ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ: ಸಚಿವ ಆರ್.ಅಶೋಕ್

Update: 2021-08-11 13:10 GMT

ಬೆಂಗಳೂರು, ಆ. 11: ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಸ್ಥಿರ ಸರಕಾರ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಶೋಕ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಆನಂದ್ ಸಿಂಗ್ ಅವರೊಂದಿಗೆ ಶೀಘ್ರದಲ್ಲೇ ಮಾತನಾಡುತ್ತಾರೆ ಮತ್ತು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಹೇಳಿದರು.

ಸಚಿವ ಆನಂದ ಸಿಂಗ್ ಮೂಲತಃ ಬಿಜೆಪಿಯವರು, ನಮ್ಮ ಪಕ್ಷದಲ್ಲಿ ಮುಂದುವರಿಯುತ್ತಾರೆ ಎಂದು ನನಗೆ ನೂರಕ್ಕೆ 100ರಷ್ಟು ವಿಶ್ವಾಸವಿದೆ. ಅವರು ನನ್ನ ಆತ್ಮೀಯ ಸ್ನೇಹಿತ. ಈಗಾಗಲೇ ಅವರೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಅವರನ್ನು ಮನೆಗೆ ಆಹ್ವಾನಿಸಿದ್ದೆ, ಅವರೊಂದಿಗೆ ಚರ್ಚಿಸಲಾಗಿದೆ. ಪೂರ್ಣಿಮಾ ಅವರು ಸಚಿವ ಸ್ಥಾನ ಕೊಡದೆ ಇರುವುದರ ಬಗ್ಗೆ ಯಾವುದೇ ಅಸಮಾಧಾನ ಹೊಂದಿಲ್ಲ, ಬದಲಾಗಿ ಅವರ ಕ್ಷೇತ್ರದ ಬಗ್ಗೆ ಗಮನಹರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಆಶೋಕ್ ಇದೇ ವೇಳೆ ತಿಳಿಸಿದರು.

ಹಾಸನದ ಶಾಸಕ ಪ್ರೀತಂ ಗೌಡ ಹಾಗೂ ಸಚಿವ ಎಂಟಿಬಿ ನಾಗರಾಜು ಅವರೊಂದಿಗೂ ನಾನು ಮಾತನಾಡಿದ್ದೇನೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಹೊಸದಿಲ್ಲಿಗೆ ಭೇಟಿ ನೀಡುವ ಕೆಲವು ಶಾಸಕರನ್ನು ಪರಿಗಣಿಸಿದರೆ, ಇದು ಅವರ ಕ್ಷೇತ್ರಗಳಿಗೆ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಹೋಗಿದ್ದಾರೆಯೇ ಹೊರತು ಯಾವುದೇ ಲಾಬಿಗಾಗಿ ಅಲ್ಲ ಎಂದು ಸಚಿವ ಅಶೋಕ್ ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News