ಚಿಕ್ಕಬಳ್ಳಾಪುರದಲ್ಲಿ ಟೆಕ್ಸ್ ಟೈಲ್, ಫಾರ್ಮಾ ಉದ್ಯಮಗಳ ಆರಂಭಕ್ಕೆ ಯತ್ನ: ಸಚಿವ ಡಾ.ಕೆ. ಸುಧಾಕರ್

Update: 2021-08-29 13:38 GMT

ಚಿಕ್ಕಬಳ್ಳಾಪುರ, ಆಗಸ್ಟ್ 29, ರವಿವಾರ ಚಿಕ್ಕಬಳ್ಳಾಪುರದಲ್ಲಿ ಟೆಕ್ಸ್ ಟೈಲ್, ಫಾರ್ಮಾ ಉದ್ಯಮಗಳನ್ನು ಆರಂಭಿಸಿ ಹೆಚ್ಚು ಯುವಜನರಿಗೆ ಉದ್ಯೋಗ ನೀಡುವ ಪ್ರಯತ್ನ ನಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತದಿಂದ ನಡೆದ ಮಿನಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕುರಿತು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ್ದು, ಈ ಭಾಗದಲ್ಲಿ ಟೆಕ್ಸ್‍ಟೈಲ್ ಪಾರ್ಕ್ ನಿರ್ಮಿಸಲು ಸಲಹೆ ಸಿಕ್ಕಿದೆ. ಟೆಕ್ಸ್ ಟೈಲ್ ಜೊತೆಗೆ ಫಾರ್ಮಾ ಉದ್ಯಮವನ್ನೂ ಆರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಜಾರಿಯಲ್ಲಿದೆ. ವಿದ್ಯಾರ್ಥಿಗಳು ಸಂಶೋಧನಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಡು ಜಿಲ್ಲೆ ಎನ್ನಲಾಗುತ್ತದೆ. ಆದರೂ ಗುಣಮಟ್ಟದ ತರಕಾರಿ, ಹಣ್ಣು, ಹೂಗಳನ್ನು ಕೃಷಿಕರು ರಫ್ತು ಮಾಡುತ್ತಿದ್ದಾರೆ. ಇದನ್ನು ಯುವಜನರೇ ಮಾಡುತ್ತಿದ್ದಾರೆ. ಅನೇಕರು ಉನ್ನತ ಶಿಕ್ಷಣ ವ್ಯಾಸಂಗ ಮಾಡಿ, ಪಾಲಿಹೌಸ್ ಮಾಡಿ ಯಶಸ್ವಿಯಾಗಿದ್ದಾರೆ. ಈ ಶತಮಾನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ. ವಿದ್ಯಾವಂತರು ಕೃಷಿ ಮಾಡುವುದಿಲ್ಲ ಎಂಬ ಮಾತು ನಿಜವಲ್ಲ. ಐಟಿ, ಎಂಜಿನಿಯರ್ ಗಳು ಕೂಡ ಕೃಷಿಯಲ್ಲಿ ತೊಡಗಿ ಹೆಚ್ಚು ಹಣ ಗಳಿಸುತ್ತಿದ್ದಾರೆ. ಉದ್ಯೋಗ ಮಾಡುವ ಜೊತೆಗೆ, ಸ್ವಯಂ ಉದ್ಯೋಗ ಮಾಡಿ ಬೇರೆಯವರಿಗೆ ಉದ್ಯೋಗ ನೀಡಬಹುದು ಎಂದರು.

ರಾಜ್ಯದಲ್ಲಿ ಅನೇಕ ಯುವಜನರಿಗೆ ಕೌಶಲ್ಯ ತರಬೇತಿ ಮುಖ್ಯ. ಕೌಶಲ್ಯವಿಲ್ಲದಿದ್ದರೆ ವಿದ್ಯಾಭ್ಯಾಸ ಪೂರ್ಣವಾಗುವುದಿಲ್ಲ. ಉದ್ಯೋಗದಾತರಿಗೆ ಬೇಕಾದ ಕೌಶಲ್ಯವನ್ನು ಯುವಜನರಿಗೆ ನೀಡಬೇಕು. ಕೈಗಾರಿಕಾ ಸಂಸ್ಥೆಗಳು ಹಾಗೂ ಕಾಲೇಜುಗಳ ನಡುವೆ ಈಗ ಒಪ್ಪಂದಗಳಾಗುತ್ತಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕೌಶಲ್ಯ ತರಬೇತಿ ಕೂಡ ನಡೆಯುತ್ತಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ಒತ್ತು ನೀಡಿ ಆಥಿಕ ನೆರವು ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಯಡಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗಿದೆ. ಆರೋಗ್ಯ ಇಲಾಖೆಗೆ ನರ್ಸಿಂಗ್ ಗೆ ಬೇಡಿಕೆ ಇದೆ. ಇಂತಹ ಬೇಡಿಕೆಯನ್ನು ಪ್ರತಿ ಕ್ಷೇತ್ರದಲ್ಲಿ ಅರ್ಥ ಮಾಡಿಕೊಂಡು ಆ ಶಿಕ್ಷಣ ಪಡೆಯಬೇಕು. ಉದ್ಯೋಗ ಮೇಳ ಸತತವಾಗಿ ನಡೆಯಬೇಕು. ಇನ್ನೂ ದೊಡ್ಡಮಟ್ಟದ ಉದ್ಯೋಗ ಮೇಳ ನಡೆಸಬೇಕು ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಆಂತರಿಕ ವಿಚಾರ. ಇದಕ್ಕೆ ಬೇರೆ ಪಕ್ಷಗಳು ತಲೆ ಹಾಕದಿರುವುದೇ ಒಳ್ಳೆಯದು. ಆ ಪಕ್ಷದಲ್ಲಿ ಒಬ್ಬ ಮಹಿಳಾ ನಾಯಕಿ ರಾಜೀನಾಮೆ ನೀಡಿದ್ದಾರೆ. ಇಂತಹ ವಿಚಾರಗಳನ್ನು ನಾವು ಕೇಳುವುದಿಲ್ಲ.

ಜಿಲ್ಲೆಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾಡಲು ಕ್ರಮ ವಹಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News