2ನೆ ದಿನ ಸಿಇಟಿ ಸುಸೂತ್ರ: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ

Update: 2021-08-29 14:17 GMT

ಬೆಂಗಳೂರು, ಆ. 29: `ರಾಜ್ಯಾದ್ಯಂತ ರವಿವಾರ ನಡೆದ ವೃತ್ತಿಶಿಕ್ಷಣ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎರಡನೇ ದಿನವೂ ಸುಸೂತ್ರವಾಗಿ ನಡೆದಿದೆ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, `ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಗಿದೆ. ನೊಂದಣಿ ಮಾಡಿಸಿದ್ದ ಒಟ್ಟು 2,01,834 ಅಭ್ಯರ್ಥಿಗಳಲ್ಲಿ, 1,93,588 (ಶೇ.95.91ರಷ್ಟು) ಅಭ್ಯರ್ಥಿಗಳು ಭೌತಶಾಸ್ತ್ರ ವಿಷಯಕ್ಕೆ ಮತ್ತು 1,93,522 (ಶೇ.95.88ರಷ್ಟು) ಅಭ್ಯರ್ಥಿಗಳು ರಸಾಯನಶಾಸ್ತ್ರ ವಿಷಯಕ್ಕೆ ಹಾಜರಾಗಿದ್ದರು' ಎಂದು ಮಾಹಿತಿ ನೀಡಿದ್ದಾರೆ.
`ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಎಸ್‍ಓಪಿ ಅನುಸಾರ ಎಲ್ಲ ಸುರಕ್ಷತೆಯ ಕ್ರಮವನ್ನು ಖಾತರಿಪಡಿಸಿಕೊಂಡು ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪಾಸಿಟಿವ್ ಇದ್ದ 12 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು' ಎಂದು ಅವರು ಹೇಳಿದ್ದಾರೆ.

ನಾಳೆ (ಆ.30) ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುವುದು. ಒಟ್ಟು 1,682 ಅಭ್ಯರ್ಥಿಗಳು ಈ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News