ಬೆಂಗಳೂರು ನಗರದಲ್ಲಿ ಲಾಕ್‍ಡೌನ್ ಇಲ್ಲ: ಸಚಿವ ಆರ್.ಅಶೋಕ್

Update: 2021-08-13 14:20 GMT

ಬೆಂಗಳೂರು, ಆ. 13: `ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ `ಲಾಕ್‍ಡೌನ್' ಮಾಡುವ ಯೋಚನೆ ಸರಕಾರದ ಮುಂದಿಲ್ಲ' ಎಂದು ಇಂದಿಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕೋವಿಡ್ ಪರಿಸ್ಥಿತಿಯ ಕುರಿತಂತೆ ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಆ.15ರ ನಂತರ ಪರಿಸ್ಥಿತಿಯನ್ನ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಸ್ತುತ ಕೇರಳ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ಅತಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳಲು ಎಲ್ಲ ರೀತಿಯ ಕ್ರಮಗಳನ್ನ ಅನುಸರಿಸುತ್ತಿದ್ದೇವೆ' ಎಂದು ತಿಳಿಸಿದರು.

`ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಆದ ತಪ್ಪುಗಳು ಮರುಕಳಿಸಿದಂತೆ ಮೂರನೇ ಅಲೆಯಲ್ಲಿ ಮುನ್ನೆಚ್ಚರಿಕೆಗಳನ್ನ ವಹಿಸಲಾಗುವುದು. ಪ್ರಸ್ತುತ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸಾಲು, ಸಾಲು ಹಬ್ಬಗಳು ಬರುತ್ತಿರುವ ಕಾರಣ ಸಾರ್ವಜನಿಕರು ಗುಂಪುಗೂಡದಂತೆ ನಿರ್ಬಂಧಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಕೇವಲ ಲಾಕ್‍ಡೌನ್ ಅಥವಾ ಕರ್ಫ್ಯೂ ಒಂದೇ ಕೋವಿಡ್ ನಿಯಂತ್ರಣಕ್ಕೆ ಪರಿಹಾರವಾಗಲಾರದು' ಎಂದು ಅವರು ತಿಳಿಸಿದರು.

`ಕೋವಿಡ್ ಲಾಕ್‍ಡೌನ್ ಮತ್ತು ಕಫ್ರ್ಯೂ ಹೇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳಲ್ಲಿ ಅಗತ್ಯ ಕ್ರಮಗಳನ್ನ ಅನುಸರಿಸಲು ಸೂಚನೆ ನೀಡಲಾಗಿದೆ. ಸದ್ಯಕ್ಕೆ ಲಾಕ್‍ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಆದರೆ, ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ಜನರು ಮಾರ್ಗಸೂಚಿ ಪಾಲಿಸಬೇಕು' ಎಂದು ಹೇಳಿದರು.

ಮಕ್ಕಳಲ್ಲಷ್ಟೇ ಕೋವಿಡ್ ಕಾಣಿಸಿಕೊಳ್ಳುತ್ತಿಲ್ಲ: `ಕೋವಿಡ್ ಸೋಂಕು ಕೇವಲ ಈ ಬಾರಿ ಮಕ್ಕಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ವರದಿಗಳಿಲ್ಲ. ಆದಾಗ್ಗ್ಯೂ ಸರಕಾರ ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುತ್ತಿದೆ' ಎಂದು ಸಚಿವ ಅಶೋಕ್ ಇದೇ ವೇಳೆ ತಿಳಿಸಿದರು.

ಸ್ಟ್ಯಾಂಪ್ ಡ್ಯೂಟಿ ಇಳಿಕೆ: `ಮಧ್ಯಮ ವರ್ಗದವರ ಮನೆ ಕೊಳ್ಳಬೇಕೆಂಬ ಕನಸಿಗೆ ಮತ್ತಷ್ಟು ಬಲ ನೀಡುವ ನಿರ್ಧಾರವೊಂದನ್ನ ಸರಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಮಾಹಿತಿ ನೀಡಿದ ಸಚಿವ ಅಶೋಕ್, `45 ಲಕ್ಷ ರೂ.ಗಳ ಒಳಗಿನ ಮೊತ್ತದಲ್ಲಿ ಮನೆ ಖರೀದಿಸುವವರಿಗೆ ಇಲ್ಲಿಯವರೆಗಿದ್ದ ಶೇ.5ರಷ್ಟಿದ್ದ ಸ್ಟ್ಯಾಂಪ್ ಡ್ಯೂಟಿಯನ್ನ ಶೇ.3ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮನೆಕೊಳ್ಳಲು ಯೋಚಿಸುತ್ತಿರುವವರಿಗೆ ನಿಜಕ್ಕೂ ಸಂತಸದ ಸುದ್ದಿಯಾಗಿದೆ' ಎಂದು ತಿಳಿಸಿದರು.

ಕಳಪೆ ಕಾಮಗಾರಿ: `ಕಮರ್ಷಿಯಲ್ ಸ್ಟ್ರೀಟ್‍ನಲ್ಲಿನ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಗುತ್ತಿಗೆದಾರರು ಕೂಡಲೇ ಕಾಮಗಾರಿಯನ್ನ ಪುನಃ ಕೈಗೊಂಡು ಸಂಪೂರ್ಣವಾಗಿ ಮತ್ತೆ ನಿರ್ಮಿಸಬೇಕು. ರಸ್ತೆ ಕಾಮಗಾರಿಯನ್ನ ಈಗಾಗಲೇ ಉದ್ಘಾಟನೆ ಮಾಡಲಾಗಿದ್ದು, ಆದರೆ ಇಲ್ಲಿನ ವರ್ತಕರು ಹಾಗೂ ವೆಲ್‍ಫೇರ್ ಅಸೋಸಿಯೇಷನ್ ಅವರು ಈ ಕೆಲಸದ ಕುರಿತು ಸಾಕಷ್ಟು ದೂರುಗಳನ್ನ ಸಲ್ಲಿಸಿದ್ದರು.

ಈ ಕಾರಣಕ್ಕೆ ಖುದ್ದು ನಾನೇ ಕಾಮಗಾರಿಯನ್ನ ಪರಿಶೀಲನೆ ಮಾಡಲು ಬಂದಿದ್ದೇನೆ. ಗುತ್ತಿಗೆದಾರರು ರಸ್ತೆಗೆ ಕಳಪೆ ಗುಣಮಟ್ಟದ ಟೈಲ್ಸ್‍ಗಳನ್ನ ಜೋಡಿಸಿದ್ದಾರೆ. ಇಲ್ಲಿ ಹಾಕಿರುವ ಟೈಲ್‍ಗಳು ಪೇಂಟ್ ಆಗಿಯೇ ಸ್ಥಳಕ್ಕೆ ಬರಬೇಕು. ಆದರೆ, ಇಲ್ಲಿಗೆ ತಂದ ನಂತರ ಟೈಲ್‍ಗಳಿಗೆ ಬಣ್ಣ ಬಳಿಯಲಾಗಿದೆ. ಈ ಕಾಮಗಾರಿಯಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದರಿಂದ ಗುತ್ತಿಗೆದಾರರು ತಮ್ಮ ಖರ್ಚಿನಲ್ಲಿಯೇ ಕಾಮಗಾರಿಯನ್ನ ಸಂಪೂರ್ಣವಾಗಿ ಪುನಃ ಕೈಗೊಳ್ಳಬೇಕು ಮತ್ತು 3 ವರ್ಷಗಳ ಕಾಲ ಅವರೇ ಇದರ ನಿರ್ವಹಣಾ ವೆಚ್ಚವನ್ನ ನೋಡಿಕೊಳ್ಳಬೇಕು ಎಂದು ಅಶೋಕ್ ನಿರ್ದೇಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News