×
Ad

ಮೈಸೂರು: ಚಿನ್ನಾಭರಣ ದರೋಡೆ ಮತ್ತು ಶೂಟೌಟ್ ಪ್ರಕರಣ: 6 ಮಂದಿ ಬಂಧನ

Update: 2021-08-27 19:50 IST

ಮೈಸೂರು,ಆ.27: ಹಾಡಹಗಲೇ ಚಿನ್ನಾಭರಣ ಲೂಟಿ ಮತ್ತು ಓರ್ವ ಯುವಕನ ಹತ್ಯೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು 8 ದರೋಡೆಕೋರರ ಪೈಕಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು.

ನಗರದ ಐಜಿಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವ್ಯವಸ್ಥಿತವಾಗಿ ದರೋಡೆ ನಡೆಸಿ ದೇಶದ ವಿವಿಧ ರಾಜ್ಯಗಳಲ್ಲಿ ಚದುರಿದ್ದ  ಆರೋಪಿಗಳನ್ನು ಘಟನೆ ನಡೆದ ನಾಲ್ಕು ದಿನಗಳಲ್ಲಿಯಶಸ್ವಿ ಕಾರ್ಯಾಚರಣೆ ಮೂಲಕ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.

ವಿದ್ಯಾರಣ್ಯಪುರಂ ಅಮೃತ ಗೋಲ್ಡ್ ಅಂಡ್ ಸಿಲ್ವರ್ ನಲ್ಲಿ ದರೋಡೆ ಮಾಡಲು ಸ್ಥಳೀಯರು ಪ್ಲ್ಯಾನ್ ಮಾಡಿದರೆ, ಹೊರಗಿನವರು ದರೋಡೆ ಮಾಡಿದ್ದಾರೆ. ಪ್ರಕರಣದಲ್ಲಿ ನಾಲ್ವರು ಪ್ಲ್ಯಾನ್ ಮಾಡಿದ್ದು, ಇವರೆಲ್ಲ ಮೈಸೂರು, ಬೆಂಗಳೂರಿನವರಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಪ್ಲ್ಯಾನ್ ಮಾಡಿದ ಮೈಸೂರಿನ ವ್ಯಕ್ತಿಯೊಬ್ಬ ಮೊದಲು ಜ್ಯುವೆಲ್ಲರಿ ಮಳಿಗೆಯಲ್ಲಿ ಕೆಲಸ ಮಾಡಿ, ಬಳಿಕ ಜ್ಯುವೆಲ್ಲರಿ ಅಂಗಡಿ ತೆರೆದಿದ್ದ. ಪ್ರಕರಣವೊಂದರಲ್ಲಿ ಜೈಲಿಗೂ ಹೋಗಿ ಬಂದಿದ್ದ. 

ಕೃತ್ಯ ನಡೆಸಿ ಪಶ್ಚಿಮ ಬಂಗಾಳ, ಮುಂಬೈ, ರಾಜಸ್ತಾನ ಮತ್ತು ಜಮ್ಮುಕಾಶ್ಮೀರಕ್ಕೆ ತೆರಳಿದ್ದ ನಾಲ್ವರು ದರೋಡೆಕೋರರನ್ನು ನಗರ ಪೊಲೀಸ್ ಆಯುಕ್ತರು ರೂಪಿಸಿದ್ದ ತಂಡ ಬಂಧಿಸಿದೆ. ಬಂಧಿತರಿಂದ ಚಿನ್ನಾಭರಣ ಸಿಕ್ಕಿದೆ. ಜಾರ್ಜ್‍ಸೀಟ್ ಸಲ್ಲಿಕೆಯಾದ ಬಳಿಕ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಆರೋಪಿಗಳನ್ನು ಕರೆತರಲಾಗುತ್ತಿದೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಹೈಕೋರ್ಟ್ ಆದೇಶದ ಹಿನ್ನಲೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ನಾಲ್ಕೇ ದಿನಗಳಲ್ಲಿ ಪ್ರಕರಣವನ್ನು ಸುಖಾಂತ್ಯ ಮಾಡಿರುವುದಕ್ಕೆ ನಗರ ಪೊಲೀಸರಿಗೆ ಅಭಿನಂದನೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ, ಐಜಿಪಿ ಪ್ರವೀಣ್ ಪವಾರ್, ನಗರ ಪೊಲೀಸ ಆಯುಕ್ತ ಚಂದ್ರಗುಪ್ತ, ಎಸ್ಪಿ ಚೇತನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

5 ಲಕ್ಷ ರೂ. ಬಹುಮಾನ 

ದರೋಡೆ ಪ್ರಕರಣ ಪತ್ತೆ ಹೆಚ್ಚಿರುವುದು ಸಂತೋಷ ತಂದಿದೆ. ಯಶಸ್ವಿ ಕಾರ್ಯಾಚರಣೆ ಮೂಲಕ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ನೀಡುತ್ತೇವೆ.                                 

-ಅರಗ ಜ್ಞಾನೇಂದ್ರ, 
ಗೃಹ ಸಚಿವ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News