ಮಡಿಕೇರಿ: ವಿಷ ಸೇವಿಸಿದ ಯುವತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಯುವಕ ಅಪಘಾತದಲ್ಲಿ ಮೃತ್ಯು

Update: 2021-08-13 17:12 GMT

ಮಡಿಕೇರಿ ಆ.13 : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿಯೋರ್ವಳನ್ನು ಉಳಿಸಲೆಂದು ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಆಲೂರುಸಿದ್ದಾಪುರ ಸಮೀಪದ ಬಡುಬನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

 ಸೋಮವಾರಪೇಟೆ ಹಾನಗಲ್ಲು ಬಾಣೆ ನಿವಾಸಿ ಶಿವ ಎಂಬುವವರ ಪುತ್ರ ಅನಿಲ್(26) ಎಂಬಾತನೇ ಮೃತ ದುರ್ದೈವಿ.

ಬಡುಬನಹಳ್ಳಿ ಗ್ರಾಮದ ಹೂವಮ್ಮ ಎಂಬುವವರ ಪುತ್ರಿ ಅಂಜಲಿ ಎಂಬಾಕೆ ಇಂದು ತನ್ನ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಸಂದರ್ಭ ಮನೆಗೆ ಬಂದಿದ್ದ ಸಂಬಂಧಿಕ ಅನಿಲ್ ಪಕ್ಕದ ಮನೆಯ ರಮೇಶ್ ಎಂಬುವವರ ಬೈಕ್ ಪಡೆದು ಅಂಜಲಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಅನಿಲ್ ಬೈಕ್ ಚಲಾಯಿಸುತ್ತಿದ್ದರೆ ನಡುವಿನಲ್ಲಿ ಅಂಜಲಿ ಹಾಗೂ ಹಿಂಬದಿಯಲ್ಲಿ ರಮೇಶ್ ಅವರ ಪತ್ನಿ ಆರ್.ಸಿಂಧು ಕುಳಿತಿದ್ದರು.

ಶನಿವಾರಸಂತೆ ಆಸ್ಪತ್ರಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕೋಳಿ ಸಾಗಿಸುವ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವೊಂದು ಬೈಕ್‍ಗೆ ಡಿಕ್ಕಿಯಾಗಿದೆ. ಕೆಳಗೆ ಬಿದ್ದು ತಲೆಗೆ ತೀವ್ರ ಗಾಯವಾದ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ಅಂಜಲಿ ಹಾಗೂ ಸಿಂಧುವಿಗೆ ಸಣ್ಣಪುಟ್ಟ ಗಾಯಗಳಾಗಿದೆ. ವಿಷಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಂಜಲಿಯನ್ನು ಹಾಸನದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶನಿವಾರಸಂತೆ ವೃತ್ತನಿರೀಕ್ಷಕ ಪರಾಶಿವಮೂರ್ತಿ ಹಾಗೂ ಸಿಬ್ಬಂದಿಗಳು ಡಿಕ್ಕಿ ಪಡಿಸಿ ಪರಾರಿಯಾಗಿದ್ದ ವಾಹನ ಅರಕಲಗೂಡಿನದೆಂದು ಪತ್ತೆಹಚ್ಚಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News