖ್ಯೆ ಕಾರಣವಲ್ಲ

ಮೊದಲನೆಯದಾಗಿ ಭಾರತದ ಬಡತನಕ್ಕೆ ಜನಸಂಖ್ಯೆ ಏರಿಕೆ ಕಾರಣವೇ ಎಂಬುದನ್ನು ನೋಡೋಣ:

1951ರಲ್ಲಿ ಭಾರತದ ಜನಸಖ್ಯೆ 36 ಕೋಟಿ ಇದ್ದರೆ ಈಗ 140 ಕೋಟಿಯಾಗಿದೆ. ಅಂದರೆ ಹೆಚ್ಚೂ ಕಡಿಮೆ 4 ಪಟ್ಟು ಹೆಚ್ಚಿದೆ. 1951ರಲ್ಲಿ ಭಾರತದ ಜಿಡಿಪಿ 2.52 ಲಕ್ಷ ಕೋಟಿ. ಈಗ ಭಾರತದ ಜಿಡಿಪಿ 200 ಲಕ್ಷ ಕೋಟಿ. ಅಂದರೆ ಭಾರತದ ಸಂಪತ್ತುಸ್ವಾತಂತ್ರ್ಯಾ ನಂತರದಲ್ಲಿ 83 ಪಟ್ಟು ಹೆಚ್ಚಿಗೆಯಾಗಿದೆ. ಅಂದರೆ, ಸ್ವಾತಂತ್ರ್ಯಾನಂತರದಲ್ಲಿ ಜನಸಂಖ್ಯೆ 4 ಪಟ್ಟು ಹೆಚ್ಚಾದರೂ ಭಾರತದ ಸಂಪತ್ತು 83 ಪಟ್ಟು ಹೆಚ್ಚಾಗಿದೆ. ಈ ಸಂಪತ್ತನ್ನು ಸೃಷ್ಟಿಸಿರುವವರು ಈ ದೇಶದ ಬಡಕಾರ್ಮಿಕರು, ರೈತರು, ಉದ್ಯೋಗಿಗಳೇ. ಆದರೂ ಅವರು ಬಡವರಾಗಿಯೇ ಉಳಿದಿರಲು ಸಂಪತ್ತಿನ ವಿತರಣೆಯಲ್ಲಿ ಬ್ರಾಹ್ಮಣವಾದಿ ಹಾಗೂ ಬಂಡವಾಳಶಾಹಿ ನೀತಿಗಳನ್ನು ಅನುಸರಿಸುತ್ತಿರುವುದು ಕಾರಣವೇ ಹೊರತು ಜನಸಂಖ್ಯೆ ಏರಿಕೆಯಲ್ಲ..

ಭಾರತದ ಜನಸಂಖ್ಯೆಯ ಏರಿಕೆಯ ದರ ಕುಸಿಯುತ್ತಿದೆ
ಜನಸಂಖ್ಯೆಯ ಕುರಿತಾದ ಮತ್ತೊಂದು ಅತಿದೊಡ್ಡ ಮಿಥ್ಯೆಯೆಂದರೆ ಜನಸಂಖ್ಯೆಯಲ್ಲಿ ಭಾರತವು ಇಡೀ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದ್ದು ಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ಸ್ಫೋಟಕ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಅದನ್ನು ಕೂಡಲೇ ನಿಯಂತ್ರಣದಲ್ಲಿಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು..ಇತ್ಯಾದಿ. ವಾಸ್ತವದಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಭಾರತದ ಜನಸಂಖ್ಯಾ ಏರಿಕೆಯ ದರ ಆರೋಗ್ಯಕರವಾಗಿ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚಾಗುತ್ತಿಲ್ಲ.. ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಫಲವಂತಿಕೆ ದರ (Total Fertility Rate- TFR) ಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶದಲ್ಲಿ-ಪ್ರದೇಶದಲ್ಲಿ ಒಬ್ಬ ಮಹಿಳೆ 18-49 ವಯಸ್ಸಿನ ನಡುವಿನ ತನ್ನ ಗರ್ಭಧಾರಣಾ ಅವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ ಎನ್ನುವ ಸರಾಸರಿ ಸಂಖ್ಯೆಯದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಟಿಎಫ್‌ಆರ್ ದರ 5.9. ಅಂದರೆ 1951ರ ವೇಳೆಗೆ ಭಾರತದ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ಕೊಡುತ್ತಿದ್ದರು ಎಂದರ್ಥ. ಅದೇ ರೀತಿ ಮುಂದುವರಿದಿದ್ದರೆ ಈಗ ಭಾರತದ ಜನಸಂಖ್ಯೆ 250-300 ಕೋಟಿಗೆ ತಲುಪಬೇಕಿತ್ತು. ಆದರೆ ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಎಲ್ಲೆಲ್ಲಿ ಅರಿವು, ಲಭ್ಯತೆ ಹಾಗೂ ಮಹಿಳೆಯ ಶಿಕ್ಷಣ ಹಾಗೂ ಸಬಲೀಕರಣ ಸಾಪೇಕ್ಷವಾಗಿ ಸಾಧ್ಯವಾಯಿತೋ ಅಲ್ಲೆಲ್ಲಾ ಬಹಳ ಬೇಗನೆ ಟಿಎಫ್‌ಆರ್ ದರ ಕುಸಿಯುತ್ತಾ ಬಂತು. 2015-16ರ NFHSನ ಅಂಕಿ-ಅಂಶದ ಪ್ರಕಾರ ಈಗ ಭಾರತದ ಸರಾಸರಿ ಟಿಎಫ್‌ಆರ್ ದರ 2.30ಗೆ ಕುಸಿದಿದೆ. ಅಂದರೆ 1951ಕ್ಕೆ ಹೋಲಿಸಿದರೆ ಜನಸಂಖ್ಯಾ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. (http://rchiips.org/nfhs/nfhs-4Reports/India.pdf)

ಟಿಎಫ್‌ಆರ್ ದರ ಕುಸಿಯಲು ಕಾರಣ ಮಹಿಳಾ ಸಬಲೀಕರಣವೇ ವಿನಾ ಕಾನೂನಲ್ಲ 

ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಲವಂತದ ಸಂತಾನಹರಣ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಅತಿರೇಕಗಳನ್ನು ಬಿಟ್ಟರೆ ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯು ಪ್ರಧಾನವಾಗಿ ಮನವರಿಕೆ, ಸೌಲಭ್ಯಗಳ ಒದಗಿಸುವಿಕೆ ಹಾಗೂ ಮಹಿಳೆಯ ಸಬಲೀಕರಣಗಳನ್ನು ಆಧರಿಸಿಯೇ ನಡೆಯುತ್ತಿದೆ. ಜಗತ್ತಿನಾದ್ಯಂತ ಎಲ್ಲಾ ಯಶಸ್ವಿ ಕುಟುಂಬ ನಿಯಂತ್ರಣಗಳ ಕಥನವೂ ಇದೇ ಮಾರ್ಗವನ್ನು ಅನುಸರಿಸಿದೆ. 1994ರಲ್ಲಿ ಕೈರೋದಲ್ಲಿ ನಡೆದ ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲೂ ಭಾರತ ಇದೇ ಮಾರ್ಗಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದೆ.

ಭಾರತದೊಳಗೆ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರುವ ಈ ಟಿಎಫ್‌ಆರ್ ದರವನ್ನು ಅವಲೋಕಿಸಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. 2015-16ರ NFHSನ ವರದಿಯ ಪ್ರಕಾರ ಭಾರತದ ಸರಾಸರಿ ಟಿಎಫ್‌ಆರ್ ದರ 2.3 ಆಗಿದ್ದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್..ಇನ್ನಿತ್ಯಾದಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಟಿಎಫ್‌ಆರ್ ದರ 1.7-1.8ರಷ್ಟು ಮಾತ್ರ ಅಂದರೆ ದೇಶದ ಸರಾಸರಿಗಿಂತ ಕಡಿಮೆಯಾಗಿತ್ತು. ಆದರೆ ಬಿಹಾರದ ದರ 3.4 ಆಗಿದ್ದರೆ ಉತ್ತರ ಪ್ರದೇಶದ್ದು 2.7. ಅಂದರೆ ದೇಶದ ಸರಾಸರಿಗಿಂತ ಹೆಚ್ಚು. ಮೇಲ್ನೋಟಕ್ಕೆ ಕಾಣುವಂತೆ ಬಿಹಾರ ಹಾಗೂ ಉತ್ತರ ಪ್ರದೇಶಗಳಿಗಿಂತ ಟಿಎಫ್‌ಆರ್ ದರ ಕಡಿಮೆ ಇರುವ ರಾಜ್ಯಗಳಲ್ಲಿ ಮಹಿಳಾ ಸಾಕ್ಷರತೆ, ಶಿಕ್ಷಣ, ಸಾರ್ವಜನಿಕ ವಲಯದಲ್ಲಿ ಮಹಿಳೆಯ ಭಾಗವಹಿಸುವಿಕೆ, ಒಟ್ಟಾರೆ ಆ ರಾಜ್ಯಗಳ ಸಾಪೇಕ್ಷ ಅಭಿವೃದ್ಧಿ ದರಗಳು ಹೆಚ್ಚಾಗಿದೆ. ಹಾಗೆ ನೋಡಿದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದೂಗಳ ಟಿಎಫ್‌ಆರ್ ದರವು ದಕ್ಷಿಣ ರಾಜ್ಯಗಳ ಮುಸ್ಲಿಮರ ಟಿಎಫ್‌ಆರ್ ದರಕ್ಕಿಂತ ಜಾಸ್ತಿ. ಅರ್ಥಾತ್ ಬಿಹಾರ ಹಾಗೂ ಉತ್ತರ ಪ್ರದೇಶಗಳ ಹಿಂದೂಗಳಿಗಿಂತ ದಕ್ಷಿಣ ರಾಜ್ಯಗಳ ಮುಸ್ಲಿಂ ಮಹಿಳೆಯರು ಕಡಿಮೆ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಆದ್ದರಿಂದಲೇ ""Development Is the best Contraceptive'' -ಅಭಿವೃದ್ಧಿಯೇ ಅತ್ಯುತ್ತಮ ಸಂತಾನ ನಿರೋಧಕ ಎಂಬ ಮಂತ್ರವನ್ನು ಜಗತ್ತಿನಾದ್ಯಂತ ಜಪಿಸಲಾಗುತ್ತಿದೆ. ಶಿಕ್ಷಿಸುವ ಕಾನೂನುಗಳಲ್ಲ.

ಅಷ್ಟೇ ಮುಖ್ಯವಾಗಿ 2020-21ರ NFHSನ ವರದಿಯ ಪ್ರಕಾರ ಭಾರತದ ಶೇ. 54ರಷ್ಟು ಮಹಿಳೆಯರಿಗೇ ಕೇವಲ ಇಬ್ಬರು ಮಕ್ಕಳಿದ್ದರೆ ಈ ದಶಕದಲ್ಲಿ ಮದುವೆಯಾದ ಶೇ. 76ರಷ್ಟು ಮಹಿಳೆಯರಿಗೆ ಎರಡನೇ ಮಗುವನ್ನು ಮಾಡಿಕೊಳ್ಳಲು ಇಷ್ಟವಿಲ್ಲ. ಅಂದರೆ ಕುಟುಂಬದಲ್ಲಿ ಮಹಿಳೆಗೆ ಆಕೆಯ ದೇಹದ ಮೇಲೆ ಹಾಗೂ ಫಲವಂತಿಕೆಯ ಮೇಲೆ ತಾನೇ ತೀರ್ಮಾನ ತೆಗೆದುಕೊಳ್ಳುವಷ್ಟು ಸಬಲೀಕರಿಸಿದರೆ ಮತ್ತು ಕುಟುಂಬಗಳು ಪ್ರಜಾತಾಂತ್ರಿಕರಣಗೊಂಡರೆ ತಾನಾಗಿಯೇ ದೇಶದ ಜನಸಂಖ್ಯೆ ಕಡಿಮೆಯಾಗುತ್ತದೆ.

ಮುಸ್ಲಿಮರ ಜನಸಂಖ್ಯೆ ಹಿಂದೂಗಳಿಗಿಂತ ವೇಗವಾಗಿ ಕಡಿಮೆಯಾಗುತ್ತಿದೆ 

NFHSನ ವರದಿಗಳು ಸ್ಪಷ್ಟಪಡಿಸುವ ಮತ್ತೊಂದು ಸತ್ಯವೇನೆಂದರೆ ಕಳೆದ ಮೂರು ದಶಕಗಳಿಂದ ದೇಶದಲ್ಲಿ ಮುಸ್ಲಿಮರ ಟಿಎಫ್‌ಆರ್ ದರವು ಹಿಂದೂಗಳಿಗಿಂತ ವೇಗವಾಗಿ ಇಳಿಕೆಯಾಗುತ್ತಿದೆ. ಉದಾಹರಣೆಗೆ 2005-6ರಲ್ಲಿ ನಡೆದ NFHSನ 3ನೇ ಸರ್ವೇಯ ಪ್ರಕಾರ ಹಿಂದೂಗಳ ಟಿಎಫ್‌ಆರ್ ದರವು 2.59 ಇದ್ದರೆ ಮುಸ್ಲಿಮರ ಟಿಎಫ್‌ಆರ್ ದರವು 3.4ರಷ್ಟಿತ್ತು. ಆದರೆ ಹತ್ತು ವರ್ಷಗಳ ನಂತರ NFHSನ 4ನೇ ಸರ್ವೇಯ ಪ್ರಕಾರ ಹಿಂದೂಗಳ ಟಿಎಫ್‌ಆರ್ ದರವು 2.59ರಿಂದ 2.13ಕ್ಕೆ ಇಳಿದಿತ್ತು. ಅಂದರೆ 0.46ರಷ್ಟು ಇಳಿಕೆ. ಅದೇ ಅವಧಿಯಲ್ಲಿ ಮುಸ್ಲಿಮರ ಟಿಎಫ್‌ಆರ್ ದರವು 3.4 ರಿಂದ 2.61ಕ್ಕೆ ಇಳಿಯಿತು. ಅಂದರೆ 0.79ರಷ್ಟು ಇಳಿಕೆ.

ಅಂದರೆ, ಈಗಲೂ ಮುಸ್ಲಿಮರ ಟಿಎಫ್‌ಆರ್ ದರವು ಹಿಂದೂಗಳಿಗಿಂತ ಜಾಸ್ತಿ ಇದ್ದರೂ ಕಳೆದೊಂದು ದಶಕದಲ್ಲಿ ಮುಸ್ಲಿಮರ ಟಿಎಫ್‌ಆರ್ ದರ ಮತ್ತು ಆ ಕಾರಣಕ್ಕಾಗಿ ಮುಸ್ಲಿಮರ ಜನಸಂಖ್ಯಾ ಏರಿಕೆಯ ಪ್ರಮಾಣ ಹಿಂದೂಗಳಿಗಿಂತ ತೀವ್ರವಾಗಿ ಕಡಿಮೆಯಾಗುತ್ತಿದೆ. 2005ರಲ್ಲಿ ಮುಸ್ಲಿಮರ ಟಿಎಫ್‌ಆರ್ ಪ್ರಮಾಣವು ಹಿಂದೂಗಳಿಗಿಂತ 0.81ರಷ್ಟು ಹೆಚ್ಚಿದ್ದರೆ ಆ ಅಂತರವು ಹತ್ತು ವರ್ಷಗಳ ನಂತರ 2015ರಲ್ಲಿ 0.4ಕ್ಕೆ ಇಳಿದಿದೆ. ಹೀಗಾಗಿ ಮುಂದಿನ ದಶಕದಲ್ಲಿ ಹಿಂದೂ -ಮುಸ್ಲಿಂ ಫಲವಂತಿಕೆಯ ಪ್ರಮಾಣದಲ್ಲಿ ಯಾವುದೇ ಅಂತರವೇ ಇಲ್ಲದಂತಾಗಲಿದೆ. ಅಷ್ಟೆ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮುಸ್ಲಿಮ್ ಟಿಎಫ್‌ಆರ್ ದರವು ಕೇರಳ, ಅಸ್ಸಾಂ, ಪ. ಬಂಗಾಳ, ಜಮ್ಮು-ಕಾಶ್ಮೀರದಂತಹ ಮುಸ್ಲಿಂ ಬಾಹುಳ್ಯವಿರುವ ರಾಜ್ಯಗಳಲ್ಲೇ ವೇಗವಾಗಿ ಕುಸಿಯುತ್ತಿದೆ. ಮೇಲಿನ ಸರಕಾರಿ ಅಂಕಿಅಂಶಗಳು ಸ್ಪಷ್ಟಪಡಿಸುವುದು: -ಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ಆರೋಗ್ಯಕರವಾಗಿ ಕುಸಿಯುತ್ತಿದೆ. -ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಪ್ರಮಾಣವು ಹಿಂದೂಗಳ ಜನಸಂಖ್ಯೆಯ ಏರಿಕೆಯ ಪ್ರಮಾಣಕ್ಕಿಂತ ಅರ್ಧಕ್ಕರ್ಧ ಕಡಿಮೆಯಾಗುತ್ತಿದೆ. -ಮತ್ತು ಯಾವ ರಾಜ್ಯಗಳಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿಯಾಗಿದೆಯೋ ಆ ರಾಜ್ಯಗಳಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಎಲ್ಲಾ ಸಮುದಾಯಗಳ ಟಿಎಫ್‌ಆರ್ ದರ ಕುಸಿದಿದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣ ಮಾಡಲು ಸರಕಾರ ಗಮನಹರಿಸಬೇಕಿರುವುದು ಶಿಕ್ಷಣ, ಉದ್ಯೋಗ, ಆರೋಗ್ಯ, ಕುಟುಂಬ ಕಲ್ಯಾಣ ಯೋಜನೆಗಳ ಅರಿವು, ಸಾಧನಗಳ ಲಭ್ಯತೆ ಮತ್ತು ಮಹಿಳಾ ಸಬಲೀಕರಣಗಳ ಮೇಲೆಯೇ ವಿನಾ ಕುಟುಂಬವನ್ನು ಶಿಕ್ಷಿಸುವ ಕಾನೂನುಗಳ ಮೇಲಲ್ಲ.

ಕೌಟುಂಬಿಕ ಹಿಂಸೆಯನ್ನು ಹೆಚ್ಚಿಸುವ ಕುಟುಂಬ ಕಲ್ಯಾಣ ಕಾನೂನುಗಳು 

ಅದರ ಬದಲಿಗೆ ಎರಡು ಮಕ್ಕಳಿಗಿಂತ ಹೆಚ್ಚಿರುವ ಕುಟುಂಬಗಳನ್ನು ಶಿಕ್ಷಿಸುವ ಕಾನೂನನ್ನು ಮಾಡಿದರೆ ಕುಟುಂಬದಲ್ಲಿನ ಮಹಿಳೆ ಇನ್ನಷ್ಟು ಹಿಂಸಾಚಾರಕ್ಕೆ ಗುರಿಯಾಗುತ್ತಾಳೆ. ಅಭದ್ರಳಾಗುತ್ತಾಳೆ ಮತ್ತು ಅತಂತ್ರಳಾಗುತ್ತಾಳೆ. ಏಕೆಂದರೆ ಎರಡಕ್ಕಿಂತ ಹೆಚ್ಚು ಮಕ್ಕಳಾದರೆ ಸರಕಾರಿ ಉದ್ಯೋಗವೋ ಮತ್ತೊಂದೋ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಗಿರುವ ಮದುವೆಯನ್ನು ದಾಖಲು ಮಾಡದೆ ಹೋಗುವ ಪ್ರವೃತ್ತಿ ಇಂತಹ ಕಾನೂನಿರುವ ಹರ್ಯಾಣದಲ್ಲಿ ವಿಸ್ತೃತವಾಗಿ ಕಂಡುಬರುತ್ತಿದೆ. ಹೀಗೆಯೇ ಹೆಂಡತಿಯನ್ನು ತೊರೆಯುವ ಅಥವಾ ವಿಚ್ಛೇದನ ಕೊಡುವ ಪ್ರಕರಣಗಳು ಹೆಚ್ಚಾಗಲಿವೆ. ಹಾಗೆಯೇ ನಮ್ಮಂತಹ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಮಗು ಪ್ರಾಧಾನ್ಯತೆಯು ಎಲ್ಲ ಕುಟುಂಬಗಳಲ್ಲೂ ಕೆಲಸ ಮಾಡುವುದರಿಂದ ಎರಡೇ ಮಕ್ಕಳು ಎಂದಾಗ ಭ್ರೂಣ ಪತ್ತೆಗಳ ದಂಧೆ ಹಾಗೂ ಅನಾರೋಗ್ಯಕರ ಅಬಾರ್ಷನ್ ದಂಧೆಗಳು ಹೆಚ್ಚಾಗಲಿವೆ. ಇದರಿಂದ ಈಗಾಗಲೇ ಅಪಾರ ಅಸಮತೋಲದಲ್ಲಿರುವ ಈ ದೇಶದ ಗಂಡು-ಹೆಣ್ಣು ಅನುಪಾತವು ಇನ್ನೂ ತೀವ್ರವಾಗಿ ಕುಸಿಯಲಿದೆ. ಇದೆಲ್ಲದರ ಜೊತೆಗೆ ಮಹಿಳೆಯರ ಆರೋಗ್ಯವೂ ದುಸ್ಥಿತಿಗೆ ಈಡಾಗುತ್ತದೆ ಮತ್ತು ಮಹಿಳೆಗೆ ತನ್ನ ದೇಹದ ಮೇಲೆ ಯಾವುದೇ ಅಧಿಕಾರವೂ ಇಲ್ಲದಂತಾಗುತ್ತದೆ. ಹೀಗಾಗಿ ಕಾನೂನಿನ ಮೂಲಕ ಕುಟುಂಬ ನಿಯಂತ್ರಣ ಮಾಡುವ ನೀತಿಗಳು ಅತ್ಯಂತ ಮಹಿಳಾ ವಿರೋಧಿಯಾಗಿವೆ. ಪ್ರಜಾತಂತ್ರ ವಿರೋಧಿಯಾಗಿವೆ.

ಅಸಲಿ ಸಮಸ್ಯೆ- ಜನಸಂಖ್ಯೆ ಹೆಚ್ಚಳದ್ದಲ್ಲ- ಕಡಿಮೆಯಾಗುವುದು!
ಹಾಗೆ ನೋಡಿದರೆ, NFHSನ ವರದಿಗಳೂ ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಜನಸಂಖ್ಯೆ ಅಧ್ಯಯನಗಳು ಮುಂದಿಡುತ್ತಿರುವ ಅಪಾಯ ಜನಸಂಖ್ಯೆ ಹೆಚ್ಚಳದ್ದಲ್ಲ. ಜನಸಂಖ್ಯೆ ಕಡಿಮೆಯಾಗುತ್ತಿರುವುದು!
ಏಕೆಂದರೆ ಪ್ರತಿಯೊಂದು ಕುಟುಂಬಕ್ಕೆ ಎರಡು ಮಕ್ಕಳಿದ್ದರೆ ಅಪ್ಪ-ಅಮ್ಮ ತೀರಿಕೊಂಡ ಬಳಿಕ ಆ ಸಂಖ್ಯೆಯನ್ನು ಆ ಎರಡು ಮಕ್ಕಳು ಭರ್ತಿ ಮಾಡುತ್ತಾರೆ. ಆಗ ಆ ದೇಶದ ಜನಸಂಖ್ಯೆ ಒಂದು ಸ್ಥಿರತೆಯಲ್ಲಿರುತ್ತದೆ. ಆದ್ದರಿಂದ ಒಂದು ದೇಶದಲ್ಲಿ ಟಿಎಫ್‌ಆರ್ ದರವು 2.1ರಷ್ಟಿದ್ದರೆ ಅದನ್ನು ರೀಪ್ಲೇಸ್‌ಮೆಂಟ್ ದರ ಎಂದು ಕರೆಯುತ್ತಾರೆ. ಅದಕ್ಕಿಂತ ಕಡಿಮೆಯಾದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯೇ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. NFHSನ ವರದಿಗಳ ಪ್ರಕಾರ ಭಾರತದ 22 ರಾಜ್ಯಗಳಲ್ಲಿ ಟಿಎಫ್‌ಆರ್ ದರವು 2.1ಕ್ಕಿಂತ ಕಡಿಮೆ. ಟಿಎಫ್‌ಆರ್ ದರವು 1.7-1.8ರಷ್ಟಿರುವ ದಕ್ಷಿಣ ರಾಜ್ಯಗಳ ಜನಸಂಖ್ಯೆ ಮುಂದಿನ ನಾಲ್ಕು ದಶಕಗಳಲ್ಲಿ ಈಗಿರುವುದಕ್ಕಿಂತ ಕಡಿಮೆಯಾಗಲಿದೆ.

Lancet ಎಂಬ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್‌ನ ಅಧ್ಯಯನದ ಪ್ರಕಾರ ಈಗ ಭಾರತದ ಜನಸಂಖ್ಯೆ 140 ಕೋಟಿಯಿದ್ದು, 2048ರ ವೇಳೆಗೆ 160 ಕೋಟಿಗೆ ತಲುಪಿದರೂ ಜನಸಂಖ್ಯೆಯ ಏರಿಕೆಯ ವೇಗ ಕುಸಿಯುತ್ತಿರುವುದರಿಂದ 2048ರಿಂದ ಭಾರತದ ಜನಸಂಖ್ಯೆ ಕುಸಿಯುತ್ತಾ ಹೋಗುತ್ತದೆ ಹಾಗೂ 2100ರ ವೇಳೆಗೆ ಭಾರತದ ಜನಸಂಖ್ಯೆ 109 ಕೋಟಿಗೆ ಇಳಿದಿರುತ್ತದೆ. (https://www.thelancet.com/action/showPdf?pii=S0140-6736Íæà.2820Íæà.2930677-2)

ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಸಂದರ್ಭದಲ್ಲಿ ಕೆಲಸ ಮಾಡಬಲ್ಲ ಯುವಕರ ಸಂಖ್ಯೆಗಿಂತ ಹಿರಿಯರ-ವೃದ್ಧರ ಸಂಖ್ಯೆ ಎರಡು ಪಟ್ಟು ಹೆಚ್ಚಿರುತ್ತದೆ. ಒಬ್ಬ ದುಡಿಯುವ ವ್ಯಕ್ತಿಯ ಮೇಲೆ ಅಪ್ಪ, ಅಮ್ಮ, ತಾತ, ಅಜ್ಜಿ ಹೀಗೆ ನಾಲ್ವರು ಅವಲಂಬಿತರಾಗುವ ಪರಿಸ್ಥಿತಿ ಎದುರಾಗುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಜನರಿಗಾಗಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಈಗಾಗಲೇ ಚೀನಾದಲ್ಲಿ ಆ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಈಗ ಮೂರು ಮಕ್ಕಳನ್ನು ಪಡೆಯಲು ಉತ್ತೇಜನ ಕೊಡಲಾಗುತ್ತಿದೆ. ಭಾರತದಲ್ಲಿ ದಕ್ಷಿಣ ರಾಜ್ಯಗಳಿಗೆ ಅಂತಹ ಪರಿಸ್ಥಿತಿ ಉತ್ತರ ರಾಜ್ಯಗಳಿಗಿಂತ ಬೇಗನೆ ಬಂದೊದಗಲಿದೆ.. ಹೀಗಾಗಿ ಸರಕಾರ ಚಿಂತಿಸಬೇಕಿರುವುದು ಇಲ್ಲದ ಜನಸಂಖ್ಯಾಸ್ಫೋಟದ ಸಮಸ್ಯೆಯ ಬಗ್ಗೆಯಲ್ಲ. ಈಗ ಜಗತ್ತಿನಲೇ ಅತಿ ಹೆಚ್ಚು ಯುವಶಕ್ತಿ ಇರುವ ಈ ದೇಶದಲ್ಲಿ ಹೇಗೆ ಉದ್ಯೋಗಗಳನ್ನು ಸೃಷ್ಟಿಸಿ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ. ಮತ್ತು ಇನ್ನೆರಡು ದಶಕಗಳ ನಂತರ ಎದುರಾಗಲಿರುವ ಹಿರಿಯರ ಬಾಹುಳ್ಯ ತಂದೊಡ್ಡುವ ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News