ಓ ಮೆಣಸೇ...

Update: 2021-08-08 19:30 GMT

ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಉಪಮುಖ್ಯಮಂತ್ರಿ ಜೆಡಿಎಸ್‌ಗೆ ಸಿಗುತ್ತೆ ಎನ್ನುವ ನಿರೀಕ್ಷೆ ಇದ್ದಿರಬೇಕು.


ಯಡಿಯೂರಪ್ಪರಿಗೆ ಅಧಿಕಾರವಿಲ್ಲದೇ ಇದ್ದರೂ ಸಂಘಟನೆ ಹಾಗೂ ಅಭಿವೃದ್ಧಿಗೆ ಅವರ ಮಾರ್ಗದರ್ಶನ ಅತ್ಯಮೂಲ್ಯವಾಗಿರಲಿದೆ -ಬಿ.ವೈ.ರಾಘವೇಂದ್ರ, ಸಂಸದ
ಏನಿದ್ದರೂ ರಾಜ್ಯವನ್ನು ದೋಚುವುದರ ಬಗ್ಗೆ ಸುದೀರ್ಘ ಅನುಭವ ಇರುವವರಲ್ಲವೇ? ಮಾರ್ಗದರ್ಶನ ಬೇಕಾದೀತು.


ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ನಳಿನ್‌ಕುಮಾರ್ ಕಟೀಲು ನೇತೃತ್ವದಲ್ಲಿಯೇ ಎದುರಿಸಲಾಗುವುದು - ಕೆ.ಎಸ್.ಈಶ್ವರಪ್ಪ, ಸಚಿವ
ಅಂದರೆ ಅವರ ಕೈಯಲ್ಲೇ ರಾಜ್ಯಕ್ಕೆ ಬೆಂಕಿ ಕೊಡಲು ಹೊರಟಿದ್ದೀರಿ ಎಂದಾಯಿತು.


ತ್ರಿವಳಿ ತಲಾಖ್ ಕಾನೂನು ಜಾರಿಗೆ ಬಂದ ಬಳಿಕ ದಿಢೀರ್ ತ್ರಿವಳಿ ತಲಾಖ್ ಪ್ರಕರಣ ಗಣನೀಯವಾಗಿ ಕಡಿಮೆಯಾಗಿದೆ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಹೌದು. ತಲಾಖ್ ಹೇಳದೆಯೇ ಹೆಂಡತಿಯನ್ನು ತೊರೆಯುವುದು ಜಾಣತನ ಎನ್ನುವುದು ಅವರಿಗೆ ಗೊತ್ತಾಗಿರಬೇಕು.


ರಾಜ್ಯದ ಜನರು ಕುರಿ,ಕೋಳಿ,ಮೀನಿಗಿಂತ ಗೋಮಾಂಸವನ್ನು ಹೆಚ್ಚಾಗಿ ತಿನ್ನಬೇಕು -ಸನ್ಬೋರ್ ಶುಲ್ಲೈ, ಮೇಘಾಲಯ ಸಚಿವ
ಯಾವ ಯಾವ ಬಿಜೆಪಿ ರಾಜ್ಯಗಳಲ್ಲಿ ಎನ್ನುವುದನ್ನೂ ಹೇಳಿ ಬಿಡಿ.


ರಾಜಕಾರಣಕ್ಕೂ ವಯಸ್ಸಿಗೆ ಸಂಬಂಧ ಇಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಮತ್ತೊಮ್ಮೆ ಪ್ರಧಾನಿ ಹುದ್ದೆ ಕೊಟ್ಟರೆ ಸ್ವೀಕರಿಸಲು ಸಿದ್ಧ ಎನ್ನುವ ಸಂದೇಶ.


ಮೈಸೂರು ರಾಜರನ್ನು ಎತ್ತಿಕಟ್ಟಿ ಸರ್.ಎಂ.ವಿಶ್ವೇಶ್ವರಯ್ಯರನ್ನು ತುಳಿಯುವ ಕೆಲಸ ನಡೆಯುತ್ತಿದೆ - ಡಾ.ಎಸ್.ಎಲ್.ಭೈರಪ್ಪ, ಸಾಹಿತಿ
ನಿಮ್ಮ ದೃಷ್ಟಿಯಲ್ಲಿ ಮೈಸೂರು ರಾಜರ ತಲೆ ಇರುವುದೇ ವಿಶ್ವೇಶ್ವರಯ್ಯರಂತವರು ತುಳಿಯುವುದಕ್ಕೆ ಇರಬೇಕು.


ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ದೃಷ್ಟಿಯಿಂದ ಉತ್ತರ ಪ್ರದೇಶವು ದೇಶದಲ್ಲೇ ಉನ್ನತ ಸ್ಥಾನದಲ್ಲಿದೆ - ಅಮಿತ್ ಶಾ, ಕೇಂದ್ರ ಸಚಿವ
ಕ್ರಿಮಿನಲ್‌ಗಳು ಪಡೆಯುತ್ತಿರುವ ಕಾನೂನು ರಕ್ಷಣೆಯ ಹಿನ್ನೆಲೆಯಲ್ಲಿ ಹೇಳಿರಬೇಕು.


(ಬಿಜೆಪಿ) ಕಪಾಳಕ್ಕೆ ಹೊಡೆದರೆ ನಾವು ಹೆದರುವುದಿಲ್ಲ. ಹೊಡೆದವರು ನೆಲಕಚ್ಚುವಂತೆ ಪ್ರತಿಯಾಗಿ ಕಪಾಳಕ್ಕೆ ಬಾರಿಸುತ್ತೇವೆ - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಏನು ಹೊಡೆದುಕೊಳ್ಳುವುದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯ ಒಳಗೆ ಹೊಡೆದುಕೊಳ್ಳಿ.


ಗಡ್ಡ ನನ್ನ ಐಡೆಂಟಿಟಿ - ಸಿ.ಟಿ.ರವಿ, ಶಾಸಕ

ಜನರಿಗೆ ಅದು ದಡ್ಡ ಎಂದು ಕೇಳಿಸಿತಂತೆ.


ಮಾಧ್ಯಮಗಳು ಖಾಸಗಿತನವನ್ನು ಗೌರವಿಸಬೇಕು - ಶಿಲ್ಪಾ ಶೆಟ್ಟಿ, ನಟಿ
ನಿಮ್ಮ ಖಾಸಗಿ ವಿಷಯಗಳು ವೀಡಿಯೊಗಳೊಳಗೆ ಬಂದರೆ?


ಭಾರತದಲ್ಲಿ ಬೆಲೆ ಏರಿಕೆಗೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಾರಣ -ವಿಶ್ವಾಸ್ ಸಾರಂಗ್, ಮಧ್ಯಪ್ರದೇಶ ಸಚಿವ
ಅವರ ಕಾಲದಲ್ಲಿ ವಿಶ್ವದ ಮುಂದೆ ಭಾರತಕ್ಕೆ ಬೆಲೆ ಇತ್ತು. ನಿಮ್ಮ ಕಾಲದಲ್ಲಿ ಪೆಟ್ರೋಲ್‌ಗಷ್ಟೇ ಬೆಲೆ.


ಜೆಡಿಎಸ್ ಜಾತ್ಯತೀತ ಸಿದ್ಧಾಂತಕ್ಕೆ ತರ್ಪಣ ಬಿಟ್ಟು ಬಹಳದಿನಗಳಾದವು - ಸಿದ್ದರಾಮಯ್ಯ, ಮಾಜಿ ಸಿಎಂ
ಮತ್ತೇಕೆ ಅದರ ಜೊತೆ ಸೇರಿ ಸರಕಾರ ರಚಿಸಿದಿರಿ?


ಅಪ್ಪ-ಮಕ್ಕಳ ಪಕ್ಷ ಎಂಬುದು ಜೆಡಿಎಸ್‌ಗೆ ಮಾತ್ರ ಅನ್ವಯಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬೇರೆಲ್ಲ ಪಕ್ಷದಲ್ಲಿ ಅಪ್ಪ, ಮಕ್ಕಳ ಜೊತೆ ಇತರರೂ ಇರುತ್ತಾರೆ.


ಸಾಮೂಹಿಕ ನಾಯಕತ್ವದಲ್ಲೇ ಮುಂಬರುವ ಎಲ್ಲ ಚುನಾವಣೆಗಳನ್ನು ಎದುರಿಸಲಾಗುವುದು - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆ ಸಾಮೂಹಿಕ ನಾಯಕತ್ವದಲ್ಲಿ ಯಡಿಯೂರಪ್ಪ ಕೂಡ ಇರುತ್ತಾರೆಯೇ?


ದೇಶದ ಯುವಕರು ಸತ್ಯವನ್ನು ಮಾತನಾಡಲು ಆರಂಭಿಸಿದ ದಿನವೇ ಮೋದಿ ನೇತೃತ್ವದ ಸರಕಾರ ಕುಸಿಯುತ್ತದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಮಾಧ್ಯಮಗಳು ಸತ್ಯವನ್ನು ಹೇಳಲಾರಂಭಿಸಿದ ದಿನ, ಯುವಕರು ಸತ್ಯವನ್ನು ಮಾತನಾಡಲಾರಂಭಿಸುತ್ತಾರೆ.


ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯಿಂದಾಗಿ ಪ್ರತಿಪಕ್ಷಗಳಿಗೆ ಕಲಾಪಗಳಲ್ಲಿ ಉತ್ತಮ ಚರ್ಚೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮೋದಿಯವರ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯಿಂದಲೇ ?


ಸಮಾಜದ ಶಾಸಕರನ್ನು ಡಿಸಿಎಂ ಮಾಡಿ, ಮಂತ್ರಿ ಮಾಡಿ ಎಂದು ಹೇಳುವ ಮಠಾಧೀಶರ ಗೊಡ್ಡು ಬೆದರಿಕೆಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ -ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮ ಪರವಾಗಿ ಗೊಡ್ಡು ಬೆದರಿಕೆ ಒಡ್ಡಿದ ಸ್ವಾಮೀಜಿಗಳಿಗೆ ನೀವು ಕೊಟ್ಟ ಕಿಮ್ಮತ್ತು ಎಷ್ಟು ?


ತಮಿಳುನಾಡಿನ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆ ಸಾಧ್ಯವಿಲ್ಲ - ಅಣ್ಣಾಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ
ಸಿಂಗಂ ಎಂದು ಸಂಭ್ರಮಿಸಿದ ಕರ್ನಾಟಕಕ್ಕೆ ಕೊನೆಗೂ ನರಿ ವೇಷ ಗೊತ್ತಾಗಿ ಹೋಯಿತು.


ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರಗಳು ಇದ್ದರೆ ಅದು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ - ನರೇಂದ್ರ ಮೋದಿ, ಪ್ರಧಾನಿ
ಯಾರ ಅಭಿವೃದ್ಧಿಗೆ ಎನ್ನುವುದು ಕೂಡ ಮುಖ್ಯವೇ .


ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಾಗಿಲ್ಲ, ಇದು ನನಗೆ ಅಭ್ಯಾಸವಾಗಿದೆ - ರಾಜುಗೌಡ, ಶಾಸಕ
ಬಂಡಾಯ ಕೂಡ ಬಿಜೆಪಿಗೆ ಅಭ್ಯಾಸವಾಗಿ ಬಿಟ್ಟಿದೆ.


ಬಿಜೆಪಿ -ಆರೆಸ್ಸೆಸ್‌ಅನ್ನು ಕಟ್ಟಿಹಾಕಲು ವಿಪಕ್ಷಗಳಿಗೆ ಒಗ್ಗಟ್ಟೊಂದೇ ಮಂತ್ರ - ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ನೀವು ಧರಿಸಿದ ಹಳೆಯ ಜನಿವಾರದಿಂದ ಕಟ್ಟಿ ಹಾಕಲು ಸಾಧ್ಯವೇ? ಎಂದು ಪ್ರಯತ್ನಿಸಿ ನೋಡಿ.


ಬಕೆಟ್ ಹಿಡಿಯುವವರಿಗೆ, ಬೆನ್ನಿಗೆ ಚೂರಿ ಹಾಕುವವರಿಗೆ ಬಿಜೆಪಿಯಲ್ಲಿ ಅವಕಾಶ ಸಿಗುತ್ತಿರುವುದು ನಿಜಕ್ಕೂ ದುರಂತ -ಸಿದ್ದು ಸವದಿ, ಶಾಸಕ
ಜನಸಾಮಾನ್ಯರ ಬೆನ್ನಿಗೆ ಚೂರಿ ಹಾಕುವುದಕ್ಕಿಂತ ವಾಸಿ.


ಡಾ.ಬಿ.ಆರ್.ಅಂಬೇಡ್ಕರ್ ನನಗೆ ಪ್ರೇರಕ ಶಕ್ತಿ. ಮತ್ತೊಂದು ಶಕ್ತಿ ಬಿ.ಎಸ್.ವಿಜಯೇಂದ್ರ. ಹಾಗಾಗಿ ಬಿಜೆಪಿ ಸೇರಿದೆ - ಎನ್.ಮಹೇಶ್, ಶಾಸಕ
ವಿಜಯೇಂದ್ರ ಅವರು ಅಂಬೇಡ್ಕರ್ ಅವರ ಇನ್ನೊಂದು ಅವತಾರ ಎನ್ನಲಿಲ್ಲವಲ್ಲ ... ಬಚಾವ್.


ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಯಾರ ಜೊತೆ ಎನ್ನುವುದನ್ನು ಬಹಿರಂಗಪಡಿಸದಿರಿ.


ಮುಂದಿನ ಬಾರಿ ಬಿಜೆಪಿಯಿಂದ ರಾಷ್ಟ್ರೀಯವಾದಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ - ಕೆ.ಎಸ್.ಈಶ್ವರಪ್ಪ, ಸಚಿವ
ಹೊಡಿ, ಬಡಿ, ಕೊಲ್ಲು ಎಂದು ನೀವು ಬೊಬ್ಬಿಡುತ್ತಿರುವುದು ನೋಡಿದರೆ ಆ ರಾಷ್ಟ್ರೀಯವಾದಿ ನೀವೇ ಇರಬೇಕು.


ಎಸ್ಸಿ-ಎಸ್ಟಿ ವರ್ಗದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೆಳೆಯುವ ಕೆಲಸವಾಗಬೇಕು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ದಲಿತರಿಗೆ ಮುಖ್ಯಮಂತ್ರಿ ಹುದ್ದೆ ಕೊಡುವ ಮೂಲಕ ಆ ಕೆಲಸ ಮಾಡಿ.


ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ. ಅಧಿಕಾರ ನಡೆಸುತ್ತಿರುವುದೆಲ್ಲ ಬಿಜೆಪಿ, ಆರೆಸ್ಸೆಸ್ - ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕ
ಅವಕಾಶ ಕೊಟ್ಟರೆ ಕಾಂಗ್ರೆಸನ್ನು ಕೂಡ ನಾವೇ ನಡೆಸುತ್ತೇವೆ ಎನ್ನುತ್ತಿದ್ದಾರೆ ಆರೆಸ್ಸೆಸ್ ನಾಯಕರು.


ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡಲು ಅಮೆರಿಕದ ದಿಢೀರ್ ಸೇನಾ ವಾಪಸಾತಿ ನಿರ್ಧಾರವೇ ಕಾರಣ - ಅಶ್ರಫ್‌ಘನಿ, ಅಫ್ಘಾನಿಸ್ತಾನದ ಅಧ್ಯಕ್ಷ
ರಶ್ಯನ್ನರನ್ನು ಓಡಿಸಲು ಅಮೆರಿಕ ತಾಲಿಬಾನ್ ನ್ನು ಸೃಷ್ಟಿಸಿದಾಗಲೇ ಅಫ್ಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟಿತ್ತು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...