ಪಾಲಿಕೆ, ನಗರಸಭೆ ಚುನಾವಣೆ ದಿನಾಂಕ ನಿಗದಿಗೆ ಹೈಕೋರ್ಟ್ ಆದೇಶ

Update: 2021-08-04 17:36 GMT

ಬೆಂಗಳೂರು, ಆ.4: ರಾಜ್ಯದಲ್ಲಿ ಬಾಕಿ ಇರುವ ಪಾಲಿಕೆ, ನಗರಸಭೆಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿರುವ ಹೈಕೋರ್ಟ್, ಚುನಾವಣೆ ಮುಂದೂಡಬೇಕೆಂದು ಮನವಿ ಮಾಡಿರುವ ರಾಜ್ಯ ಸರಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ.

ಅವಧಿ ಮುಗಿದರೂ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದ ಸರಕಾರಕ್ಕೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠವು ಪ್ರತಿಕ್ರಿಯಿಸಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆ, ದೊಡ್ಡಬಳ್ಳಾಪುರ ನಗರಸಭೆ, ತರೀಕೆರೆ ಪುರಸಭೆ ಸೇರಿದಂತೆ ಅನೇಕ ಪಾಲಿಕೆ ಹಾಗೂ ನಗರಸಭೆಗಳಿಗೆ ಚುನಾವಣೆ ಬಾಕಿ ಇದೆ. ಆದರೆ, ಕೋವಿಡ್ ನೆಪವೊಡ್ಡಿ ಸರಕಾರ ಅದನ್ನು ಮುಂದೂಡುತ್ತಲೇ ಬಂದಿದೆ.

ಕೋವಿಡ್ ಕಾರಣದಿಂದ ಡಿಸೆಂಬರ್ ಅಂತ್ಯದವರೆಗೂ ಚುನಾವಣೆ ನಡೆಸದಂತೆ ರಾಜ್ಯ ಸರಕಾರ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಪುರಸ್ಕರಿಸದ ನ್ಯಾಯಪೀಠವು ಈ ಮನವಿಯನ್ನು ಪರಿಗಣಿಸುವುದು ಬೇಡ ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯೇ ನಡೆದಿದೆ. ಕರ್ನಾಟಕದಲ್ಲಿ ಮಾತ್ರ ಚುನಾವಣೆ ಮುಂದೂಡಲಾಗುತ್ತಿದೆ. ಇಲ್ಲಿ ಸಂವಿಧಾನದ ಆಶಯ ಪಾಲನೆಯಾಗುತ್ತಿಲ್ಲ. ರಾಜ್ಯ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ. ಆದರೆ ಚುನಾವಣೆಗೆ ಮಾತ್ರ ಕೋವಿಡ್ ಅಡ್ಡಿಪಡಿಸುತ್ತದೆಯೇ? ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News