×
Ad

ಎಎಸ್ಸೈ ಹುದ್ದೆಯಿಂದ ಪಿಎಸ್ಸೈ ಹುದ್ದೆಗೆ ಭಡ್ತಿ ಸೇವಾವಧಿ ಇಳಿಕೆಗೆ ಕುಮಾರಸ್ವಾಮಿ ಆಗ್ರಹ

Update: 2021-08-22 16:05 IST

ಬೆಂಗಳೂರು, ಆ. 22: `ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಸಿವಿಲ್) ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತ 70ಃ30ರ ಧೋರಣೆ ಪರಿಷ್ಕರಿಸಿ 50ಃ50ರ ಅನುಪಾತಕ್ಕೆ ಹೆಚ್ಚಿಸುವ ಬಗ್ಗೆ ಹಾಗೂ ಎಎಸ್ಸೈ ಸಿವಿಲ್ ಹುದ್ದೆಯಿಂದ ಪಿಎಸ್ಸೈ ಹುದ್ದೆಗೆ ಬಡ್ತಿ ನೀಡುವ ಸೇವಾ ಅವಧಿಯನ್ನು ಮೂರು ವರ್ಷಕ್ಕೆ ಇಳಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ರವಿವಾರ ಪತ್ರ ಬರೆದಿರುವ ಕುಮಾರಸ್ವಾಮಿ, `ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‍ಟೇಬಲ್ ಹುದ್ದೆಗಳನ್ನು 2003 ರಿಂದ ನೇರ ನೇಮಕಾತಿ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಮುಖಾಂತರ ಆಯ್ಕೆ ಮಾಡಲಾಗುತ್ತಿದ್ದು, ಬಹುತೇಕ ನೌಕರರು ಶೇ.75ರಷ್ಟು ಪದವಿಧರರಾಗಿದ್ದಾರೆ. ಇಲಾಖೆಯಲ್ಲಿ ಸುಮಾರು 25 ವರ್ಷ ಸೇವೆ ಮಾಡಿದ್ದರೂ ಇನ್ನೂ ಒಂದೇ ಹುದ್ದೆಯಲ್ಲಿ ಇರುವುದರಿಂದ ಇಲಾಖೆಯ ಸೇವಾ ನಿರತ ಸಿಬ್ಬಂದಿಯಲ್ಲಿ ಆತ್ಮಸ್ಥೆರ್ಯ ಮತ್ತು ದಕ್ಷತೆ ಕುಸಿಯುತ್ತಿದೆ' ಎಂದು ಗಮನ ಸೆಳೆದಿದ್ದಾರೆ.

`ಸೇವಾ ನಿರತ ಸಿಬ್ಬಂದಿ ಪಿಎಸ್ಸೈ ವೃಂದದ ನೇರ ನೇಮಕಾತಿ ಹುದ್ದೆಗೆ ಸ್ಪರ್ಧಿಸುತ್ತಿದ್ದರೂ ಅಖಿತ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ ಅಂಕಗಳನ್ನು ಪಡೆದುಕೊಂಡು ಆಯ್ಕೆಯಾಗುತ್ತಿದ್ದಾರೆ. ಆದರೆ, ಸೇವಾನಿತರ ಅಭ್ಯರ್ಥಿಗಳ ನಡುವೆಯೇ ತೀವ್ರ ಪೈಪೋಟಿಯಿದ್ದು, ಗರಿಷ್ಟ ಅಂಕಗಳನ್ನು ಪಡೆಯಬೇಕಾಗಿದೆ. ಅದರಲ್ಲೂ 90ರಷ್ಟು ಸಿಬ್ಬಂದಿ ಸಮೀಪ ಸ್ಪರ್ಧಿಗಳಾಗಿದ್ದು, ಕೇವಲ ಅರ್ಧ ಅಂಕಗಳಲ್ಲಿ ಮಾತ್ರ ವ್ಯತ್ಯಾಸವಾಗಿ ಪಿಎಸ್ಸೈ ಹುದ್ದೆಗೆ ಅರ್ಹರಾಗುತ್ತಿರುವುದಿಲ್ಲ. ಕನಿಷ್ಟ ಮೂರು ಮುಂಬಡ್ತಿ ಹುದ್ದೆಗೇರಲು ಇಲಾಖೆಯ ನ್ಯೂನ್ಯತೆಗಳನ್ನು ಹಾಗೂ ಅನುಪಾತ ಹೆಚ್ಚಳದ ಧೋರಣೆಗಳನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಎಸ್ಸೈ ಹುದ್ದೆಯಿಂದ ಪಿಎಸ್ಸೈ ಹುದ್ದೆ ಮುಂಬಡ್ತಿಗೆ ಪರಿಗಣಿಸಲು ಹಾಲಿ ಇರುವ ಕನಿಷ್ಟ 5 ವರ್ಷಗಳ ಸೇವಾವಧಿಯನ್ನು 3 ವರ್ಷಗಳಿಗೆ ಪರಿಗಣಿಸಹಬಹುದು ಅಥವಾ ಅರ್ಹತೆಯಿರುವ ಸಿಬ್ಬಂದಿಯನ್ನು ಕಾಲ ಕಾಲಕ್ಕೆ ಭರ್ತಿ ಮಾಡಬೇಕು. ಈ ಮೇಲ್ಕಂಡ ಎಲ್ಲ ಅಂಶಗಳನ್ನು ಪರಿಶೀಲಿಸಿ ಪೊಲೀಸ್ ಇಲಾಖೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸಿವಿಲ್ ವೃಂದ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತವನ್ನು ಪರಿಷ್ಕರಿಸಬೇಕು ಎಂದು ಕುಮಾರಸ್ವಾಮಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News