ನನಗೆ ಯಾವುದೇ ಅಸಮಾಧಾನ ಇಲ್ಲ: ಸಚಿವ ಎಂ.ಟಿ.ಬಿ.ನಾಗರಾಜ್

Update: 2021-08-11 13:03 GMT

ಬೆಂಗಳೂರು, ಆ.11: ನನಗೆ ನೀಡಿರುವ ಖಾತೆಯ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ. ಅವರು ಈಗ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರಿ ಎಂದು ತಿಳಿಸಿದ್ದಾರೆ. ನನಗೆ ಯಾವುದೆ ಅಸಮಾಧಾನ ಇಲ್ಲ. ಆತ್ಮತೃಪ್ತಿಯಿಂದಲೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೈಗಾರಿಕೆಗಳ ಸ್ಥಿತಿಗತಿ ಕುರಿತು ಚರ್ಚಿಸಿದ್ದೇನೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲೆ ಮುಂದುವರೆಯುತ್ತೇನೆ. ರಾಜಕೀಯ ಸನ್ಯಾಸತ್ವ ತೆಗೆದುಕೊಂಡಿಲ್ಲ. ರಾಜಕೀಯ ಅನ್ನೋದು ನಿಂತ ನೀರಲ್ಲ, ಹರಿಯುವ ನದಿ ಇದ್ದಂತೆ. ನಾನು ಯಾವುದೆ ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ಬಿಜೆಪಿಗೆ ಬಂದವನಲ್ಲ. ಎಲ್ಲೆ ಇದ್ದರೂ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕೆಂಬುದಷ್ಟೇ ನನ್ನ ಉದ್ದೇಶ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ನಾನು ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಅನ್ನೋದನ್ನ ಮಾಧ್ಯಮಗಳ ಎದುರು ಹೇಳುವುದಿಲ್ಲ. ಅಲ್ಲದೆ, ಯಾವ ಹೈಕಮಾಂಡ್ ನಾಯಕರನ್ನೂ ನಾನು ಭೇಟಿ ಮಾಡಲ್ಲ. ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ಕೊಡುವುದು, ಬಿಡುವುದು ಅವರಿಗೆ ಬಿಟ್ಟದ್ದು. ಎಲ್ಲ ಗೊಂದಲಗಳು ಶೀಘ್ರವೆ ಪರಿಹಾರವಾಗಲಿವೆ ಎಂಬುದು ನಮ್ಮ ನಂಬಿಕೆ ಎಂದು ನಾಗರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News