×
Ad

ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಪುನಃ ನೇಮಕ ಸರಿಯಲ್ಲ:ಸರಕಾರದ ವಿರುದ್ಧ ನೌಕರರ ಸಂಘ ಪ್ರತಿಭಟನೆ

Update: 2021-09-01 19:01 IST

ಬೆಂಗಳೂರು, ಸೆ. 1: `ಆಡಳಿತದಲ್ಲಿ ಸುಧಾರಣೆ ತರುತ್ತೇವೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎನ್ನುವ ಸರಕಾರ ಮೊದಲು ಸಚಿವಾಲಯದ ನೌಕರರಿಗೆ ನ್ಯಾಯ ಒದಗಿಸಲಿ, ನಿವೃತ್ತರಾದವರನ್ನು ಪುನಃ ಅದೇ ಜಾಗಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸುವುದನ್ನು ಕೈಬಿಡಬೇಕು' ಎಂದು ಕರ್ನಾಟಕ ರಾಜ್ಯ ಸಚಿವಾಲಯದ ನೌಕರರ ಸಂಘ ಆಗ್ರಹಿಸಿದೆ. ಅಲ್ಲದೆ, ಸಚಿವಾಲಯದ ನೌಕರರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದೇ ಹೋದಲ್ಲಿ ಸಚಿವಾಲಯವನ್ನು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದೆ.

ಬುಧವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಗುರುಸ್ವಾಮಿ, ಸರಕಾರ ಆಡಳಿತ ಸುಧಾರಣೆಯ ನೆಪದಲ್ಲಿ ಸಚಿವಾಲಯದಲ್ಲಿ ಕಿರಿಯ ಸಹಾಯಕರ ಹುದ್ದೆಗಳನ್ನು ಕಡಿತಗೊಳಿಸಲೆತ್ನಿಸಿ ಅನ್ಯಾಯ ಮಾಡುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸದೆ ಸಚಿವಾಲಯದ ನೌಕರರು ತಹಶೀಲ್ದಾರರಾಗುವ ಸೇವೆಯನ್ನು ತಪ್ಪಿಸಿದೆ. ಕೆಲವು ಸಚಿವರು ಹಾಗೂ ಕೆಎಎಸ್ ಅಧಿಕಾರಿಗಳು ತಮ್ಮ ಆಪ್ತರನ್ನು ಹೊರಗುತ್ತಿಗೆ ಮೇಲೆ ನೇಮಿಸಿಕೊಳ್ಳುವ ಮೂಲಕ ಸಚಿವಾಲಯದಲ್ಲಿ ಕೆಲವರು ಸರಕಾರಿ ನೌಕರರ ಮೇಲೆ ದಬ್ಬಾಳಿಕೆ ಸರ್ವಾಧಿಕಾರ ಧೋರಣೆ ತಾಳುತ್ತಿದ್ದಾರೆ ಎಂದು ದೂರಿದರು.

ಸಚಿವಾಲಯದಲ್ಲಿ ನಿವೃತ್ತರಾದವರನ್ನೇ ಮತ್ತೆ ಪುನಃ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುವ ಮೂಲಕ ಬಹುತೇಕರಿಗೆ ಸರಕಾರಿ ನೌಕರಿ ಸಿಗುವ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ. ಅನಾವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎನ್ನುವ ಸರಕಾರ ಮೊದಲು ನಿವೃತ್ತರಾದವರನ್ನು ಪುನಃ ನೇಮಿಸಿಕೊಳ್ಳುವುದನ್ನು ಬಿಡಲಿ. ಅದರ ಬದಲಿಗೆ ಒಂದಿಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲಿ' ಎಂದು ಗುರುಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು. 

ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಮಾತನಾಡಿ, `ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು. ಆಡಳಿತ ಸುಧಾರಣೆ ಹೆಸರಿನಲ್ಲಿ ಸಚಿವಾಲಯದ ಯಾವುದೇ ಇಲಾಖೆ, ಹುದ್ದೆಗಳಿಗೆ ಕಡಿತ ಹಾಕಬಾರದು. ತಾಂತ್ರಿಕವಾಗಿ ಸಮಸ್ಯೆ ಪರಿಹರಿಸಿ ನೈಜತೆಯನ್ನು ಅರಿತು ಆಡಳಿತಾತ್ಮಕ ಸುಧಾರಣೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಿ. ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಸಚಿವಾಲಯದ ಇತರೆ ಇಲಾಖೆಗಳ ಕೇಡರ್ ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಗಮನಕ್ಕೆ ತಾರದೆ ನೇಮಕ ಮಾಡಕೊಳ್ಳುವುದರ ಜೊತೆಗೆ ನೇರವಾಗಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆಯನ್ನೂ ಪಡೆಯುತ್ತಿರುವುದು ಕಾನೂನುಬಾಹಿರ' ಎಂದು ಖಂಡಿಸಿದರು.

`ಸಚಿವಾಲಯದ ಸುಮಾರು 34 ಇಲಾಖೆಗಳು ಕೇಂದ್ರೀಕೃತ ವ್ಯವಸ್ಥೆಯಡಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೂ, ಕೆಲವು ಇಲಾಖೆಯ ವಿಭಾಗಗಳನ್ನು ಸಚಿವಾಲಯದ ಸುತ್ತಲಿನ ವಾತಾವರಣದಿಂದ ಬಹುದೂರ ಕೊಂಡೊಯ್ಯುವ ಆದೇಶಗಳನ್ನು ಹೊರಡಿಸಿ ಹೊರಗಿನ ಕ್ಷೇತ್ರ ಇಲಾಖೆಗಳಿಗೆ ಹಾಗೂ ತಾತ್ಕಾಲಿಕ ಆಯೋಗಗಳಿಗೆ ಸಚಿವಾಲಯದ ಮತ್ತು ಕಟ್ಟಡಗಳಲ್ಲಿ ಅವಕಾಶ ಒದಗಿಸುವುದರಿಂದ ಸಚಿವಾಲಯವು ಒಂದೇ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲು ತೊಡಕುಂಟಾಗುತ್ತಿದೆ. ಹೀಗಾಗಿ ಸಚಿವಾಲಯದ ಎಲ್ಲ ಇಲಾಖೆಗಳನ್ನು ಒಂದೆಡೆ ತರಬೇಕು' ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳಿಗಾಗಿ ಹಾಗೂ ಸರಕಾರವನ್ನು ಎಚ್ಚರಿಸಲು ಆಚರಿಸಲು ನಾಳೆ(ಸೆ.2) ಬಹುಮಹಡಿಗಳ ಕಟ್ಟಡದ ಎದುರಿಗೆ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದು, ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿ ನ್ಯಾಯ ಒದಗಿಸದೇ ಹೋದಲ್ಲಿ ಸಚಿವಾಲಯವನ್ನು ಮುಚ್ಚಬೇಕಾಗುತ್ತದೆ ಎಂದು ನೌಕರರ ಸಂಘ ಎಚ್ಚರಿಸಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ಆರ್.ಕುಮಾರಸ್ವಾಮಿ, ಹರ್ಷಾ, ಮಂಜುಳ, ಮಾರುತಿ, ವಿದ್ಯಾಶ್ರೀ, ಕೆ.ಟಿ. ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News