ಬೀರೂರು ರೈಲು ನಿಲ್ದಾಣದಲ್ಲಿ ಅವೈಜ್ಞಾನಿಕ ಮೇಲ್ಸೇತುವೆ ಕಾಮಗಾರಿ

Update: 2021-08-20 18:56 GMT

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ರೈಲು ನಿಲ್ದಾಣದ ಎದುರು ಪ್ರಯಾಣಿಕರು ರಸ್ತೆ ದಾಟುವ ಸಂದರ್ಭದಲ್ಲಿ ಅನುಭವಿಸುತ್ತಿದ್ದ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಮೇಲ್ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಪರಿಣಾಮ ರೈಲು ಪ್ರಯಾಣಿಕರು ಪ್ರತಿದಿನ ಬಾರಿ ಅನಾನುಕೂಲ, ಯಾತನೆ ಅನುಭವಿಸುವಂತಾಗಿದೆ.

ಡಬಲ್ ಡೆಕ್ಕರ್ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಈ ಹಿಂದೆ ಬೀರೂರು ನಿಲ್ದಾಣದಲ್ಲಿ ಡಬ್ಲಿಂಗ್ ಕಾರ್ಯ ಕೈಗೊಂಡಾಗ ಹಿಂದೆ ತಗ್ಗಿನಲ್ಲಿದ್ದ ಪಾದಾಚಾರಿಗಳ ಮೇಲ್ಸೇತುವೆಯನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಎತ್ತರವಾದ ಮೇಲ್ಸೇತುವೆ ನಿರ್ಮಿಸಲಾಗಿದೆ. ಪರಿಣಾಮ ಇಲ್ಲಿರುವ 2,3,4,5ನೇ ಫ್ಲಾಟ್‌ಫಾರ್ಮ್‌ಗಳಿಗೆ ರೈಲು ಹಳಿಗಳನ್ನು ದಾಟಿ ಹೋಗಲು ಪ್ರಯಾಣಿಕರು ಈ ಎತ್ತರದ ಮೇಲ್ಸೇತುವೆಯಲ್ಲಿ ನಡೆದು ಹೋಗಬೇಕು. ಮೇಲ್ಸೇತುವೆ ಏರು ಸುಮಾರು 54 ಮೆಟ್ಟಿಲುಗಳಿದ್ದು, ಅಷ್ಟೇ ಮೆಟ್ಟಿಲುಗಳನ್ನು ಇಳಿಯಬೇಕಾಗಿದೆ. ಇದರಿಂದಾಗಿ ಹಿರಿಯ, ಕಿರಿಯರು ಎನ್ನದೆ ಪ್ರಯಾಣಿಕರು ತಮ್ಮ ಲಗೇಜುಗಳನ್ನು ಹೊತ್ತು ನೂರೆಂಟು ಮೆಟ್ಟಿಲುಗಳನ್ನು ಹತ್ತಿ ಇಳಿದು ಏದುಸಿರು ಬಿಡುತ್ತಾ ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು-ಹುಬ್ಬಳ್ಳಿ ಮಾರ್ಗದ, ಚಿಕ್ಕಮಗಳೂರು ಜಿಲ್ಲೆಯೊಳಗಿನ ಪ್ರಮುಖ ರೈಲು ಜಂಕ್ಷನ್ ಕೇಂದ್ರವಾಗಿರುವ ಬೀರೂರು ರೈಲು ನಿಲ್ದಾಣದಲ್ಲಿ ಪ್ರತಿದಿನ ಸುಮಾರು 40ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳು ದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತವೆ. ಪ್ರವಾಸಿತಾಣಗಳ ಕೊಂಡಿಯಾಗಿರುವ ಈ ಜಂಕ್ಷನ್ ಮೂಲಕ ಚಿಕ್ಕಮಗಳೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಬಾಳೆಹೊನ್ನೂರು, ಉಡುಪಿ, ಮಂಗಳೂರು ಮುಂತಾದ ಪ್ರಮುಖ ಸ್ಥಳಗಳಿಗೆ ಸಾವಿರಾರು ಪ್ರಯಾಣಿಕರು, ಪ್ರವಾಸಿಗರು ಸಂಚರಿಸುತ್ತಾರೆ. ಹೀಗೆ ಬರುವ ಪ್ರಯಾಣಿಕರು ಈ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಲಿಫ್ಟ್ ಕಾಮಗಾರಿ ನನೆಗುದಿಗೆ: ಈ ಹಿಂದೆ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ, ಬೀರೂರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದಾಗ ಲಿಫ್ಟ್ ಅಳವಡಿಸಬೇಕೆಂಬ ಜನರ ಬೇಡಿಕೆಗೆ ಸಮ್ಮತಿ ನೀಡಿ ಆದೇಶಿಸಿದ್ದರು. ಅದರಂತೆ ಅನುದಾನ ಲಭ್ಯವಾಗಿ ಒಂದು ವರ್ಷದ ಹಿಂದೆಯೇ ಆಂಧ್ರ ಮೂಲದ ಗುತ್ತಿಗೆದಾರನಿಗೆ ಲಿಫ್ಟ್ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಆದರೆ, ಕಾಮಗಾರಿ ಮಾತ್ರ ನನೆಗುದಿಗೆ ಬಿದ್ದಿದೆ.

ಗುತ್ತಿಗೆದಾರ ಕೋವಿಡ್ ಕಾರಣದಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ರೈಲ್ವೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಕೋವಿಡ್ ನಿರ್ವಹಣೆಗೆ ಲಿಫ್ಟ್ ಅಡ್ಡಿಯಾಗುವುದಾದರೇ ಅಥವಾ ಹೆಚ್ಚು ಜನರು ಲಿಫ್ಟ್‌ನಲ್ಲಿ ಸಂಚರಿಸಲು ಅಸಾಧ್ಯವಾದರೆ, ಅಂತಹ ಲಿಫ್ಟ್ ಕಾಮಗಾರಿ ಬದಲಾಗಿ ನೆಲದಡಿಯಲ್ಲಿ ಸಬ್ ವೇ ಮಾಡಿದ್ದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಈಗ ನೋಡಿದರೆ ಇತ್ತ ಲಿಫ್ಟೂ ಇಲ್ಲ, ಸುಲಭವಾಗಿ ಹತ್ತಿ ಇಳಿಯುವ ಮೇಲ್ಸೇತುವೆಯೂ ಇಲ್ಲದೆ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.

ಕೆಲವೊಮ್ಮೆ ನಿಲ್ದಾಣದ ಅಧಿಕಾರಿಗಳು ರೈಲು ಬರುವ ಕೆಲವೇ ನಿಮಿಷಕ್ಕೆ ಮೊದಲು ಫ್ಲಾಟ್‌ಫಾರ್ಮ್ ಬದಲಾವಣೆಯ ಬಗ್ಗೆ ತಿಳಿಸುತ್ತಾರೆ. ಆಗ ಏದುಸಿರು ಬಿಡುತ್ತಾ ಪ್ರಯಾಣಿಕರು 108 ಮೆಟ್ಟಿಲುಗಳಲ್ಲಿ ಅತ್ತಿಂದಿತ್ತ ಓಡಾಡಿ ರೈಲು ಹಿಡಿಯಬೇಕಾದ ದುಸ್ತಿತಿ ಎದುರಾಗುತ್ತಿದೆ. ಆದ್ದರಿಂದ ರೈಲ್ವೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಲಿಫ್ಟ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಅಥವಾ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ಸಬ್‌ವೇ ನಿರ್ಮಿಸಲಿ ಎಂಬುದು ರೈಲು ಪ್ರಯಾಣಿಕರು ಮತ್ತು ಸಾರ್ವಜನಿಕರ ಒತ್ತಾಯವಾಗಿದೆ.

ಬೀರೂರು ರೈಲು ನಿಲ್ದಾಣದಲ್ಲಿ ಎತ್ತರದ ಮೇಲ್ಸೇತುವೆಯಿಂದ ಪ್ರಯಾಣಿಕರ ಓಡಾಟ ಕಷ್ಟಕರವಾಗಿದೆ. ಹೀಗಾಗಿ ಇಲ್ಲೊಂದು ಲಿಫ್ಟ್ ನಿರ್ಮಿಸಬೇಕೆಂಬ ಬೇಡಿಕೆಗೆ ಅಂದಿನ ಸಚಿವರಾಗಿದ್ದ ಸುರೇಶ್ ಅಂಗಡಿ ಸಮ್ಮತಿ ನೀಡಿ ಲಿಫ್ಟ್ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡಿದ್ದರು. ಆದರೆ ಕಾಮಗಾರಿ ಆರಂಭಿಸಿದ್ದ ಆಂಧ್ರ ಮೂಲದ ಗುತ್ತಿಗೆದಾರರು ಅದನ್ನು ಅರ್ಧದಲ್ಲೇ ಕೈಬಿಟ್ಟಿದ್ದಾರೆ. ಲಿಫ್ಟ್ ಇಲ್ಲವೇ, ಸಬ್‌ವೇ ನಿರ್ಮಿಸಿದ್ದರೆ ಪ್ರಯಾಣಿಕರು ಹೀಗೆ ಕಷ್ಟಪಡಬೇಕಾಗಿರಲಿಲ್ಲ.

 ವಿನಯ್ ಕುಮಾರ್ ಬೀರೂರು, ಸ್ಥಳೀಯರು

Writer - ಕೆ.ಎಲ್. ಶಿವು

contributor

Editor - ಕೆ.ಎಲ್. ಶಿವು

contributor

Similar News