×
Ad

ಬಿಎಸ್‍ವೈ ಅವರನ್ನೇ ಬಿಡದವರು ಬೊಮ್ಮಾಯಿಯನ್ನು ಬಿಡುವರೇ?: ಕಾಂಗ್ರೆಸ್ ಪ್ರಶ್ನೆ

Update: 2021-08-11 22:52 IST

ಬೆಂಗಳೂರು, ಆ. 11: `ಬಿಜೆಪಿಯಲ್ಲಿನ `ಸಂಘಪರಿವಾರ ವಿರುದ್ಧ ಜನತಾಪರಿವಾರ' ಕಿತ್ತಾಟ ಮುಗಿಯದು. ವಲಸಿಗರೇ ಎಲ್ಲ ಅಧಿಕಾರ ಅನುಭವಿಸುತ್ತಿರುವಾಗ ಮೂಲ ಬಿಜೆಪಿಗರು ಸುಮ್ಮನಿರುವುದಾದರೂ ಹೇಗೆ! ಬವಸರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಒಂದು ದಿನವೂ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡದಂತೆ ಕಾಡುವುದು ನಿಶ್ಚಿತ! ಬಿಎಸ್‍ವೈ ಅವರನ್ನೇ ಬಿಡದವರು ಬೊಮ್ಮಾಯಿಯವರನ್ನು ಬಿಡುವರೇ!?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಕಳೆದ ಬಾರಿ 3 ಸಿಎಂ ಬದಲಿಸಿದ್ದ ಬಿಜೆಪಿ, ಈ ಬಾರಿ 6 ಸಿಎಂ ಬದಲಿಸುವಂತಿದೆ! ಬಿಜೆಪಿ ತನ್ನ ಅಧಿಕಾರವಧಿಯಲ್ಲಿ ಪ್ರತಿದಿನವೂ ಆಂತರಿಕ ಕಿತ್ತಾಟಗಳಲ್ಲಿಯೇ ಕಳೆಯಿತೇ ಹೊರತು, ಒಂದು ದಿನವೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ, ಜನರೆಡೆಗೆ ತಿರುಗಿಯೂ ನೋಡಲಿಲ್ಲ. ರಾಜ್ಯಕ್ಕೆ ಬಿಜೆಪಿ ಆಡಳಿತವೆಂದರೆ ಶಾಪವಿದ್ದಂತೆ' ಎಂದು ವಾಗ್ದಾಳಿ ನಡೆಸಿದೆ.

ಓಡುವುದಿಲ್ಲ ಏಕೆ?: `ಕೊರೋನ 3ನೆ ಅಲೆಯ ಆತಂಕ, ಲಸಿಕೆ ನೀಡುವಿಕೆಯಲ್ಲಿ ವೈಫಲ್ಯ. ಇದ್ಯಾವುದನ್ನೂ ಗಮನಿಸದ ಬಿಜೆಪಿ ಸರಕಾರ ಖಾತೆ ಕಿತ್ತಾಟ, ಮೂಲ ವಿರುದ್ಧ ವಲಸಿಗರ ರಂಪಾಟದಲ್ಲಿ ನಿರತವಾಗಿದೆ. 2 ವರ್ಷವನ್ನೂ ಹೀಗೆಯೇ ಕಳೆಯಿತು, ಮುಂದೆಯೂ ಹೀಗೆಯೇ ಕಳೆಯಲಿದೆ. ಅಧಿಕಾರಕ್ಕಾಗಿ ದೆಹಲಿಗೆ ಓಡುವ ಬಿಜೆಪಿಗರು ಲಸಿಕೆಗೆ ಬೇಡಿಕೆ ಇಡಲು ಓಡುವುದಿಲ್ಲ ಏಕೆ?' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
`ಕೊರೋನ ಪರಿಹಾರ ಲಸಿಕೆಗಳೇ ಹೊರತು ಲಾಕ್‍ಡೌನ್ ಅಲ್ಲ. ಆದರೆ ಲಸಿಕೆ ಕೊಡಲಾಗದ ಬಿಜೆಪಿ ಸರಕಾರ ಮತ್ತೊಮ್ಮೆ ಲಾಕ್‍ಡೌನ್‍ಗೆ ಸಿದ್ಧಗೊಳ್ಳುತ್ತಿರುವಂತಿದೆ. ಒಂದು ವಾರದ ಲಾಕ್‍ಡೌನ್‍ನಿಂದಾಗುವ ನಷ್ಟದ ಮೊತ್ತದಲ್ಲಿಯೇ ಸರ್ವರಿಗೂ ಲಸಿಕೆ ಕೊಡಬಹುದು! ಲಸಿಕೆ ಕೊಡಲಾಗದ ತಮ್ಮ ವೈಫಲ್ಯಕ್ಕೆ ಜನರನ್ನ ಸಂಕಷ್ಟಕ್ಕೆ ದೂಡುವುದು ಎಷ್ಟು ಸರಿ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

`ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ ಯಾವುದೇ ದ್ವೇಷ-ಅಸೂಯೆ ಇಲ್ಲದೇ, ನಿಷ್ಪಕ್ಷಪಾತ ಆಡಳಿತ ನೀಡುವುದಾಗಿ ಹೇಳಿದ್ದರು. ಈಗ ಪ್ರಚೋದನಕಾರಿ ಹೇಳಿಕೆ, ಅವಾಚ್ಯ ಪದ ಬಳಕೆಯ ಮೂಲಕ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'

-ಈಶ್ವರ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News