ಜಿಂಕೆಗಳನ್ನು ಬೇಟೆಯಾಡುತ್ತಿದ್ದ ಆರೋಪಿಗಳ ಮೇಲೆ ಗುಂಡು ಹಾರಾಟ: ಓರ್ವನಿಗೆ ಗಾಯ

Update: 2021-09-03 10:25 GMT

ಮಳವಳ್ಳಿ ಸೆ.3: ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆಗಳ ಬೇಟೆಯಾಡುತ್ತಿದ್ದ ದುಷ್ಕರ್ಮಿಗಳ ಗುಂಪಿನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಭೇಟೆಗಾರನನೊಬ್ಬನಿಗೆ ಗುಂಡು ತಗುಲಿ‌ ಗಾಯಗೊಂಡಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿರುವ ಘಟನೆ ಮಂಡ್ಯ ಮಳವಳ್ಳಿ ತಾಲೂಕಿನ ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿನ ಮುಖ್ಯ ರಸ್ತೆಬದಿಯಲ್ಲಿ  ಈ ದುಷ್ಕರ್ಮಿಗಳು ಅಡಗಿ ಕುಳಿತು ರಸ್ತೆ ದಾಟುವ ಜಿಂಕೆ ಸೇರಿದಂತೆ ಇನ್ನಿತರ ಪ್ರಾಣಿಗಳ ಮೇಲೆ ಗುಂಡು ಹಾರಿಸಿ ಪ್ರಾಣಿಗಳ ಭೇಟಿಯಾಡುತ್ತಿದ್ದರು ಎನ್ನಲಾಗಿದೆ.

ಮುಂಜಾನೆ 5  ಸಮಯದಲ್ಲಿ ಸಹ ಇದೇ ರೀತಿ ಜಿಂಕೆಗಳ‌ ಬೇಟೆಯಲ್ಲಿ ತೊಡಗಿದ್ದ ನಾಲ್ವರು ಬೇಟೆಕೋರರ ಗುಂಪು ಎರಡು ಜಿಂಕೆಗಳನ್ನು ಹತ್ಯಗೈದಿರುವ ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೇಟೆಕೋರರನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ ಪ್ರತಿಯಾಗಿ ಬೇಟೆಕೋರರ ಮೇಲೆ ಗುಂಡು ಹಾರಿಸಿದಾಗ ದುಷ್ಕರ್ಮಿಯೊಬ್ಬ ಗುಂಡು ತಗುಲಿ ಗಾಯಗೊಂಡಿದ್ದು, ಈತನನ್ನು ಗೊಲ್ಲರದೊಡ್ಡಿ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಉಳಿದ ಮೂವರು ಪರಾರಿಯಾಗಿದ್ದು ಇವರೂ  ಗೊಲ್ಲರದೊಡ್ಡಿ ಗ್ರಾಮದವರು ಎನ್ನಲಾಗಿದೆ. ಗಾಯಾಳುವನ್ನು‌ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳು ಕೊಂದು ಹಾಕಿದ್ದ ಎರಡು ಜಿಂಕೆಯ ಶವಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಸಿಬ್ಬಂದಿ, ಪರಾರಿಯಾಗಿರುವ ಆರೋಪಿಗಳ ಶೋಧಕಾರ್ಯ ಕೈಗೊಂಡಿದ್ದಾರೆ.

ಸ್ಥಳಕ್ಕೆ ‌ಡಿವೈಎಸ್ಪಿ ಲಕ್ಷಿನಾರಾಯಣ ಪ್ರಸಾದ್, ಎಸಿಎಫ್ ಅಂಕರಾಜು, ಆರ್ ಎಫ್  ಒ ಮಹಾದೇವಸ್ವಾಮಿ, ಹಲಗೂರು ಪಿ ಎಸ್ ಐ ಮಾರುತಿ, ತಮ್ಮಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಹಲಗೂರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News