ಮೌಲ್ಯವರ್ಧನೆಗೆ ಡಿಜಿಟಲ್ ತಂತ್ರಜ್ಞಾನದ ಬಳಕೆಗೆ ಸಚಿವ ಅಶ್ವತ್ಥ ನಾರಾಯಣ ಸಲಹೆ

Update: 2021-08-24 13:12 GMT

ಕಲಬುರ್ಗಿ, ಆ.24: ಈಗ ಕೃಷಿಯಲ್ಲೂ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಾಗಿದೆ. ಹೀಗಾಗಿ ಉದ್ಯಮಶೀಲರು ಈ ಡಿಜಿಟಲ್ ತಾಂತ್ರಿಕತೆ ಬಳಸಿಕೊಂಡು ಕೃಷಿ ಪದ್ಧತಿಯಲ್ಲಿ ಸುಧಾರಣೆ ಉಂಟುಮಾಡುವ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಮಾಡುವ ಬಗ್ಗೆ ಆಲೋಚಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಮಂಗಳವಾರ ನಗರದಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದ ಅವರು, ಸರಕಾರವು ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮದ ಮೂಲಕ ಬೆಂಗಳೂರಿಗೆ ಹೊರತಾದ ಪ್ರದೇಶಗಳಲ್ಲಿಯೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದರು.

ಉದ್ಯಮಗಳಿಗೆ ಬೇಕಾದ ಭೂಮಿ, ಅನುಮತಿ, ಪರವಾನಿಗೆ ಇತ್ಯಾದಿಯನ್ನು ಲಭ್ಯವಾಗಿಸಲು ಸರಕಾರವು ಸರಳವಾದ ನೀತಿಯನ್ನು ಜಾರಿಗೊಳಿಸಿದೆ. ಉದ್ಯಮಿಗಳ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಲು ಪೂರಕ ತರಬೇತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಜೊತೆಗೆ, ಶೈಕ್ಷಣಿಕ ಸಂಸ್ಥೆಗಳು, ಉದ್ದಿಮೆಗಳು ಹಾಗೂ ಸಂಶೋಧಕರನ್ನು ಸಂಯೋಜಿಸುವ ಕಾರ್ಯಕ್ಕೆ ಒತ್ತು ನೀಡಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಬೆಂಗಳೂರಿಗೆ ಹೊರತಾದ ಭಾಗದವರು ಇಂದು ಉದ್ಯಮಿಗಳಾಗಿ ಗಮನ ಸೆಳೆದಿದ್ದಾರೆ. ಇಂಥವರ ಯಶಸ್ಸಿನ ಕಥನಗಳು ಉದ್ಯಮಶೀಲರಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಬೇಕು. ಉದ್ಯಮಕ್ಕೆ ಮುಂದಾಗುವವರು ಯಾವ ಜಾಗ ಹಾಗೂ ಯಾವ ಸನ್ನಿವೇಶಕ್ಕೆ ಯಾವ ಉದ್ಯಮ ಸೂಕ್ತ ಎಂಬುದನ್ನು ಗುರುತಿಸಿಕೊಳ್ಳುವ ಜೊತೆಗೆ ಮಾರುಕಟ್ಟೆಯ ಬೇಡಿಕೆ-ಪೂರೈಕೆ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಪರಿಸರಕ್ಕೆ ಹೊರೆಯಾಗದ ಸುಸ್ಥಿರ ಉದ್ದಿಮೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಒಳ್ಳೆಯ ಉದ್ಯಮಿಗಳನ್ನು ಬೆಳೆಸಲು ಉತ್ತಮ ಶಿಕ್ಷಣವೇ ಅಡಿಪಾಯ. ಹೀಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸುವ ರಾಷ್ಟ್ರೀಯ ಶಿಕ್ಷಣ ನೀತಿಯು ಪೂರಕವಾಗಿದೆ. ಈ ನೀತಿಯು ವಿದ್ಯಾರ್ಥಿ ಹಂತದಲ್ಲೇ ಕೌಶಲಾಭಿವೃದ್ಧಿಗೆ ಗಮನ ನೀಡಿ ಉದ್ಯಮಿಗಳನ್ನು ರೂಪಿಸಲು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಷಿ, ಬಿ.ಜಿ.ಪಾಟೀಲ್, ಉಮಾಶಂಕರ್,  ಗುಲ್ಬರ್ಗ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿಗಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News