2024ರ ಒಲಿಂಪಿಕ್ಸ್ ಗೆ ರಾಜ್ಯದಿಂದ ಕನಿಷ್ಠ 100 ಕ್ರೀಡಾಪಟುಗಳು ಭಾಗಿ: ಸಚಿವ ಡಾ.ನಾರಾಯಣಗೌಡ

Update: 2021-08-13 14:53 GMT

► ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ" ಅಭಿಯಾನ

ಬೆಂಗಳೂರು, ಆ.13: ಪ್ಯಾರೀಸ್‍ನಲ್ಲಿ 2024ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಕನಿಷ್ಠ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಿದ್ದು, ಈಗಾಗಲೇ 35 ಕ್ರೀಡಾಪಟುಗಳನ್ನು ಗುರುತಿಸಲಾಗಿದೆ. ಈ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ.ಪ್ರೋತ್ಸಾಹ ಧನ ನೀಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಅವಶ್ಯ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ" ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕದ 5 ಯುವತಿಯರು ಕಾಶ್ಮೀರದ ಕೊಲ್‍ಹೊಯ್ ಪರ್ವತ ಹತ್ತುವ ಮೂಲಕ, ನಂತರ ಕಾಶ್ಮೀರದಿಂದ ಹೊರಟು 3000 ಕಿ.ಮೀ. ಸೈಕಲ್ ಯಾನ ಮಾಡುತ್ತಾ, ಕಾರವಾರ ತಲುಪಿ ಕಾರವಾರದಿಂದ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ. ಸಮುದ್ರದ ಮೂಲಕ ಕಯಾಕಿಂಗ್ ಯಾನ ಮಾಡುತ್ತಾ ಮಂಗಳೂರು ತಲುಪಲಿದ್ದಾರೆ ಎಂದು ನಾರಾಯಣಗೌಡ ವಿವರಿಸಿದರು.

ಇದು ಸುಮಾರು 45 ದಿನಗಳ ಸಾಹಸ ಯಾತ್ರೆ ಆಗಿದ್ದು, ಸ್ತ್ರೀ ಶಕ್ತಿ ಧೈರ್ಯ, ಸಾಹಸ, ಧೈರ್ಯ ಸಾಹಸಿ ಲಕ್ಷ್ಮೀ, ನಾರಿಯ ಜೊತೆ ಪುರುಷರ ವಿಕಾಸ ಎನ್ನುವಂತಹ ತತ್ವವನ್ನು ಬಿಂಬಿಸುವಂತಹ ಒಂದು ವಿಭಿನ್ನವಾದ ಕಾರ್ಯಕ್ರಮವಾಗಿದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ ಹಾಗೂ ಭಾರತೀಯ ಪರ್ವತಾರೋಹಣ ಸಂಸ್ಥೆಯ ಸಹಯೋಗದೊಂದಿಗೆ ನಡೆಸುತ್ತಿರುವ ಈ ಯಾನಕ್ಕೆ ಇದೇ ಆ.17 ರಂದು ಚಾಲನೆ ನೀಡಲಾಗುವುದು. ಪುಷ್ಪಾ(ಮಡಿಕೇರಿ), ಐಶ್ವರ್ಯ(ಶಿವಮೊಗ್ಗ), ಧನಲಕ್ಷ್ಮಿ(ಶಿವಮೊಗ್ಗ), ಆಶಾ(ಬೆಂಗಳೂರು) ಹಾಗೂ ಬಿಂದು(ಮೈಸೂರು) ಈ ಐವರು ಯುವತಿಯರು ಈ ಸಾಹಸ ಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021: ದೇಶದ ಪ್ರತಿಷ್ಠಿತ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021ನ್ನು ಬೆಂಗಳೂರಿನಲ್ಲಿ ಮಾರ್ಚ್ 5 ರಿಂದ 12 ದಿನ ನಡೆಸಲಾಗುತ್ತಿದ್ದು, ದೇಶದ ಎಲ್ಲೆಡೆಯಿಂದ 20 ಕ್ರೀಡೆಗಳ 7000 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಧಾನಿ ನರೇಂದ್ರ ಮೋದಿಯನ್ನು ಕ್ರೀಡಾಕೂಟ ಉದ್ಘಾಟನೆಗೆ ಆಹ್ವಾನಿಸಲಾಗುವುದು. ಕ್ರೀಡಾಕೂಟದ ಆಯೋಜನೆ ಜೈನ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆಯಲಿದೆ ಎಂದು ನಾರಾಯಣಗೌಡ ತಿಳಿಸಿದರು.

ಕ್ರೀಡಾಪಟುಗಳಿಗೆ ಶೇಕಡ 2 ರಷ್ಟು ಮೀಸಲಾತಿ: ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಶೇಕಡ 2 ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ಮೀಸಲಿರಿಸಿದ್ದು, ಇತರ ಇಲಾಖೆಗಳಗೂ ವಿಸ್ತರಿಸುವ ಕಾರ್ಯ ಚಾಲನೆಯಲ್ಲಿದೆ. ಕ್ರೀಡಾಪಟುಗಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಲು ಕಂಠೀರವ ಸ್ಟೇಡಿಯಂನಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಿಂದ 2 ಕೋಟಿ ರೂ.ವೆಚ್ಚದಲ್ಲಿ ಮಂಡ್ಯದಲ್ಲಿಯೂ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಕ್ರೀಡಾ ವಸತಿನಿಲಯಗಳ ಆಧುನೀಕರಣ:  ರಾಜ್ಯದಲ್ಲಿ 34 ಕ್ರೀಡಾ ವಸತಿ ನಿಲಯಗಳಿದ್ದು, 2300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 150 ಜನ ತರಬೇತುದಾರರಿಂದ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕ್ರೀಡಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ವಿನಾಯಿತಿಯನ್ನು ಇಲಾಖೆಯಿಂದ ನೀಡಲಾಗುತ್ತಿದೆ. ಕ್ರೀಡಾ ವಸತಿ ನಿಲಯಗಳ ಆಧುನೀಕರಣಕ್ಕೆ ಪ್ರಸಕ್ತ ಸಾಲಿನಲ್ಲಿ 5.75 ಕೋಟಿ ರೂ.ವೆಚ್ಚ ಭರಿಸಲಾಗುತ್ತಿದೆ ಎಂದು ನಾರಾಯಣಗೌಡ ತಿಳಿಸಿದರು.

ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿನಿಲಯ: ಪ್ರಸಕ್ತ ಸಾಲಿನಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿನಿಲಯಗಳನ್ನು ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಕಲಬುರ್ಗಿ, ಕೋಲಾರ, ಹಾಸನ ಮತ್ತು ಧಾರವಾಡಗಳಲ್ಲಿ ತಲಾ 1.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ 5 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಕ್ರೀಡಾಂಗಣಗಳ ಆಧುನೀಕರಣ: ಕಂಠೀರವ ಕ್ರೀಡಾಂಗಣದಲ್ಲಿ 4.50 ಕೋಟಿ ರೂ., ಚಿಕ್ಕಮಗಳೂರು ಮತ್ತು ಹಾಸನದಲ್ಲಿ ತಲಾ 7.50 ಕೋಟಿ ರೂ.ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಕೋರಮಂಗಲ ಒಳಾಂಗಣ ಕ್ರೀಡಾಂಗಣ 5 ಕೋಟಿ ರೂ., ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು 10 ಕೋಟಿ ರೂ. ಹಾಗೂ ಕೆ.ಆರ್.ಪೇಟೆ ತಾಲ್ಲೂಕು ಕ್ರೀಡಾಂಗಣವನ್ನು 14.50 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಳಸಲಾಗುತ್ತಿದೆ ಎಂದು ಅವರು ಹೇಳಿದರು.

ಕೇಂದ್ರದಿಂದ 31 ಖೇಲೋ ಇಂಡಿಯಾ ಕೇಂದ್ರ ಮಂಜೂರು: ಭಾರತ ಸರಕಾರವು ರಾಜ್ಯಕ್ಕೆ ಅತೀ ಹೆಚ್ಚು ಅಂದರೆ ಜಿಲ್ಲೆಗೆ ತಲಾ ಒಂದರಂತೆ ಒಟ್ಟು 31 ಖೇಲೋ ಇಂಡಿಯಾ ಕೇಂದ್ರಗಳನ್ನು ಮಂಜೂರು ಮಾಡಿದ್ದು, 2.17 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ. 'ಜಿಲ್ಲೆಗೆ ಒಂದು ಕ್ರೀಡೆ' ಕಲ್ಪನೆಯ ಈ ಕೇಂದ್ರಗಳಿಂದ ಅಗತ್ಯ ತರಬೇತಿ ನೀಡಲಾಗುವುದು ಎಂದು ನಾರಾಯಣಗೌಡ ತಿಳಿಸಿದರು.

ಜಕ್ಕೂರು ಮೈಮಾನಿಕ ತರಬೇತಿ ಶಾಲೆಗೆ ಕಾಯಕಲ್ಪ: ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಸೆಪ್ಟೆಂಬರ್‍ನಿಂದ ಪುನಾರಂಭಗೊಳ್ಳಲಿದ್ದು, ವಾರ್ಷಿಕ ಪೈಲಟ್‍ಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಜಕ್ಕೂರು ವೈಮಾನಿಕ ತರಬೇತಿ ಶಾಲೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಖಾಸಗಿ ಕಂಪೆನಿಗಳಿಂದ ವಸೂಲಿಯಾಗಬೇಕಿದ್ದ ಬಾಡಿಗೆ ವಸೂಲ ಮಾಡುತ್ತಿದ್ದು, ಬಾಡಿಗೆ ನೀಡದ ಕಂಪನಿಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News