ಆನಂದ್ ಸಿಂಗ್ ಅಸಮಾಧಾನ ಶೀಘ್ರ ಶಮನ: ಸಚಿವ ಸೋಮಣ್ಣ

Update: 2021-08-11 13:38 GMT

ಬೆಂಗಳೂರು, ಆ. 11: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಅಸಮಾಧಾನ ಎರಡು ದಿನಗಳಲ್ಲಿ ಸುಖಾಂತ್ಯವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದು, ಸೂಕ್ಷ್ಮವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಸಚಿವ ಆನಂದ್ ಸಿಂಗ್ ಅವರು ಬುದ್ದಿವಂತರಿದ್ದಾರೆ ಎಂದು ಹೇಳಿದರು.

ಖಾತೆ ಹಂಚಿಕೆ ಬಳಿಕ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಮಾತನಾಡಿದ್ದಾರೆ. ಹೈಕಮಾಂಡ್‍ನೊಂದಿಗೆ ಸಮಾಲೋಚನೆ ನಡೆಸಿ ಮತ್ತೊಮ್ಮೆ ಸಚಿವ ಆನಂದ್ ಸಿಂಗ್ ಅವರೊಂದಿಗೆ ಮಾತನಾಡಿ ಅಸಮಾಧಾನ ಪರಿಹರಿಸಲಿದ್ದಾರೆ ಎಂದು ಸೋಮಣ್ಣ ವಿಶ್ವಾಸದಿಂದ ನುಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಿರಿತನಕ್ಕೆ ಗೌರವ ಕೊಡಬೇಕು. ಅವರೊಬ್ಬರು ಮುತ್ಸದ್ದಿ ನಾಯಕರು. ನಾನು ಹಾಸನ ಜಿಲ್ಲಾ ಉಸ್ತುವಾರಿಯಾಗಿ ಚುನಾವಣೆ ನಡೆಸಿದ ಸಂದರ್ಭದಲ್ಲಿ ಇವರೆಲ್ಲ ಎಲ್ಲಿದ್ದರೋ ಗೊತ್ತಿಲ್ಲ ಎಂದ ಸೋಮಣ್ಣ, ನಮ್ಮ ಒಳ್ಳೆಯತನ ಕೆಲ ಶಾಸಕರಿಗೆ ಖಾರವಾಗಿ ಕಾಣಿಸಿಬರಬಹುದು. ಅವರಿಗೆ ಒಳ್ಳೆಯದಾಗಲಿ. ಇನ್ನು ಮುಂದೆ ಎಲ್ಲರನ್ನೂ ಬಹುವಚನದಲ್ಲೇ ಮಾತನಾಡುವೆ ಎಂದು ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News