×
Ad

ಖಾತೆ ಬದಲಾವಣೆ ವಿಚಾರಕ್ಕೆ ನಾನು ದಿಲ್ಲಿಗೆ ಹೋಗುವುದಿಲ್ಲ: ಸಚಿವ ಆನಂದ್ ಸಿಂಗ್

Update: 2021-08-13 19:52 IST

ವಿಜಯನಗರ, ಆ. 13: `ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ನಾನು ಯಾವುದೇ ಕಾರಣಕ್ಕೂ ಹೊಸದಿಲ್ಲಿಗೆ ಹೋಗುವುದಿಲ್ಲ. ನಾನು ದಿಲ್ಲಿಗೆ ಹೋಗುತ್ತೇನೆಂದು ಎಲ್ಲೂ ಹೇಳಿಲ್ಲ. ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸರಿಪಡಿಸಲಿದ್ದಾರೆ' ಎಂದು ಸಚಿವ ಆನಂದ್ ಸಿಂಗ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಹೊಸಪೇಟೆ ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ ಬಳಿ ಮಾತನಾಡಿದಾಗಲೂ ದಿಲ್ಲಿಗೆ ಹೋಗುತ್ತೇನೆ ಎಂದು ಹೇಳಿಲ್ಲ. ಬಿ.ಎಸ್.ಯಡಿಯೂರಪ್ಪನವರು ಹಿರಿಯರಾಗಿರುವುದರಿಂದ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಖಾತೆ ಸಂಬಂಧ ಅವರ ಬಳಿ ಏನು ಮಾತನಾಡಿಲ್ಲ. ಯಾವುದೇ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸಿ.ಎಂ.ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ' ಎಂದು ಸ್ಪಷ್ಟಪಡಿಸಿದರು.

`ನಾನು ಪಕ್ಷದಲ್ಲಿಯೆ ಇರುತ್ತೇನೆ. ಹಿರಿಯರ ಮಾತಿಗೆ ಗೌರವ ಕೊಡುತ್ತೇನೆ. ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಂತರ ಪುನಃ ನಾನು ಬೆಂಗಳೂರಿಗೆ ಹೋಗುತ್ತೇನೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡುವ ಜವಾಬ್ದಾರಿ ವಹಿಸಿದ್ದಾರೆ. ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಧ್ವಜಾರೋಹಣ ಮಾಡುತ್ತಾರೆ. ನೂತನ ಜಿಲ್ಲೆ ರಚನೆ ಬಳಿಕ ನಡೆಯುತ್ತಿರುವ ಮೊದಲ ಸ್ವಾತಂತ್ರ್ಯ ದಿನಾಚರಣೆ ಇದು. ಈ ಸುವರ್ಣ ಗಳಿಗೆಯಲ್ಲಿ ಧ್ವಜಾರೋಹಣಕ್ಕೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ವಿಜಯನಗರ ಕ್ಷೇತ್ರದ ಜನರ ಋಣ ತೀರಿಸಲು ನನಗೆ ಸಾಧ್ಯವೇ ಇಲ್ಲ' ಎಂದು ಭಾವುಕರಾದರು.

ಕಚೇರಿ ಕಾರ್ಯಾರಂಭ: ಹೊಸಪೇಟೆ ನಗರದ ರಾಣಿಪೇಟೆಯಲ್ಲಿನ ಸಚಿವ ಆನಂದ್ ಸಿಂಗ್ ಅವರ ಕಚೇರಿ ಶುಕ್ರವಾರ ಪುನಃ ಆರಂಭಗೊಂಡಿದೆ. ಅವರ ಆಪ್ತ ಸಹಾಯಕರು, ಕಚೇರಿಯ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿರುವುದು ಕಂಡು ಬಂತು. ಆದರೆ, ನಾಮಫಲಕ ಇನ್ನೂ ಅಳವಡಿಸಿಲ್ಲ. ಖಾತೆ ಬದಲಿಸಬೇಕೆಂದು ಪಟ್ಟು ಹಿಡಿದಿರುವ ಆನಂದ್ ಸಿಂಗ್, ಆ.10ರಂದು ಅವರ ಕಚೇರಿ ಬಂದ್ ಮಾಡಿ, ಅದರ ನಾಮಫಲಕ ತೆರವುಗೊಳಿಸಿದ್ದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News