ಎಸ್ಟಿ ಸಮುದಾಯದ ಮೀಸಲಾತಿಯ ಪ್ರಮಾಣ ಹೆಚ್ಚಳಕ್ಕೆ ಬಿಜೆಪಿ ಎಸ್.ಟಿ. ಮೋರ್ಚಾದಿಂದ ಸಿಎಂಗೆ ಮನವಿ

Update: 2021-08-13 15:38 GMT

ಬೆಂಗಳೂರು, ಆ. 13: ರಾಜ್ಯ ಎಸ್.ಟಿ. ಸಮುದಾಯದ ಮೀಸಲಾತಿಯ ಪ್ರಮಾಣವನ್ನು ಈಗ ಇರುವ ಶೇ. 3 ರಿಂದ ಶೇ. 7.5ಕ್ಕೆ ಹೆಚ್ಚಳ ಮಾಡುವಂತೆ ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಘಟಕವು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. 

ಮೋರ್ಚಾದ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಅವರು ಮುಖ್ಯಮಂತ್ರಿಗೆ ಇಂದು ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಎಸ್.ಟಿ. ಸಮುದಾಯಗಳ ಜನಸಂಖ್ಯೆ ಸುಮಾರು 75 ಲಕ್ಷಕ್ಕೂ ಅಧಿಕವಿದ್ದು ನಮ್ಮ ಸಮುದಾಯಕ್ಕೆ ಶೇ. 3ರಷ್ಟು ಮೀಸಲಾತಿ ನಿಗದಿಯಾಗಿದೆ. ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕಾದ ಪ್ರಮಾಣಕ್ಕಿಂತ ಇದು ಕಡಿಮೆ ಇರುತ್ತದೆ. ಮೀಸಲಾತಿ ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸುವ ಕುರಿತು ಸಮುದಾಯದಿಂದ ರಾಜ್ಯಾದ್ಯಂತ ಬೇಡಿಕೆ ಹಾಗೂ ಹೋರಾಟ ಮಾಡಿದ್ದರಿಂದ ಅಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದರು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ. 

ಸದರಿ ನ್ಯಾಯಮೂರ್ತಿಗಳು ಸಲ್ಲಿಸಿರುವ ವರದಿಯು ಸರ್ಕಾರದ ಪರಿಶೀಲನೆ ಹಂತದಲ್ಲಿದೆ. ತಾವು ಈ ಸಮುದಾಯದ ಬಹುದಿನಗಳ ಬೇಡಿಕೆಯನ್ನು ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಈ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿ ಮನವಿ ಕೋರಿದೆ. 

ತಾವು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಪ್ರತ್ಯೇಕವಾಗಿ ಸಚಿವಾಲಯವನ್ನು ಘೋಷಣೆ ಮಾಡಿದ್ದು, ಇದರಿಂದ ಬಹುದಿನಗಳ ಈ ಸಮುದಾಯದ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ತಿಪ್ಪರಾಜು ಹವಾಲ್ದಾರ್ ಅವರು ಇನ್ನೊಂದು ಪತ್ರದಲ್ಲಿ ತಿಳಿಸಿದ್ದಾರೆ. 

ಇದರಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸಹಾಯ ಮಾಡಿದಂತಾಗಿದೆ. ಅದಕ್ಕಾಗಿ ಈ ನಾಡಿನ ಸಮಗ್ರ ಎಸ್.ಟಿ. ಸಮುದಾಯಗಳ ಪರವಾಗಿ ಹಾಗೂ ರಾಜ್ಯ ಎಸ್.ಟಿ. ಮೋರ್ಚಾದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. 

ತಮ್ಮ ಅಧಿಕಾರಾವಧಿಯಲ್ಲಿ ಈ ಸಮುದಾಯದ ಇನ್ನೊಂದು ಪ್ರಮುಖ ಬೇಡಿಕೆಯಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಆದಿಕವಿ ಶ್ರೀ ವಾಲ್ಮೀಕಿ ಅಧ್ಯಯನ ಪೀಠವನ್ನು ಪ್ರಾರಂಭಿಸಿದ್ದೀರಿ. ಇದರಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಬದುಕಿನ ಅಧ್ಯಯನಕ್ಕೆ ಚಾಲನೆ ಲಭಿಸಿದೆ. ಜಗತ್ತಿನ ಮೊದಲ ಬೃಹತ್ ಆದಿ ಕಾವ್ಯವನ್ನು ರಚಿಸಿದ ಮಹರ್ಷಿಗೆ ಗೌರವ ತೋರಿದ್ದೀರಿ. ಅದಕ್ಕಾಗಿ ಈ ನಾಡಿನ ಸಮಗ್ರ ವಾಲ್ಮೀಕಿ ಸಮುದಾಯಗಳ ಪರವಾಗಿ ಹಾಗೂ ರಾಜ್ಯ ಎಸ್.ಟಿ. ಮೋರ್ಚಾದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಅವರು ತಿಳಿಸಿದ್ದಾರೆ.

ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಓಲೆಕಾರ, ನರಸಿಂಹ ನಾಯಕ್, ರಾಜ್ಯ ಕಾರ್ಯದರ್ಶಿ ಮಹಾಂತೇಶ ನಾಯಕ, ಪದಾಧಿಕಾರಿ ವಿಕ್ರಮ್ ಗಂಗಾಧರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News