ನನ್ನ ತಂಟೆಗೆ ಬಂದವರಿಗೆ ಬಿಪಿ, ಶುಗರ್‌ ಬರುತ್ತದೆ: ಸಚಿವ ಕೆ.ಎಸ್‌. ಈಶ್ವರಪ್ಪ

Update: 2021-08-11 07:36 GMT

ಬೆಳಗಾವಿ: ‘ನನಗೆ ಬಿಪಿ, ಶುಗರ್ ಸಮಸ್ಯೆ ಇಲ್ಲ. ಆದರೆ, ನನ್ನ ತಂಟೆಗೆ ಬಂದವರಿಗೆ ಬಿಪಿ, ಶುಗರ್ ಬರುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ನಾನು ನಾಗಪುರದ ವಿಶ್ವವಿದ್ಯಾಲಯದನು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಅಲ್ಲಿ ಕಲಿತಿದ್ದರಿಂದಲೇ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡಿದ್ದೇನೆ. ಶಿವಮೊಗ್ಗದ ಜನರು ನನ್ನನ್ನು 5 ಬಾರಿ ಆಯ್ಕೆ ಮಾಡಿದ್ದಾರೆ. ಇಡೀ ಜಗತ್ತು ಮೆಚ್ಚುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಸುಲಭ ಶೌಚಾಲಯಕ್ಕೆ ಇಡಬೇಕು ಎಂದು ಹೇಳುವ ‘ಇಟಲಿ ವಿಶ್ವವಿದ್ಯಾಲಯ’ದವರ ಸಂಸ್ಕೃತಿ ಎಂಥದು ? ಅಂತಹ ಹೇಳಿಕೆಯನ್ನು ಕಾಂಗ್ರೆಸ್‌ನವರು ಒಪ್ಪುತ್ತಾರೆಯೇ? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.

‘ನಮ್ಮ ನಾಯಕ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ರಕ್ತ ಕುದಿಯಿತು. ಆ ಸಿಟ್ಟಿನಲ್ಲಿ ‘ಆ ಪದ’ ಬಳಸಿದ್ದೆ. ಕೂಡಲೇ ವಾಪಸ್ ಪಡೆದಿದ್ದೇನೆ. ಆದರೂ ಕಾಂಗ್ರೆಸ್‌ನವರು ರಾಜಕಾರಣಕ್ಕೆ ಬಳಸಿಕೊಂಡರೆ ಏನು ಮಾಡಲಾದೀತು ?’ ಎಂದು ಕೇಳಿದರು. ‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ದೀನದಯಾಳ್ ಉಪಾಧ್ಯಾಯ ಮತ್ತು ವೀರ್‌ ಸಾವರ್ಕರ್ ಫೋಟೊಗಳಿಗೆ ಮಸಿ ಬಳಿಯುತ್ತೇವೆ ಎನ್ನುವ ಕಾಂಗ್ರೆಸ್‌ನವರ ಸಂಸ್ಕಾರ–ಸಂಸ್ಕೃತಿ ಏನು’ ಎಂದು ಅವರು ಪ್ರಶ್ನಿಸಿದರು.

‘ಈ ಸರ್ಕಾರ ಪತನಗೊಳ್ಳುತ್ತದೆ ಎಂಬ ಕೆಟ್ಟ ಕನಸನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಣುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೇವಲ ಕೆಟ್ಟ ಕನಸುಗಳೇ ಬರುತ್ತಿವೆ’ ಎಂದು ಟೀಕಿಸಿದರು.

‘ಈ ಜನ್ಮದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಬರೆದಿಟ್ಟುಕೊಳ್ಳಿ’ ಎಂದು ಹೇಳಿದರು. ಕಾಂಗ್ರೆಸ್‌ನವರು ಹೊಲಸು ರಾಜಕಾರಣ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಅದನ್ನು ಬಾಯಿ ಬಿಟ್ಟು ಹೇಳಬೇಕೇ’ ಎಂದು ಪ್ರಶ್ನಿಸಿದರು. ‘ನನಗೆ ಬಿಪಿ, ಶುಗರ್ ಸಮಸ್ಯೆ ಇಲ್ಲ. ಆದರೆ, ನನ್ನ ತಂಟೆಗೆ ಬಂದವರಿಗೆ ಅದೆಲ್ಲವೂ ಬರುತ್ತದೆ’ ಎಂದು ಅವರು ಈ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News