`ಅಧಿಕಾರ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ' : ಎಚ್ಡಿಕೆ ಅವರದ್ದು ಅಸಂಬದ್ಧ ಮಾತುಗಳು ಎಂದ ನಟ ಚೇತನ್
ಬೆಂಗಳೂರು, ಆ, 22: `ಕರ್ನಾಟಕ ರಾಜ್ಯದಲ್ಲಿ ಐದು ವರ್ಷಗಳ ಕಾಲ ಸರಕಾರ ನಡೆಸುವ ಅವಕಾಶ ಸಿಕ್ಕರೆ `ಕ್ರಾಂತಿಕಾರಿ' ಬದಲಾವಣೆಗಳನ್ನು ತರುತ್ತೇನೆಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರದ್ದು `ಅಸಂಬದ್ಧ ಮಾತುಗಳು' ಎಂದು ಚಿತ್ರ ನಟ ಚೇತನ್ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ಟ್ವೀಟ್ ಮಾಡಿರುವ ನಟ ಚೇತನ್, `ಕರ್ನಾಟಕವನ್ನು 5 ವರ್ಷಗಳ ಕಾಲ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ, `ಕ್ರಾಂತಿಕಾರಿ' ಬದಲಾವಣೆಗಳನ್ನು ತರುತ್ತೇನೆಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮೊದಲಿಗೆ ಎರಡು ಬಾರಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಕೆಲಸ ಮಾಡಲಿಲ್ಲ. ಕನಿಷ್ಟ ಪ್ರಯತ್ನವನ್ನೂ ಮಾಡಲಿಲ್ಲ' ಎಂದು ಟೀಕಿಸಿದ್ದಾರೆ.
`ಮುಖ್ಯವಾಗಿ ಅವರಿಗೆ `ಕ್ರಾಂತಿಕಾರಿ' ದೃಷ್ಟಿಕೋನವಿಲ್ಲ. ಅವರ ಚಿಂತನೆಯ ಪ್ರತಿಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು. ಅಸಂಬದ್ದ ಮಾತುಗಳು' ಎಂದು ನಟ ಚೇತನ್ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಗು ತೂರಿಸುತ್ತಾರೆ: `ಎಲ್ಲ ವಿಷಯವನ್ನೂ ಬಲ್ಲ, ಆದರೆ, ಯಾವುದರಲ್ಲೂ ಪರಿಣತನಲ್ಲ' ಎಂಬ ಮಾತು ಈ ವ್ಯಕ್ತಿಗೆ ಹೊಂದಿಕೊಳ್ಳುತ್ತದೆ. ಚೇತನ್ ತಾವೊಬ್ಬ ಹೋರಾಟಗಾರ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರು `ರಾಷ್ಟ್ರವಾದಿ ನಟಿ'ಯರಂತೆ, ಕೇವಲ ಗಮನ ಸೆಳೆಯುವ ಪ್ರಯತ್ನ ಮಾಡುವ ವಿಫಲ ನಟನಾಗಿ ಉಳಿದಿದ್ದಾರೆ. ಯಾವ ವಿಷಯವನ್ನೂ ತಿಳಿಯದೆ, ಎಲ್ಲದರಲ್ಲೂ ಮೂಗು ತೂರಿಸುತ್ತಾರೆ' ಎಂದು ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರತಾಪ್ ಕಣಗಾಲ್, ಚೇತನ್ ವಿರುದ್ಧ ಆಕ್ಷೇಪಿಸಿದ್ದಾರೆ.
HD Kumaraswamy says he’ll bring ‘revolutionary’ change if he’s given freedom to lead KA for 5 yrs
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 22, 2021
Firstly, HDK’s done nothing stand-out for our state as two-time CM
Importantly, he lacks ‘revolutionary’ vision & is status quo— thought process must precede power
Nonsense words