ಹುಟ್ಟೂರಿನಲ್ಲಿ ನೆರವೇರಿತು ಪತ್ರಕರ್ತ ಗುಡಿಹಳ್ಳಿ ನಾಗರಾಜ ಅಂತ್ಯಕ್ರಿಯೆ

Update: 2021-08-27 12:19 GMT

ಬೆಂಗಳೂರು, ಆ.27: ಗುರುವಾರ ನಿಧನರಾದ ಹಿರಿಯ ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ್(67) ಇವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಡಿಹಳ್ಳಿಯಲ್ಲಿ ನೆರವೇರಿತು. 

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರು, ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಗುರುವಾರ ಗೋವಿಂದರಾಜ ನಗರದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ಶುಕ್ರವಾರ ಇವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಗುಡಿಹಳ್ಳಿಯಲ್ಲಿ ನೆರವೇರಿತು. 

ಪ್ರಜಾವಾಣಿ ದಿನಪತ್ರಿಕೆ ಹಾಗೂ ಸುಧಾ ವಾರಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಗುಡಿಹಳ್ಳಿ ನಾಗರಾಜ್ ಅವರು ನಿವೃತ್ತಿ ನಂತರ ರಂಗ ನೇಪಥ್ಯ ಎಂಬ ಮಾಸಪತ್ರಿಕೆಯನ್ನು ಹೊರ ತರುತ್ತಿದ್ದರು. 15ಕ್ಕೂ ಹೆಚ್ಚು ರಂಗಕೃತಿಗಳನ್ನು ಅವರು ರಚಿಸಿದ್ದರು. ರಂಗಕರ್ಮಿಯಾಗಿ ಅವರು ದೊಡ್ಡ ಹೆಸರು ಮಾಡಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಘಟಕದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದು, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿ ಹಾಗೂ ಬೆಂಗಳೂರು ಪ್ರೆಸ್‍ಕ್ಲಬ್‍ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಗುಡಿಹಳ್ಳಿ ನಾಗರಾಜ್ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News