×
Ad

ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-08-29 17:54 IST

ಬೆಂಗಳೂರು, ಆ. 29: `ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ ಮತ್ತು ಆಚರಣೆಯಲ್ಲಿ ತಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 95ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಹೃದಯಪೂರ್ವಕ ಗೌರವ ಸಲ್ಲಿಸುತ್ತೇನೆ' ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

`ಕರ್ನಾಟಕದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಜನತಾ ಪರಿವಾರದ ಬೇರು ಮತ್ತು ಬಿಳಲುಗಳು ಆಳವಾಗಿ ಬೇರೂರಲು ಕಾರಣರಾದರು. ಹೆಗಡೆಯವರು, ಎಸ್.ಆರ್.ಬೊಮ್ಮಾಯಿ ಅವರು ಮತ್ತು ಎಚ್.ಡಿ.ದೇವೇಗೌಡರು ಜನತಾ ಪರಿವಾರದ ತ್ರಿಮೂರ್ತಿಗಳೆಂದೇ ಪ್ರಸಿದ್ಧರು. ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿ ಅಗತ್ಯ ಕಾನೂನುಗಳನ್ನು ರೂಪಿಸಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇಡೀ ರಾಷ್ಟ್ರಕ್ಕೆ ಮಾದರಿಯಾಗುವಂತೆ ರೂಪಿಸಿದ ಹೆಗ್ಗಳಿಕೆ ಹೆಗಡೆಯವರದ್ದು' ಎಂದು ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ.

`ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರು ಮತ್ತು ರಾಮಕೃಷ್ಣ ಹೆಗಡೆಯವರು ಅತ್ಯಂತ ಆತ್ಮೀಯರಾಗಿದ್ದರು. ಈ ಇಬ್ಬರೂ ನಾಯಕರು ಯುವ ನಾಯಕರಿಗೆ ಸ್ಫೂರ್ತಿಯಾಗಿದ್ದರಲ್ಲದೆ, ಆದರ್ಶಪ್ರಾಯರಾಗಿದ್ದರು, ಮಾರ್ಗದರ್ಶಕರಾಗಿದ್ದರು. ಮತ್ತು ಹಲವು ಯುವ ನಾಯಕರು ಸಾರ್ವಜನಿಕ ಜೀವನದಲ್ಲಿ ಉನ್ನತ ಸ್ಥಾನಗಳಿಗೇರಲು ಪ್ರೇರಕರಾಗಿದ್ದರು' ಎಂದು ಅವರು ತಿಳಿಸಿದ್ದಾರೆ.

`ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ಮತ್ತು ಅಧಿಕಾರಗಳ ಬಗ್ಗೆ ಸ್ಪಷ್ಟತೆ ತರಲು ಶ್ರಮಿಸಿದ ಅವರ ಕಾರಣದಿಂದಲೇ ಸರಕಾರಿ ಆಯೋಗ ಸ್ಥಾಪನೆಯಾಗಿತ್ತು. ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಅವರದ್ದು. ಸಾರ್ವಜನಿಕ ಜೀವನವನ್ನು ಶುದ್ಧೀಕರಿಸಿ, ವಿಶ್ವಾಸಾರ್ಹತೆ ಮೂಡಿಸಲು ಕಾರಣರಾಗಿದ್ದರು. ತಮ್ಮ ಜೀವನವಿಡೀ ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ್ದರು' ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

`ಕೇವಲ ರಾಜಕಾರಣಕ್ಕಷ್ಟೇ ಸೀಮಿತರಾಗದೆ ಕಲೆ ಸಂಸ್ಕೃತಿ, ಸಾಹಿತ್ಯ, ಸಿನಿಮಾ, ಇತ್ಯಾದಿ ಲಲಿತ ಕಲೆಗಳಲ್ಲಿ ತೀವ್ರವಾದ ಆಸಕ್ತಿ ಹೊಂದಿದ್ದ ಹೆಗಡೆಯವರು ಉತ್ತಮ ವಾಗ್ಮಿಗಳು ಹಾಗೂ ಚಿಂತಕರೂ ಆಗಿದ್ದ ಸುಸಂಸ್ಕೃತ ವ್ಯಕ್ತಿ. ಕಾಂಗ್ರೆಸ್ ಸರಕಾರಗಳು ರಾಜ್ಯದಲ್ಲಿ ಮೌಲ್ಯಗಳ ಕುಸಿತಕ್ಕೆ ಕಾರಣರಾಗಿ ಜನತೆ ರಾಜಕಾರಣಿಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದ ಸಂದರ್ಭದಲ್ಲಿ ಹೊಸತನ ಮತ್ತು ಸುಸಂಸ್ಕೃತ ನಡೆ, ನೀತಿ, ಕಾರ್ಯಕ್ರಮಗಳ ಮೂಲಕ ರಾಜಕೀಯ ಚಟುವಟಿಕೆಗಳಲ್ಲಿ ಒಂದು ರೀತಿಯ ಚೇತೋಹಾರಿ ಬದಲಾವಣೆ ತರಲು ಹೆಗಡೆಯವರು ಸ್ಪೂರ್ತಿಯಾಗಿದ್ದರು' ಎಂದು ಮುಖ್ಯಮಂತ್ರಿ ನೆನಪಿಸಿಕೊಂಡಿದ್ದಾರೆ.

`ರಾಜ್ಯದಲ್ಲಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳಾಗಿ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರದ ವಾಣಿಜ್ಯ ಖಾತೆ ಸಚಿವರಾಗಿ ಮತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅತ್ಯಂತ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿ ರಾಷ್ಟ್ರೀಯ ಮಟ್ಟದ ನಾಯಕ ಎಂದು ಹೆಸರಾಗಿದ್ದರು. ಹಣಕಾಸು ಸಚಿವರು ಮತ್ತು ಸಿಎಂ ಆಗಿ ದಾಖಲೆಯ 13 ಮುಂಗಡ ಪತ್ರ ಮಂಡಿಸಿದ್ದ ಹೆಗಡೆಯವರು ಜಾತ್ಯತೀತತೆ ಮತ್ತು ಸಮಸಮಾಜ ನಿರ್ಮಾಣಕ್ಕೆ ಬದ್ಧರಾಗಿದ್ದರು'.

`ರಾಮಕೃಷ್ಣ ಹೆಗಡೆ ಅವರ ಆಡಳಿತ ಶೈಲಿ, ವಾಕ್ಪಟುತ್ವ, ನೇರ ಮತ್ತು ನಿಷ್ಠುರ ನಡೆಯಿಂದ ನಮ್ಮದೊಂದು ಪೀಳಿಗೆಯೇ ಪ್ರಭಾವಿತವಾಗಿತ್ತು. ಅಂತಹ ಮುತ್ಸದ್ದಿ ಮತ್ತು ಸುಸಂಸ್ಕೃತ ನಾಯಕನ ಒಡನಾಟ ನಮಗೆ ದೊರೆತದ್ದು ನಮ್ಮ ಸುದೈವ ಎಂದೇ ಭಾವಿಸುತ್ತೇನೆ. ಅವರ 95ನೆ ಜನ್ಮದಿನದ ಸಂದರ್ಭದಲ್ಲಿ ಮತ್ತೊಮ್ಮೆ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News