ಓಡೋಡಿ ಬಂದು ಪ್ರಮಾಣ ವಚನ ಸ್ವೀಕರಿಸಿದ ಶಶಿಕಲಾ ಜೊಲ್ಲೆ

Update: 2021-08-04 12:14 GMT

ಬೆಂಗಳೂರು, ಆ. 4: ಅಂಗನವಾಡಿ ಕೇಂದ್ರಗಳಿಗೆ `ಕೋಳಿಮೊಟ್ಟೆ' ಪೂರೈಕೆ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈತಪ್ಪುವ ಭೀತಿಯಲ್ಲಿದ್ದ ಬೆಳಗಾವಿ ಜಿಲ್ಲೆ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ಕೊನೆಯ ಕ್ಷಣದಲ್ಲಿ ಅಕ್ಷರಶಃ ಓಡೋಡಿ ಬಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವರಿಷ್ಠರ ಮನವೊಲಿಕೆಗೆ ದಿಲ್ಲಿಯಲ್ಲೆ ಬೀಡುಬಿಟ್ಟಿದ್ದ ಶಶಿಕಲಾ ಜೊಲ್ಲೆ ಅವರು, ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಖಚಿತವಾದ ಬಳಿಕ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಝೀರೋ ಟ್ರಾಫಿಕ್‍ನಲ್ಲಿ, ಪೊಲೀಸ್ ಎಸ್ಕಾರ್ಟ್‍ನಲ್ಲಿ ಪತಿ ಹಾಗೂ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರೊಂದಿಗೆ ರಾಜಭವನಕ್ಕೆ ತಡವಾಗಿ ಆಗಮಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು.

ಹೊಸದಿಲ್ಲಿಯಿಂದ ಬೆಂಗಳೂರಿಗೆ ಬರುವ ವಿಮಾನ ತಡವಾಗಿದ್ದರಿಂದ ಪ್ರಮಾಣವಚನ ಕಾರ್ಯಕ್ರಮಕ್ಕೂ ತಡವಾಗಿ ಬಂದಿದ್ದಾರೆ. ಶಶಿಕಲಾ ಜೊಲ್ಲೆ ಅವರು ಪ್ರಯಾಣದ ಮಾರ್ಗದಲ್ಲಿ ಸಂಚಾರ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಇಂಡಿಗೋ ವಿಮಾನದಲ್ಲಿ ಬಂದ ಶಶಿಕಲಾ ಜೊಲ್ಲೆ ಜೊತೆ ಸಂಸದ ಡಾ.ಉಮೇಶ್ ಜಾಧವ್ ಮತ್ತು ಅಧಿಕಾರಿಗಳು ಇದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News