ಖೇಲ್ ರತ್ನ ಪ್ರಶಸ್ತಿ ಮರುನಾಮಕರಣ ಖಂಡನೀಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.7: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿದ್ದ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಸರಕಾರ ಮರುನಾಮಕರಣ ಮಾಡಿದ್ದು ಖಂಡನೀಯ. ಇಡೀ ದೇಶದ ಯುವಕರಿಗೆ ಮತದಾನದ ಹಕ್ಕು, ಅವರ ಪೆÇ್ರೀತ್ಸಾಹಕ್ಕೆ ರಾಜೀವ್ ಗಾಂಧಿ ಅವರು ಕೊಟ್ಟ ಕಾರ್ಯಕ್ರಮ, ಯುವಕರ ಕ್ರಾಂತಿಕಾರಿ ಚಿಂತನೆಗೆ ಅವರು ಕೊಟ್ಟ ಅವಕಾಶ, ಕಾರ್ಯಕ್ರಮ ಅವಿಸ್ಮರಣೀಯ. ಇದೆಲ್ಲವನ್ನು ಗಮನಿಸಿ ಅವರ ಹೆಸರಲ್ಲಿ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ಯಾನ್ ಚಂದ್ ಅವರು ದೇಶದ ಆಸ್ತಿ. ಅದರಲ್ಲಿ ಎರಡು ಮಾತಿಲ್ಲ. ಅವರ ಹೆಸರಲ್ಲಿ ಸರಕಾರ ಹೊಸದಾಗಿ ಬೇರೆ ಪ್ರಶಸ್ತಿ ನೀಡಲಿ, ಬೇರೆ ಕಾರ್ಯಕ್ರಮ ಮಾಡಲಿ ಅಥವಾ ವಿಶ್ವವಿದ್ಯಾಲಯ ಸ್ಥಾಪಿಸಲಿ. ನಮ್ಮ ಅಭ್ಯಂತರವಿಲ್ಲ ಎಂದರು.
ಜನಪರ ಕಾರ್ಯಕ್ರಮಗಳಲ್ಲಿ ಗಾಂಧಿ ಕುಟುಂಬದ ಹೆಸರಿದೆ ಎಂಬ ಕಾರಣಕ್ಕೆ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ನಮ್ಮ ಧೀಮಂತ ನಾಯಕರ ಹೆಸರನ್ನು ಬದಲಾಯಿಸಲು ಬಿಜೆಪಿ ಸರಕಾರ ಹಾಗೂ ನಾಯಕರು ಮುಂದಾಗಿದ್ದಾರೆ. ಇದು ದ್ವೇಷದ ರಾಜಕಾರಣ. ಇದನ್ನು ನೋಡಿಕೊಂಡು ಕಾಂಗ್ರೆಸ್ ಪಕ್ಷ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರಕಾರ ತಮಗೆ ಯಾವ ಕಾರ್ಯಕ್ರಮ ಬೇಕೋ ಅದನ್ನು ಮಾಡಿಕೊಳ್ಳಲಿ. ಆದರೆ ಈ ದ್ವೇಷದ ರಾಜಕಾರಣವನ್ನು ನಿಲ್ಲಿಸಲಿ. ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಈ ದೇಶದ ಆಸ್ತಿಯಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರು. ಆದರೆ ಪಟೇಲ್ ಅವರ ಹೆಸರಲ್ಲಿದ್ದ ಕ್ರೀಡಾಂಗಣಕ್ಕೆ ತಮ್ಮ ಹೆಸರನ್ನು ಮರುನಾಮಕರಣ ಮಾಡಿಕೊಂಡದ್ದು ಎಷ್ಟು ಸರಿ? ಇದು ದೇಶಭಕ್ತಿನಾ? ಸರ್ದಾರ್ ಪಟೇಲ್ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆದಿದ್ದು ನೀವಲ್ಲ, ಈ ದೇಶದ ಜನ ಎಂದು ಶಿವಕುಮಾರ್ ತಿಳಿಸಿದರು.
2024ಕ್ಕೆ ಕೇಂದ್ರದಲ್ಲಿ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಇದು ಜನರ ಅಭಿಪ್ರಾಯವೂ ಹೌದು. ಜನರ ಅಭಿಪ್ರಾಯ, ಒತ್ತಡದ ಮೇರೆಗೆ ಈ ಪ್ರಶಸ್ತಿ ಹೆಸರು ಮರುನಾಮಕರಣ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ. ಹಾಗಾದರೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಇಳಿಸಬೇಕು ಎಂದು ದೇಶದ ಜನ ಒತ್ತಾಯ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಈ ಒತ್ತಡಕ್ಕೆ ಮಣಿದು ಯಾಕೆ ಬೆಲೆ ಇಳಿಸುತ್ತಿಲ್ಲ? ರೈತರು ಕಾರ್ಮಿಕರ ಕಾಯ್ದೆ ಬೇಡ ಎಂದು ಕಳೆದೊಂದು ವರ್ಷದಿಂದ ಅನ್ನದಾತ, ದೇಶದ ಜನ ಹೋರಾಡುತ್ತಿದ್ದಾರೆ. ಅವರ ಒತ್ತಡಕ್ಕೆ ಯಾಕೆ ಮಣಿಯುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.
ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರು ಈ ದೇಶ ಕಂಡ ಅಪ್ರತಿಮ ನಾಯಕರು. ಅವರ ನಾಯಕತ್ವ ಇತರರಿಗೆ ಸ್ಫೂರ್ತಿಯಾಗಲಿ, ಅವರೂ ನಾಯಕರಾಗಿ ಬೆಳೆಯಲಿ ಎಂದು ಕಾರ್ಯಕ್ರಮಗಳಿಗೆ ಅವರ ಹೆಸರು ಇಡಲಾಗಿದೆ. ಬಿಜೆಪಿ ನಾಯಕರ ಹೆಸರಿನಲ್ಲೂ ಅನೇಕ ಕಾರ್ಯಕ್ರಮಗಳಿವೆ. ನಮ್ಮ ರಾಜ್ಯದಲ್ಲಿ ಅಟಲ್ ಸಾರಿಗೆ ಎಂದು ಕಾರ್ಯಕ್ರಮ ಮಾಡಿದ್ದರು. ನಾವು ಅಧಿಕಾರದಲ್ಲಿದ್ದಾಗ ಅದನ್ನು ಬದಲಿಸಲಿಲ್ಲ. ನಮಗೆ ಆ ಉದ್ದೇಶವಿಲ್ಲ ಎಂದು ಶಿವಕುಮಾರ್ ಹೇಳಿದರು.
ನಮ್ಮ ನಾಯಕರ ಹೆಸರನ್ನು ಜನರು ಸ್ಮರಿಸುವುದನ್ನು ಸಹಿಸಲಾಗದೇ ರಾಜಕೀಯ ದ್ವೇಷದಿಂದ ಬಿಜೆಪಿ ನಾಯಕರು ಈ ರೀತಿ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರು ಈ ದೇಶಕ್ಕೆ ಏನೂ ಮಾಡಲೇ ಇಲ್ಲವಾ? ರಾಜೀವ್ ಗಾಂಧಿ ಅವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವ ಸಂದರ್ಭದಲ್ಲಿ ಅವರು ಆಡಿದ ಮಾತುಗಳು, ಅದಕ್ಕೆ ಯಾರೆಲ್ಲಾ ವಿರೋಧ ವ್ಯಕ್ತಪಡಿಸಿ, ಏನೆಲ್ಲಾ ಮಾತನಾಡಿದ್ದರು ಎಂಬುದನ್ನು ದಾಖಲೆ ತೆಗೆದು ನೋಡಿ ಎಂದು ಅವರು ತಿಳಿಸಿದರು.
ಯಾವುದೇ ಸರಕಾರ ದೇಶದ ಯಾವುದೇ ಪಕ್ಷದ ನಾಯಕರ ಹೆಸರಿನಲ್ಲಿ ಯೋಜನೆ ರೂಪಿಸಿದಾಗ ಅದನ್ನು ಬದಲಾವಣೆ ಮಾಡುವುದು ಸೂಕ್ತವಲ್ಲ. ಬಿಜೆಪಿ ಈ ಕೆಟ್ಟ ಪರಂಪರೆ ಆರಂಭಿಸುತ್ತಿದ್ದು, ಇದರಿಂದ ದ್ವೇಷದ ಮನೋಭಾವ ಹೆಚ್ಚುತ್ತದೆ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ತಮ್ಮ ನಿರ್ಧಾರ ಹಿಂಪಡೆಯಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ: ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಖ್ಯಮಂತ್ರಿಗೆ ಸಲಹೆ ಕೊಟ್ಟಿದ್ದಾರೆ. ಇದನ್ನು ನೋಡಿಕೊಂಡು ಕೂರಲು ನಾವ್ಯಾರೂ ಕೈಗೆ ಬಳೆ ತೊಟ್ಟಿಲ್ಲ. ಇಂದಿರಾಗಾಂಧಿ ಅವರು ದೇಶಕ್ಕೆ ಮಾಡಿದ ತ್ಯಾಗ, ಬಡವರಿಗಾಗಿ ಕೊಟ್ಟ ಕಾರ್ಯಕ್ರಮವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರು ಸ್ಮರಿಸುತ್ತಾರೆ. ಬಿಜೆಪಿ ಸರಕಾರ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಮುಂದಾಗಲಿ, ಆಮೇಲೆ ಕಾಂಗ್ರೆಸಿಗರು ಏನು ಮಾಡುತ್ತಾರೆ ಎಂಬುದನ್ನು ತೋರಿಸುತ್ತೇವೆ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರಿನ ಜನ ಇಂದಿರಾ ಗಾಂಧಿ ಅವರಿಗೆ ಸುಮ್ಮನೆ ಮತಹಾಕಿ, ಅವರು ಪ್ರಧಾನಿಯಾಗಲು ಆಯ್ಕೆ ಮಾಡಿ ಕಳುಹಿಸಲಿಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಮುಂದಾದರೆ ಪರಿಸ್ಥಿತಿ ಏನಾಗಲಿದೆ ಎಂದು ಈಗಲೇ ನಾನು ಹೇಳುವುದಿಲ್ಲ. ಇಂದಿರಾ ಕ್ಯಾಂಟೀನ್ ಗೆ ಶೀಘ್ರದಲ್ಲೇ ಭೇಟಿ ನೀಡಿ, ಅಲ್ಲಿನ ಆಹಾರ ಗುಣಮಟ್ಟವನ್ನು ಪರಿಶೀಲಿಸುತ್ತೇನೆ. ಬಿಜೆಪಿ ಇಂತಹ ಕೆಟ್ಟ ಆಲೋಚನೆಗಳನ್ನು ಕೈಬಿಡಬೇಕು. ಈ ಗಿಮಿಕ್ ರಾಜಕಾರಣ ನಿಲ್ಲಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.