ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ: ಮುಖ್ಯಮಂತ್ರಿ ಕರೆ

Update: 2021-08-14 16:25 GMT

ಬೆಂಗಳೂರು, ಆ.14: ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಕರೆ ನೀಡಿದರು.

ನಗರದ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು, ಸ್ವಾತಂತ್ರ್ಯ ನನ್ನ ಆ ಜನ್ಮ ಸಿದ್ಧ ಹಕ್ಕು ಎಂಬ ಗೋಪಾಲ ಕೃಷ್ಣ ಗೋಖಲೆಯವರ ವೀರೋಚಿತ ಘೋಷಣೆಯೊಂದಿಗೆ ಪ್ರಾರಂಭವಾದ ಭಾರತದ ಸ್ವಾತಂತ್ರ್ಯದ ಹೋರಾಟ ಭಗತ್ ಸಿಂಗ್ ಅವರಂತಹ ಯುವಕರ ಬಲಿದಾನ, ವೀರ ಸಾವರ್ಕರ್ ಅವರಂತಹ ಮಹನೀಯರ ತ್ಯಾಗದ ಮೂಲಕ ಮುಂದಡಿ ಇಟ್ಟಿದ್ದು ಸ್ಮರಣಾರ್ಹ. ಸ್ವಾತಂತ್ರ್ಯ ಚಳುವಳಿಯ ಸಾತ್ವಿಕ ಹೋರಾಟಕ್ಕೆ ಸತ್ಯದ ಮೆರಗು ನೀಡಿದವರು ಮಹಾತ್ಮ ಗಾಂಧಿ, ಇವರೆಲ್ಲರನ್ನು ನಾವು ಸದಾಕಾಲ ಸ್ಮರಿಸಬೇಕು. ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ನಾವು ಹಗಲಿರಳು ಕಾಯಬೇಕು. ವಿಧಾನಸೌಧದ ಮೆಟ್ಟಿಲುಗಳು ನವಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ರಜನೀಶ್ ಗೋಯಲ್ ಮತ್ತು ಮಂಜುನಾಥ್ ಪ್ರಸಾದ್, ಡಾ. ಶಾಲಿನಿ ಗೋಯಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷ: ಧಾರವಾಡ ರಂಗಾಯಣದ ಕಲಾವಿದರು ಪ್ರಸ್ತುತ ಪಡಿಸಿದ ದಂಡಿಯಾತ್ರೆ ಮತ್ತು ವೀರ ರಾಣಿ ಕಿತ್ತೂರು ಚೆನ್ನಮ್ಮ ಕಿರುನಾಟಕಗಳು ಹಾಗೂ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸಿದ ಏಸೂರು ಕೊಟ್ಟರು ಈಸೂರು ಬಿಡೆವೂ ಮತ್ತು ವಿಧುರಾಶ್ವಥ್ ನಾಟಕಗಳು ಸಮಾರಂಭದ ವಿಶೇಷ ಆಕರ್ಷಣೆಗಳಾಗಿದ್ದವು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾನಪದ ಪ್ರಕಾರಗಳಾದ ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತ, ಕೀಲು ಕುದುರೆ ಒಳಗೊಂಡಂತೆ ವಿವಿಧ ನೃತ್ಯ ಪ್ರಕಾರಗಳು ಪ್ರೇಕ್ಷಕರನ್ನು ರಂಜಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News