ಓ ಮೆಣಸೇ...

Update: 2021-08-15 19:30 GMT

ನೂತನ ಗುಜರಿ ನೀತಿ ಆಟೊಮೊಬೈಲ್ ವಲಯಕ್ಕೆ ಹೊಸ ಅನನ್ಯತೆ ನೀಡಲಿದೆ - ನರೇಂದ್ರ ಮೋದಿ, ಪ್ರಧಾನಿ
ಇಡೀ ವಲಯವನ್ನು ಗುಜರಿಗೆ ಹಾಕಲು ಈ ನೀತಿಯಿಂದ ಸುಲಭವಾಗಲಿದೆ.
 


ವಿಕೃತವಾದ ಮನಸ್ಸೇ ರಾವಣ- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಹಾಗಾದರೆ, ರಾಮಭಕ್ತರ ವೇಷ ಧರಿಸಿ ವಿಕೃತಿ ಮೆರೆಯುತ್ತಿರುವವರು ರಾವಣರು ಅನ್ನುತ್ತಿದ್ದೀರಾ?


ಬಿಜೆಪಿ ಸರಕಾರ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಾನು ಸಚಿವನಾಗಿರುತ್ತೇನೆ - ಗೋವಿಂದ ಕಾರಜೋಳ, ಸಚಿವ
ಬಿಜೆಪಿ ಇಲ್ಲದಿದ್ದರೆ, ಕಾಂಗ್ರೆಸ್‌ನಲ್ಲಿ ಸಚಿವರಾಗಿರುತ್ತೀರಿ ಎಂದಾಯಿತು.


ಶ್ರೀರಾಮ ಸೇನೆಯು ರಾವಣನನ್ನು ವಧೆ ಮಾಡಿದಂತೆ ಕೊರೋನ ವೈರಾಣುವನ್ನು ಬಿಜೆಪಿ ಸೇನೆ ವಧೆ ಮಾಡಲಿದೆ-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಬಿಜೆಪಿ ಅಷ್ಟೊಂದು ಶಕ್ತಿಶಾಲಿ ವೈರಾಣುವೇ?


ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಲು ನನಗೆ ಗೊತ್ತಿಲ್ಲ - ಪ್ರೀತಂಗೌಡ, ಶಾಸಕ
ರಾಜಕಾರಣವೇ ಅಡ್ಜಸ್ಟ್‌ಮೆಂಟ್ ಆಗಿರುವಾಗ ಅದನ್ನು ಪ್ರತ್ಯೇಕವಾಗಿ ಕಲಿಯಬೇಕಾಗಿಲ್ಲ.


ಕಾಡೇ ಗೊತ್ತಿಲ್ಲದವರು ಅರಣ್ಯ ಸಚಿವರಾದರೆ ಹೇಗೆ? - ಅಪ್ಪಚ್ಚು ರಂಜನ್, ಶಾಸಕ
ಹಾಗಾದರೆ ಆ ಹುದ್ದೆಯನ್ನು ಕಾಡುಪ್ರಾಣಿಗಳಿಗೆ ಮೀಸಲಿಡಬೇಕೇ?


ಕಾಂಗ್ರೆಸ್‌ನದು ಹಿಟ್ ಆ್ಯಂಡ್ ರನ್ ಪಾಲಿಸಿ- ಡಿ.ವಿ.ಸದಾನಂದಗೌಡ, ಸಂಸದ
ನಿಮ್ಮದು ಸತ್ಯದ ವಿರುದ್ಧ ರನ್ ಆ್ಯಂಡ್‌ ರನ್ ಪಾಲಿಸಿ?


ಸೈರನ್ ಶಬ್ದ ಕೇಳಿ ಚರಂಡಿ ಹಾರಿ ಓಡುತ್ತಿದ್ದ ನಾನೇ ಇಂದು ಸೈರನ್‌ನೊಂದಿಗೆ ತೆರಳುವಂತಾಗಿದೆ - ಆರಗ ಜ್ಞಾನೇಂದ್ರ, ಗೃಹ ಸಚಿವ
ಎಮರ್ಜೆನ್ಸಿ ಚಿಕಿತ್ಸೆ ಬೇಕಾದವರ ಭಾಗ್ಯ ಅದು.


2023ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ - ಕೋನರೆಡ್ಡಿ, ಜೆಡಿಎಸ್ ಮುಖಂ
ಇಂತಹ ಭಟ್ಟಂಗಿ ಹೇಳಿಕೆಗಳನ್ನು ಕುಮಾರಣ್ಣ ಕೂಡಾ ನಂಬುವುದಿಲ್ಲ, ಬಿಡಿ.


ಸಚಿವರ ಕಾರ್ಯನಿರ್ವಹಣೆಯನ್ನು ಪ್ರತಿ ತಿಂಗಳು ವೌಲ್ಯ ಮಾಪನಕ್ಕೆ ಒಳಪಡಿಸಲಾಗುವುದು - ನಳಿನ್ ಕುಮಾರ್ ಕಟೀಲು, ಸಂಸದ
ಆ ಬಳಿಕ ಯಾರಿಗೆ ಎಷ್ಟು ಪಾಲು ಎಂದು ನ್ಯಾಯೋಚಿತವಾಗಿ ನಿರ್ಧರಿಸಿ ಹಂಚಲಾಗುವುದೇ?


‘ಒಂದಕ್ಕೆ ಎರಡು ತೆಗೆದುಬಿಡಿ’ ಎನ್ನುವಷ್ಟರ ಮಟ್ಟಿಗೆ ಈಗ ಬಿಜೆಪಿ ಬೆಳೆದಿದೆ - ಕೆ.ಎಸ್.ಈಶ್ವರಪ್ಪ, ಸಚಿವ
ಅಷ್ಟು ಮಾತ್ರವೇ? ಬೆಲೆಗಳ ವಿಷಯದಲ್ಲಿ ಬಿಜೆಪಿ ಸರಕಾರ ಒಂದಕ್ಕೆ ಹತ್ತು ತೆಗೆಯಿರಿ ಎನ್ನುವಷ್ಟು ಬೆಳೆದಿದೆ.


ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಟ್ಟರೆ ಏನು ತಪ್ಪು? - ಡಾ.ಸುಧಾಕರ್, ಸಚಿವ
ನಿಮಗೆ ಸ್ವಾಹಾಕರ್ ಎಂದು ಹೆಸರಿಟ್ಟರೆ ತಪ್ಪಾದೀತೇ?


ನರೇಂದ್ರ ಮೋದಿ ದೇಶದ ಮೊದಲ ಒಬಿಸಿ ಪ್ರಧಾನಿ - ಕೆ.ಲಕ್ಷಣ್, ರಾಜ್ಯಸಭಾ ಸದಸ್ಯ
ಹಾಗೆಲ್ಲ ಹೇಳಿ ಮುಂದೆಂದೂ ಜನತೆ ಒಬಿಸಿಯವರಿಗೆ ಪ್ರಧಾನಿ ಪಟ್ಟ ನೀಡದಂತೆ ಮಾಡುವಿರಾ?


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗುವ ಸಂಕಟದಲ್ಲಿದ್ದಾರೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ
ನಿಮ್ಮ ತಕ್ಕಡಿಯಿಂದ ಹಾರಿದ ಹಲವು ಕಪ್ಪೆಗಳೂ ಅಲ್ಲಿ ಇವೆಯಲ್ಲಾ?


ರೈತರ ಅನುಪಯುಕ್ತ ಹಸುಗಳನ್ನು ಸರಕಾರ ಖರೀದಿಸಲಿ - ಎನ್.ಮಹೇಶ್, ಮಾಜಿ ಬಿಎಸ್‌ಪಿ ಶಾಸಕ
ಬಿಜೆಪಿ ನಿಮ್ಮನ್ನು ಖರೀದಿಸಿದ ಹಾಗೆಯೇ?


ಬಿಜೆಪಿಯವರು ಗೇಮ್ ಚೇಂಜರ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು, ಈಗ ನೇಮ್ ಚೇಂಜರ್ ಆಗಿದ್ದಾರೆ - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ
ದೇಶದ ಹೆಸರೊಂದು ಬದಲಾಗುವುದು ಬಾಕಿ ಇದೆ.


ಆರೆಸ್ಸೆಸ್ ಎಂದಿಗೂ ಮೀಸಲಾತಿ ವಿರೋಧಿಯಲ್ಲ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಪ್ರ.ಕಾರ್ಯದರ್ಶಿ
ಸಾಂಪ್ರದಾಯಿಕ ಬ್ರಾಹ್ಮಣ ಮೀಸಲಾತಿಯನ್ನು ರಕ್ಷಿಸುವುದೇ ಆರೆಸ್ಸೆಸ್‌ನ ಪರಮ ಧ್ಯೇಯ.


ನಾನು ಯಾವುದೇ ಅಧಿಕಾರ, ಅಂತಸ್ತಿಗೆ ಆಸೆ ಪಟ್ಟು ಬಿಜೆಪಿಗೆ ಬಂದವನಲ್ಲ - ಎಂ.ಟಿ.ಬಿ.ನಾಗರಾಜ್, ಸಚಿವ
ಪದವಿ ಸಿಕ್ಕ ಮೇಲೆ ಎಲ್ಲ ಪುಡಾರಿಗಳೂ ಮಹಾ ಸನ್ಯಾಸಿಗಳೇ.


ನನಗೆ ದೊರೆತ ಖಾತೆಯ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ - ಶ್ರೀರಾಮುಲು, ಸಚಿವ
ಖ್ಯಾತೆ ತೆಗೆಯುವ ಮೊದಲ ಹಂತದ ಹೇಳಿಕೆ.


ಜಮ್ಮು - ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸಬೇಕು - ರಾಹುಲ್‌ಗಾಂಧಿ, ಕಾಂಗ್ರೆಸ್ ಮುಖಂಡ
ಅಲ್ಲಿರುವ ಕಾಶ್ಮೀರಿಗಳಿಗೆ ಮನುಷ್ಯರ ಸ್ಥಾನಮಾನ ಕೊಡುವ ಬಗ್ಗೆಯೂ ಚರ್ಚೆಯಾಗಬೇಕು.


ಸಮಾಜಕಲ್ಯಾಣ ಇಲಾಖೆಯ ಭ್ರಷ್ಟಾಚಾರ ಶೂನ್ಯಮಟ್ಟಕ್ಕೆ ಇಳಿಸುವೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಇಲಾಖೆಯನ್ನೇ ಬರಖಾಸ್ತು ಮಾಡುವುದರಿಂದಷ್ಟೇ ಅದು ಸಾಧ್ಯ.


ಕಾಂಗ್ರೆಸ್ ಎಲ್ಲರ ಹಿತವನ್ನು ಬಯಸುವ ಪಕ್ಷ, ಬಿಜೆಪಿ ಬಿಸಿನೆಸ್ ಪಕ್ಷ - ಮಧು ಬಂಗಾರಪ್ಪ, ಮಾಜಿ ಶಾಸಕ
ಬಿಟ್ಟು ಬಂದ ಪಕ್ಷದ ಬಗ್ಗೆಯೂ ಏನಾದರೂ ಹೇಳಪ್ಪಾ.


ಬ್ಯಾಂಕುಗಳು ಮುಳುಗಿದರೆ ಗ್ರಾಹಕರಿಗೆ 5 ಲಕ್ಷ ರೂ. ಪರಿಹಾರ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ನೀವು ಮುಳುಗಿಸಲು ಹೊರಟಿರುವ ಭಾರತವೆಂಬ ದೊಡ್ಡ ದೇಶದ ಪ್ರಜೆಗಳಿಗೂ ಅಂತಹ ಶುಭವಾರ್ತೆ ಏನಾದರೂ ಉಂಟೇ ?


ನನಗೆ ಬಿಪಿ, ಶುಗರ್ ಸಮಸ್ಯೆ ಇಲ್ಲ, ಆದರೆ ನನ್ನ ತಂಟೆಗೆ ಬಂದವರಿಗೆ ಅವೆಲ್ಲವೂ ಬರುತ್ತವೆ? - ಕೆ.ಎಸ್.ಈಶ್ವರಪ್ಪ, ಸಚಿವ
ನೀವು ಬಾಯಿತೆರೆದರೆ ಎದ್ದು ಕಾಣುವ ಮಹಾ ರೋಗಗಳ ಮುಂದೆ ಬಿಪಿ, ಶುಗರ್‌ಗಳಂತಹ ಜುಜುಬಿ ರೋಗಗಳೆಲ್ಲಾ ಯಾವ ಲೆಕ್ಕ?


ವಿವಾಹಿತ ಮಹಿಳೆಯತ್ತ ಪ್ರೇಮ ಚೀಟಿ (ಲವ್ ಲೆಟರ್) ಎಸೆಯುವುದು ಒಂದರ್ಥದಲ್ಲಿ ಮಾನಭಂಗಕ್ಕೆ ಸಮನಾಗುತ್ತದೆ - ಬಾಂಬೆ ಹೈ ಕೋರ್ಟ್‌ನ ನಾಗ್ಪುರ ಪೀಠ
ಈ ವಿಷಯದಲ್ಲಿ ವಿವಾಹಿತೆ ಮತ್ತು ಅವಿವಾಹಿತೆ ಎಂಬ ತಾರತಮ್ಯವೇಕೆ ಸಾರ್?


ಬೊಮ್ಮಾಯಿ ಸಂಪುಟದಲ್ಲಿ ಅದೇ ಹಳೇ ಸಚಿವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹೊಸ ಹೊಸ ಚಾಳಿಗಳನ್ನು ಬೆಳೆಸಿಕೊಳ್ಳುತ್ತಾ ಇರುವುದಕ್ಕೆ ಅದೇನು ನಿಮ್ಮ ಸಂಪುಟವೇ?


   ತುಳುನಾಡಿನ ಸಂಸ್ಕೃತಿ ಸಾರುವ ಚಲನಚಿತ್ರಗಳು ನಾಡಿನ ಜನರಿಗೆ ಸಂಸ್ಕಾರ, ಸಂಸ್ಕೃತಿಯ ಜ್ಞಾನವನ್ನು ಬೋಧಿಸುತ್ತವೆ. - ಎಸ್.ಅಂಗಾರ, ಸಚಿವ
ನಿಜ ಜೀವನದಲ್ಲಿ ಅದನ್ನೆಲ್ಲಾ ಹಾಳುಗೆಡವಿದವರು ಸಿನೆಮಾದಲ್ಲಾದರೂ ಅದನ್ನು ಅನುಮತಿಸಿದರೆ ಜನತೆಯ ಭಾಗ್ಯ ಎನ್ನಬಹುದು.


ಸಂಸತ್ ಸದಸ್ಯರ ದುಂಡಾವರ್ತನೆಯಿಂದ ಪ್ರಜಾಪ್ರಭುತ್ವದ ದೇಗುಲದ ಪಾವಿತ್ರ ಹಾಳಾಯಿತು - ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ
ಹೊಸ ಸಂಸತ್ ನಿರ್ಮಾಣಕ್ಕೆ ಹೊಸ ಸಮರ್ಥನೆಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...