ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನನಗೆ ಅನ್ಯಾಯವಾಗಿದೆ: ಮಾಜಿ ಸಚಿವ ಆರ್.ಶಂಕರ್

Update: 2021-08-11 14:20 GMT

ಬೆಂಗಳೂರು, ಆ. 11: `ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನನಗೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ' ಎಂದು ಮಾಜಿ ಸಚಿವ ಆರ್.ಶಂಕರ್ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನನ್ನನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಮನವಿ ಮಾಡಿದ್ದೆ. ಇನ್ನೂ ನಾಲ್ಕು ಸ್ಥಾನಗಳಿವೆ. ಮುಂದಿನ ದಿನಗಳಲ್ಲಿ ವರಿಷ್ಠರ ಗಮನಕ್ಕೆ ತಂದು ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ನಾನು ಹೊಸದಿಲ್ಲಿಗೆ ತೆರಳಿ ವರಿಷ್ಟರನ್ನು ಭೇಟಿ ಮಾಡುವೆ' ಎಂದು ತಿಳಿಸಿದರು.

`ಅಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಿದ್ದೇನೆ. ಅಂದು ನಾನು ಒಳ್ಳೆಯದು ಮಾಡಿದ್ದಕ್ಕೆ ಇಂದು ಹೀಗಾಗಿದೆ. ನಾನೇನು ಸನ್ಯಾಸಿಯಲ್ಲ. ನಮ್ಮಲ್ಲಿ ಒಗ್ಗಟ್ಟು ಇದೆಯೋ, ಇಲ್ವೋ ಎಂಬ ಪ್ರಶ್ನೆ ಬೇಡ. ನಾನಂತೂ ಯಾರ ಪರ, ವಿರುದ್ಧವೂ ಮಾತಾಡುವುದಿಲ್ಲ. ಆದರೆ, ನನ್ನ ತ್ಯಾಗಕ್ಕೆ ಬೆಲೆ ಸಿಗಬೇಕು ಎಂದು ಕೇಳುತ್ತಿದ್ದೇನೆ ಅಷ್ಟೇ' ಎಂದು ಆರ್.ಶಂಕರ್ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News