ರಾಮನಗರ, ಮಾಗಡಿ ವರೆಗೆ ಮೆಟ್ರೋ ರೈಲು ವಿಸ್ತರಣೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

Update: 2021-08-29 13:48 GMT

ಬೆಂಗಳೂರು, ಆ. 29: `ಮುಂದಿನ ದಿನಗಳಲ್ಲಿ ಬೆಂಗಳೂರು ಹೊರವಲಯದ ರಾಜಾನುಕುಂಟೆ, ರಾಮನಗರ ಮತ್ತು ಮಾಗಡಿಯ ವರೆಗೂ `ಮೆಟ್ರೋ ರೈಲು' ಯೋಜನೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಯೋಜನೆಯನ್ನು ಸಿದ್ಧಪಡಿಸುವಂತೆ ಈಗಾಗಲೇ ತಿಳಿಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ನಿಲ್ದಾಣದ ವರೆಗೆ 7.5 ಕಿ.ಮೀ ಉದ್ದದ `ಮೆಟ್ರೋ ನೇರಳೆ' ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಬೆಂಗಳೂರು ನಗರವನ್ನು ನಿಜವಾದ ಅಂತರ ರಾಷ್ಟ್ರೀಯ ಕೇಂದ್ರವನ್ನಾಗಿಸಲು ಸರಕಾರ ಸರ್ವ ಪ್ರಯತ್ನ ಮಾಡಲಿದೆ. ಮೆಟ್ರೋ ಇನ್ನಷ್ಟು ಜನರನ್ನು ಸಾಗಿಸುವ ಸಾಮಥ್ರ್ಯ ಹೊಂದಬೇಕು. ಒಟ್ಟು 317 ಕಿ.ಮೀ ಉದ್ದದ ಮಾರ್ಗ ನಿರ್ಮಾಣದ ಗುರಿಯಿದೆ' ಎಂದು ಹೇಳಿದರು.

`ಪ್ರತಿದಿನದ ಮೊದಲ ಗಂಟೆಯನ್ನು ಬೆಂಗಳೂರಿನ ಮೆಗಾ ಯೋಜನೆಗಳಾದ ಮೆಟ್ರೋ, ಹೊರವರ್ತುಲ ರಸ್ತೆ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೈ ಸ್ಪೀಡ್ ರೈಲು ಮತ್ತು ರಸ್ತೆ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಮೀಸಲಿರಿಸಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.

`ನಗರದಲ್ಲಿ ಜನಸಂದಣಿ ಹೆಚ್ಚಿರುವ ಕಡೆ ಮೆಟ್ರೋ ಸೌಲಭ್ಯವನ್ನು ಕಲ್ಪಿಸಲಾಗಿದೆ. ದೂರದ ಪ್ರದೇಶಗಳಿಗೆ ಅತ್ಯಂತ ಕಡಿಮೆ ಸಮಯದಲ್ಲಿ ತಲುಪಲು ಮೆಟ್ರೋ ರೈಲು ಸಂಚಾರದಿಂದ ಸಾಧ್ಯ. ಈ 7.5ಕಿ.ಮೀ ಮಾರ್ಗದಲ್ಲಿ ಅತ್ಯಂತ ಹೆಚ್ಚು ಜನಸಂದಣಿ ಇದೆ. ಹೀಗಾಗಿ ಈ ಭಾಗದ ಬಹಳಷ್ಟು ಜನರಿಗೆ ಮೆಟ್ರೋ ರೈಲು ಉಪಯುಕ್ತವಾಗಲಿದೆ. ಇದನ್ನು ಕಾರ್ಯಗತ ಮಾಡಿರುವ ಎಲ್ಲ ಅಧಿಕಾರಿಗಳಿಗೆ ಅಭಿನಂದನೆಗಳು' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

`ಬೆಂಗಳೂರು ನಗರ ಅಂತರ ರಾಷ್ಟ್ರೀಯ ನಗರ. ಯಾವುದೇ ಅಂತರ್ ರಾಷ್ಟ್ರೀಯ ನಗರ ಮೆಟ್ರೋ ಇಲ್ಲದೆ ಅಪೂರ್ಣ. ಮೆಟ್ರೋ ಬೆಂಗಳೂರಿನ ಜೀವನಾಡಿ ಮಾತ್ರವಲ್ಲ ಬೆಂಗಳೂರಿನ ಭವಿಷ್ಯ ರೇಖೆಯೂ  ಆಗಬೇಕ.  ಜನರಿಗೆ ಸಂಪರ್ಕ ವ್ಯವಸ್ಥೆ ಹಾಗೂ ಸುಖಕರ ಪ್ರಯಾಣ ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರದಲ್ಲಿ ಅವಶ್ಯಕವಾಗಿದೆ' ಎಂದು ಅವರು ತಿಳಿಸಿದರು.

`ವಿದೇಶಿ ಗಣ್ಯರು, ವಿಜ್ಞಾನಿಗಳು ಭೇಟಿ ನೀಡುವ ಕೇಂದ್ರ ಈ ಉದ್ಯಾನನಗರಿ. ಸಿಲಿಕಾನ್ ವ್ಯಾಲಿ, ಐಟಿ-ಬಿಟಿಗಳ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ ನಮ್ಮ ಬೆಂಗಳೂರು. ಹೀಗಾಗಿ ಕಾಲಮಿತಿಯೊಳಗೆ ಯೋಜನೆಗಳನ್ನು ಅನುಷ್ಟಾನಗೊಳಿಸುವುದು ಮುಖ್ಯ. ಅದರ ಜತೆ ಯೋಜನೆಗಳಲ್ಲಿ ಉತ್ತರದಾಯಿತ್ವ ಅತಿಮುಖ್ಯ' ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಅಭಿಪ್ರಾಯಿಸಿದರು.

`ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲಿಯೇ ವಿಶಿಷ್ಟ ವಿಮಾನ ನಿಲ್ದಾಣ. ಮುಂಬರುವ ದಿನಗಳಲ್ಲಿ, ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಒದಗಿಸಲಾಗುವುದು. ಮೂರು ವಿಧದ ಸಂಪರ್ಕವನ್ನು ಒದಗಿಸಲಾಗುವುದು. ಈ ಕನಸನ್ನು ನನಸಾಗಿಸುವತ್ತ ಅಗತ್ಯವಿರುವ ಎಲ್ಲ ತಯಾರಿಗಳನ್ನು ನಾವು ಮಾಡುತ್ತಿದ್ದೇವೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

`ನಗರದಲ್ಲಿ  ದುಡಿಯುವ ವರ್ಗ ಬಹಳ ದೊಡ್ಡದಿದೆ. ಅವರ ಅಭಿವೃದ್ಧಿಯನ್ನೂ ಗಮನದಲ್ಲಿರಿಸಿಕೊಂಡಿದ್ದೇವೆ. 75  ಕೊಳಗೇರಿಗಳ ಸಂಪೂರ್ಣ ಅಭಿವೃದ್ಧಿಯನ್ನು ಮಾಡುವುದಾಗಿ 75ನೆ ಸ್ವಾತಂತ್ರ್ಯೋತ್ಸವ ದಿನದಂದು ಘೋಷಿಸಲಾಗಿದೆ. ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ವಿಶೇಷ ಕಾರ್ಯಕ್ರಮ, ಬೆಂಗಳೂರು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ 12  ಹೆಚ್ಚು ರಸ್ತೆಗಳನ್ನು ಗುರುತಿಸಿ ಅಡೆತಡೆ ಇಲ್ಲದೆ ವಾಹನ ಸಂಚಾರ, ಕೃತಕ ಬುದ್ದಿಮತ್ತೆ ಬಳಕೆಯಿಂದ  ಸಿಗ್ನಲ್ ವ್ಯವಸ್ಥೆಗೆ ಕ್ರಮ ಜರುಗಿಸಲಾಗಿದೆ' ಎಂದು ಅವರು ನುಡಿದರು.

ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಝ್ ಮಾತನಾಡಿ, ಮೆಟ್ರೋ ರೈಲು ಯೋಜನೆ ಕೆಲಸದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಬಹಳ ಮುಖ್ಯ. ಅದನ್ನ ಯಶಸ್ವಿಯಾಗಿ ಮಾಡಿದ ಬಳಿಕ ಇಂದು ಮೆಟ್ರೋ ರೈಲ್ವೆ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣ ಆಗುತ್ತಿವೆ ಎಂದು ತಿಳಿಸಿದರು. ಕೇಂದ್ರ ವಸತಿ, ನಗರ ವ್ಯವಹಾರ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ವಿ.ಮುನಿರತ್ನ, ಎಂ.ಟಿ.ಬಿ.ನಾಗರಾಜ್, ಕೆ.ಗೋಪಾಲಯ್ಯ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

`ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆಯ ಕಾಮಗಾರಿ 2024ಕ್ಕೆ ಮುಗಿಸುವಂತೆ ಸೂಚಿಸಿದ್ದೇನೆ. ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದಾಗ, ಅವರು ಮೆಟ್ರೋ ಯೋಜನೆಗೆ ಹಣಕಾಸಿನ ತೊಂದರೆ ಆಗುವುದಿಲ್ಲ. ಕೆಲಸದ ವೇಗವನ್ನು ಹೆಚ್ವಿಸಿ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ 2024ಕ್ಕೆ ಮೆಟ್ರೋ ಕೆಲಸ ಪೂರ್ಣವಾಗಲಿದೆ'

-ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News