ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವಂತೆ ಕವಿ ಚನ್ನವೀರ ಕಣವಿ ಸಲಹೆ
ಧಾರವಾಡ, ಆ.21: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಸಂಬಂಧ ಧಾರವಾಡದಲ್ಲಿ ಶನಿವಾರ ಬೆಳಗ್ಗೆಯಿಂದ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಜೆ ಬೆಂಗಳೂರಿಗೆ ಹೊರಡುವ ಮುನ್ನ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ಭೇಟಿಯಾದರು.
ಧಾರವಾಡದ ಕಲ್ಯಾಣನಗರದಲ್ಲಿನ ಕಣವಿ ಅವರ ನಿವಾಸಕ್ಕೆ ತೆರಳಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಅವರಿಗೆ ವಿವರಿಸಿದರು. ಸಚಿವರು ಹೇಳಿದ್ದೆಲ್ಲವನ್ನೂ ಸಾವಕಾಶವಾಗಿ ಕೇಳಿಸಿಕೊಂಡ ಕಣವಿಯವರು, “ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರವಾಗಿದೆ. ಉತ್ತಮವಾಗಿ ಜಾರಿಗೆ ಬರಲಿ. ಆದರೆ, ಕನ್ನಡಕ್ಕೆ ಹಾಗೂ ಮಾತೃಭಾಷೆ ಶಿಕ್ಷಣಕ್ಕೆ ಎಲ್ಲೂ ಧಕ್ಕೆ ಆಗದಂತೆ ಜಾರಿ ಆಗಲಿ” ಎಂದು ಹೇಳಿದರು.
ಕನ್ನಡ ಕಲಿಕೆಗೆ ಧಕ್ಕೆ ಅಥವಾ ಅಪಾಯ ಇಲ್ಲ. ಒಂದು ವರ್ಷಕ್ಕೆ ಬದಲಾಗಿ ಎರಡು ವರ್ಷ ಮಾತೃಭಾಷಾ ಕಲಿಕೆಯನ್ನು ಕಡ್ಡಾಯ ಮಾಡಿರುವ ಅಂಶವನ್ನು ಗಮನಕ್ಕೆ ತಂದಾಗ ಕಣವಿ ಬಹಳ ಸಂತಸ ವ್ಯಕ್ತಪಡಿಸಿದರು. ಇದರಿಂದ ಕನ್ನಡಕ್ಕೆ ಬಹಳ ಒಳ್ಳೆಯದಾಗುತ್ತದೆ ಎಂದರು.
“ಒಳ್ಳೆಯದಾಗಲಿ, ಶಿಕ್ಷಣ ನೀತಿ ಜಾರಿಗೆ ಬಂದು ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಲಿ. ಇದಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ” ಎಂದು ಅಶ್ವತ್ಥ ನಾರಾಯಣ ಅವರಿಗೆ ಚನ್ನವೀರ ಕಣವಿ ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗುಡಸಿ ಹಾಗೂ ಕಣವಿ ಅವರ ಕುಟುಂಬ ಸದಸ್ಯರು ಇದ್ದರು.