ಶಿವಮೊಗ್ಗ: ಬೈಕ್ ಕಳವು ಪ್ರಕರಣ; ನಾಲ್ಕು ಮಂದಿ ಸೆರೆ

Update: 2021-08-29 15:20 GMT

ಶಿವಮೊಗ್ಗ, ಆ.29: ಎನ್‌ಫೀಲ್ಡ್ ಬೈಕ್ ಕಳ್ಳತನ ಪ್ರಕರಣ ಬೇಧಿಸಲು ಹೋದ ಪೊಲೀಸರು ಅಂತರ್ ಜಿಲ್ಲಾಮಟ್ಟದ ಬೈಕ್ ಕಳ್ಳರ ಗ್ಯಾಂಗ್‌ವೊಂದನ್ನು ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಭದ್ರಾವತಿಯ ಸುಹೇಲ್ ಪಾಷಾ ಅಲಿಯಾಸ್ ಸಮೋಸ ರಾಜ (22), ಶಿವಮೊಗ್ಗದ ಭರಮಪ್ಪ ನಗರದ ಮೊಹ್ಮದ್ ಹ್ಯಾರೀಸ್ (22), ಹಳೆ ಮಂಡ್ಲಿ ಅಮೃತ ರೈಸ್ ಮಿಲ್ ಸಮೀಪದ ಫಜಲು ಅಲಿಯಾಸ್ ಚಬಾಜಾ (20) ಹಾಗೂ ಆರ್.ಎಂ.ಎಲ್ ನಗರ ನಿವಾಸಿ ಸಾಹೀಲ್ ಶೇಟ್ (20) ಬಂಧಿತರು.

ಜುಲೈ 7ರ ರಾತ್ರಿ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮ ಟಾಕೀಸ್ ಒಂದನೇ ತಿರುವಿನ ವಾಸಿಯೊಬ್ಬರ ರಾಯಲ್ ಎನ್‌ಫೀಲ್ಡ್ ಬೈಕ್ ಕಳವು ಮಾಡಲಾಗಿದ್ದು, ಈ ಬಗ್ಗೆ ದೂರು ನೀಡಲಾಗಿತ್ತು.

ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ತುಂಗಾ ನಗರ ಇನ್ಸ್‌ಪೆಕ್ಟರ್ ದೀಪಕ್, ಪಿ.ಎಸ್.ಐ ಹಾಗೂ ಸಿಬ್ಬಂದಿ ತಂಡವು ತನಿಖೆ ಕೈಗೊಂಡು ರವಿವಾರ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ವಿಚಾರಣೆ ನಡೆಸಿದಾಗ ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.
ತುಂಗಾನಗರ ಠಾಣೆಯಲ್ಲಿ 3, ದೊಡ್ಡಪೇಟೆ ಠಾಣೆಯಲ್ಲಿ 5, ವಿನೋಬನಗರ ಠಾಣೆ 2, ಜಯನಗರ ಠಾಣೆಯ 2, ಶಿವಮೊಗ್ಗ ರೈಲ್ವೆ ಠಾಣೆ 1, ಶಿವಮೊಗ್ಗ ಗ್ರಾಮಾಂತರ ಠಾಣೆ 1, ಕುಂಸಿ ಠಾಣೆ 1, ಶಿರಾಳಕೊಪ್ಪ ಠಾಣೆಯ 3, ಹೊನ್ನಾಳಿ ಠಾಣೆಯ 2 ಹಾಗೂ ಬೀರೂರು ಮತ್ತು ಕಡೂರು ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಅಂದಾಜು 10,52,450 ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅರುಣ್ ಕುಮಾರ್,ಕಿರಣ್ ಮೋರೆ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News