ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಬೇಕು: ಶಾಸಕ ಸಾ.ರಾ.ಮಹೇಶ್ ಒತ್ತಾಯ

Update: 2021-08-28 16:25 GMT

ಮೈಸೂರು,ಆ.28: ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಸಾಂಸ್ಕೃತಿಕ ನಗರಿ ಮೈಸೂರು ತಲೆತಗ್ಗಿಸುವಂತಾಗಿದ್ದು, ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ಶಾಸಕ ಸಾ.ರಾ.ಮಹೇಶ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡುವ ದಿಟ್ಟತನವನ್ನು ಪೊಲೀಸ್ ಇಲಾಖೆ ತೋರಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಲಹೆ ನೀಡಿದರು.

ಜಿ.ಟಿ.ದೇವೇಗೌಡರಿಗೆ ಬಹಳ ವರ್ಷ ರಾಜಕಾರಣದಲ್ಲಿ ಅನುಭವ ಇದೆ. ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಧಾರ ಕೈಗೊಳ್ಳುವ ಅರಿವು ಅವರಿಗಿದೆ. ಅವರು ಈಗಲೂ ನಮ್ಮ ನಾಯಕರು. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಂಡು, ಮನಸ್ಸನ್ನು ತಿಳಿಮಾಡಿಕೊಂಡು ನಮ್ಮ ಜೊತೆ ಇರುತ್ತಾರೆಂಬ ವಿಶ್ವಾಸವಿದೆ ಎಂದರು.

ಮೇಯರ್ ಚುನಾವಣೆ ಕುರಿತು ಮಾತನಾಡಿದ ಅವರು, ಕಾಂಗ್ರಸ್‍ನ ರಾಜ್ಯ ನಾಯಕರ ಹಠಮಾರಿತನದಿಂದ ಮೈಸೂರು ಮೇಯರ್ ಸ್ಥಾನ ಕೈತಪ್ಪಿತೇ ಹೊರತು ಜೆಡಿಎಸ್‍ನಿಂದಲ್ಲ. ಆದರೆ, ಹೊರಗಡೆ ಜೆಡಿಎಸ್ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಮೇಯರ್ ಸ್ಥಾನ ಬಿಟ್ಟುಕೊಡುತ್ತೇವೆ, ಒಮ್ಮೆ ನಮ್ಮ (ಜೆಡಿಎಸ್) ಹೈಕಮಾಂಡ್ ನಾಯಕ ಜೊತೆ ಮಾತನಾಡಿ ಎಂದು ಹೇಳಿದ್ದೆವು. ಅವರು ಯಾವುದೇ ಮಾತುಕತೆ ಆಡಿಲ್ಲ. ಈಗ ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News