`ಅಧಿಕಾರ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ' : ಎಚ್‍ಡಿಕೆ ಅವರದ್ದು ಅಸಂಬದ್ಧ ಮಾತುಗಳು ಎಂದ ನಟ ಚೇತನ್

Update: 2021-08-22 14:55 GMT

ಬೆಂಗಳೂರು, ಆ, 22: `ಕರ್ನಾಟಕ ರಾಜ್ಯದಲ್ಲಿ ಐದು ವರ್ಷಗಳ ಕಾಲ ಸರಕಾರ ನಡೆಸುವ ಅವಕಾಶ ಸಿಕ್ಕರೆ `ಕ್ರಾಂತಿಕಾರಿ' ಬದಲಾವಣೆಗಳನ್ನು ತರುತ್ತೇನೆಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರದ್ದು `ಅಸಂಬದ್ಧ ಮಾತುಗಳು' ಎಂದು ಚಿತ್ರ ನಟ ಚೇತನ್ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿವಾರ ಟ್ವೀಟ್ ಮಾಡಿರುವ ನಟ ಚೇತನ್, `ಕರ್ನಾಟಕವನ್ನು 5 ವರ್ಷಗಳ ಕಾಲ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ, `ಕ್ರಾಂತಿಕಾರಿ' ಬದಲಾವಣೆಗಳನ್ನು ತರುತ್ತೇನೆಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮೊದಲಿಗೆ ಎರಡು ಬಾರಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಕೆಲಸ ಮಾಡಲಿಲ್ಲ. ಕನಿಷ್ಟ ಪ್ರಯತ್ನವನ್ನೂ ಮಾಡಲಿಲ್ಲ' ಎಂದು ಟೀಕಿಸಿದ್ದಾರೆ.
`ಮುಖ್ಯವಾಗಿ ಅವರಿಗೆ `ಕ್ರಾಂತಿಕಾರಿ' ದೃಷ್ಟಿಕೋನವಿಲ್ಲ. ಅವರ ಚಿಂತನೆಯ ಪ್ರತಿಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು. ಅಸಂಬದ್ದ ಮಾತುಗಳು' ಎಂದು ನಟ ಚೇತನ್ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಗು ತೂರಿಸುತ್ತಾರೆ: `ಎಲ್ಲ ವಿಷಯವನ್ನೂ ಬಲ್ಲ, ಆದರೆ, ಯಾವುದರಲ್ಲೂ ಪರಿಣತನಲ್ಲ' ಎಂಬ ಮಾತು ಈ ವ್ಯಕ್ತಿಗೆ ಹೊಂದಿಕೊಳ್ಳುತ್ತದೆ. ಚೇತನ್ ತಾವೊಬ್ಬ ಹೋರಾಟಗಾರ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರು `ರಾಷ್ಟ್ರವಾದಿ ನಟಿ'ಯರಂತೆ, ಕೇವಲ ಗಮನ ಸೆಳೆಯುವ ಪ್ರಯತ್ನ ಮಾಡುವ ವಿಫಲ ನಟನಾಗಿ ಉಳಿದಿದ್ದಾರೆ. ಯಾವ ವಿಷಯವನ್ನೂ ತಿಳಿಯದೆ, ಎಲ್ಲದರಲ್ಲೂ ಮೂಗು ತೂರಿಸುತ್ತಾರೆ' ಎಂದು ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರತಾಪ್ ಕಣಗಾಲ್, ಚೇತನ್ ವಿರುದ್ಧ ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News