ಸಚಿವ ಈಶ್ವರಪ್ಪಗೆ ಸಂಸ್ಕೃತಿ ಸಂಸ್ಕಾರಗಳ ಅರಿವೇ ಇಲ್ಲ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

Update: 2021-08-11 16:48 GMT

ಶಿವಮೊಗ್ಗ, ಆ11: ಪ್ರತಿಪಕ್ಷ ಕಾಂಗ್ರೆಸ್ಸಿನವರನ್ನು ಟೀಕಿಸುವ ಭರದಲ್ಲಿ ನಾಲಿಗೆ ಹಿಡಿತ ಕಳೆದುಕೊಂಡಿರುವ ಸಚಿವ ಈಶ್ವರಪ್ಪನವರಿಗೆ ಆರೆಸ್ಸೆಸ್  ಮುಖಂಡರೇ ಕಿವಿಹಿಂಡಿ ಬುದ್ದಿ ಹೇಳಬೇಕು ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ನವರಿಗೆ ಸಂಸ್ಕೃತಿ ಸಂಸ್ಕಾರಗಳ ಅರಿವೇ ಇಲ್ಲ. ಈ ಹಿಂದೆಯೂ ಇದೇ ರೀತಿ ಹೇಳಿಕೆ ಕೊಟ್ಟಿದರು. ಹೊಡೆಯಿರಿ, ಬಡೆಯಿರಿ ಎನ್ನುವುದು ಅದ್ಯಾವ ಸಂಸ್ಕೃತಿಯೋ ನಮಗಂತು ಗೊತ್ತಿಲ್ಲ. ಈ ಕೆಟ್ಟ ವರ್ತನೆಯನ್ನು ಅವರು ಬಿಡದೇ ಹೋದರೆ ಮುದೊಂದು ದಿನ ಬಾರಿ ಬೆಲೆ ತೆರಬೇಕಾಗುತ್ತದೆ ಎಂದ ಅವರು, ರಾಜ್ಯಪಾಲರು ಮಧ್ಯ ಪ್ರವೇಶಿಸಿ ಅವರ ಉದ್ದಟತನವನ್ನು ಕ್ಷಮಿಸದೆ ಸಂಪುಟದಿಂದ  ಕೈ ಬಿಡಬೇಕು ಎಂದರು.

 ಬಾಯಿಚಪಲಕ್ಕಾಗಿ ಮನಸ್ಸಿಗೆ ಬಂದಂತೆ ಈಶ್ವರಪ್ಪ ಮಾತನಾಡಿದ್ದಾರೆ. ಇದೊಂದು ವಿವಾದಾತ್ಮಕ ಹೇಳಿಕೆ. ಪ್ರಮಾಣವಚನ ಸ್ವೀಕರಿಸುವಾಗ ರಾಗ, ಧ್ವೇಷವಿಲ್ಲದೆ ನಡೆದುಕೊಳ್ಳುವೆ ಎಂದು ದೇವರ ಹೆಸರಲ್ಲಿ ಪ್ರಮಾಣ ಮಾಡಿದ ಈಶ್ವರಪ್ಪ ಇಂದು ಈ ರೀತಿ ಅಶ್ಲೀಲವಾಗಿ ಬೈಗುಳದ ಮಾತನಾಡುತ್ತಾರೆ ಎಂದರೆ ಭಾರತ ಮಾತೆಗೆ ಕೊಡುವ ಗೌರವ ಇದೆ ಏನು. ಮಾತು ಮಾತುಗೆ ಆರೆಸ್ಸೆಸ್ ಸಂಸ್ಕೃತಿಯಿಂದ ಬೆಳೆದು ಬಂದವನು ನಾನು ಎಂದು ಗರ್ವದಿಂದ ಹೇಳುವ ಈಶ್ವರಪ್ಪ ಅವರನ್ನು ಬೇಕಾಗಿದೆ ಎಂದರು.

ಶಿವಮೊಗ್ಗದ ಜಿಲ್ಲಾಧಿಕಾರಿ, ಸಂಸದ ಬಿ.ವೈ.ರಾಘವೇಂದ್ರ ಅವರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ.  ಜಿಲ್ಲೆಯಲ್ಲಿ ಕರೋನಾ ತಡೆಯುವಲ್ಲಿ ವಿಫಲರಾಗಿದ್ದಾರೆ. ಜೋಗ ಜಲಪಾತ ವೀಕ್ಷಣೆಗೆ ಪ್ರತಿದಿನ ಸಾವಿರಾರೂ ಜನ ಬರುತ್ತಿದ್ದರೂ ಕೂಡ ಯಾವ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಕರೋನ ಹೆಚ್ಚಾಗಲು ಜಿಲ್ಲಾಡಳಿತವೇ ಕಾರಣವಾಗಿದೆ. ಇವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಝಮೀರ್ ಅಹಮ್ಮದ್ ಮನೆ ಮೇಲೆ ಇಡಿ ದಾಳಿ ನಡೆಸಿದ ಕ್ರಮವನ್ನು ಖಂಡಿಸಿದ ಅವರು, ಇದೊಂದು ರಾಜಕೀಯ ಪ್ರೇರಿತವಾಗಿದೆ. ಯಡಿಯೂರಪ್ಪನವರ ಮಕ್ಕಳ ಆಸ್ತಿಯ ವಿವರ ತನಿಖಾ ಸಂಸ್ಥೆಗಳಿಗೆ ಗೊತ್ತಿಲ್ಲವೆ. ಅವರ ಆಸ್ತಿ ಹೆಚ್ಚಾಗಿಲ್ಲವೆ. ಅವರೇನ್ನು ಶುಂಠಿ, ಭತ್ತ ಬೆಳೆದಿದ್ದಾರೆಯೇ ಎಂದು ತಿರುಗೇಟು ನೀಡಿದರು.

ಕೋಟಾ ಶ್ರೀನಿವಾಸ ಪೂಜಾರಿ ಅವರು ಹರತಾಳು ಹಾಲ್ಲಪ್ಪನವರಿಗೆ ಸಚಿವ ಪಟ್ಟವನ್ನು ತಪ್ಪಿಸಿದ್ದಾರೆ. ಒಂದು ಕಾಲದಲ್ಲಿ ನನಗೂ ಸಚಿವ ಪಟ್ಟವನ್ನು ತಪ್ಪಿಸಲಾಗಿತ್ತು. ಈಗ ಅದು ಸರಿಹೋಗಿದೆ ಎಂದ ಅವರು, ಈ ಹಿಂದೆ ಸಿಗಂದೂರು ವಿಷಯಕ್ಕೆ ಬಂದರೆ ಮೂವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದೆ. ಆ ಮಾತು ಸತ್ಯವಾಗಿದೆ. ಒಬ್ಬರು ಈಗಾಗಲೇ ಅಧಿಕಾರ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಬಾಕಿ ಉಳಿದಿದ್ದಾರೆ ಎಂದರು.

ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ಬೇಳೂರು, ಈ ಕಾಯಿದೆಯಿಂದ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ಅನ್ಯಾಯವಾಗುತ್ತದೆ. ಕೂಡಲೇ ಇದನ್ನು ವಾಪಸ್ಸು ತೆಗೆದುಕೊಳ್ಳಬೇಕು ಮತ್ತು ಮಲೆನಾಡಿನಲ್ಲಿ ಇರುವ ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಾಶಿ ವಿಶ್ವನಾಥ್, ಜಿ.ಡಿ.ಮಂಜುನಾಥ್, ರಾಜಶೇಖರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News