`ಸ್ಥಿರಾಸ್ತಿ ಮಾರ್ಗಸೂಚಿ ದರ' ಇಳಿಕೆಗೆ ಚಿಂತನೆ: ಸಚಿವ ಆರ್.ಅಶೋಕ್

Update: 2021-09-03 12:11 GMT

ಬೆಂಗಳೂರು, ಸೆ. 3: `ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ರಾಜ್ಯಾದ್ಯಂತ `ಸ್ಥಿರಾಸ್ತಿ ಮಾರ್ಗಸೂಚಿ ದರ' ಇಳಿಕೆಗೆ ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. 

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಕುಸಿದಿದೆ. ಹೀಗಾಗಿ ಹೆಚ್ಚಿನವರು ಜಿಪಿಎ ಪತ್ರಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದುದರಿಂದ ಅದನ್ನು ತಪ್ಪಿಸಲು ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ, ಅಗತ್ಯ ಸ್ಥಳಗಳಲ್ಲಿ ಕಡಿಮೆ ಮಾಡಲು ನಿರ್ದೇಶನ ನೀಡಲಾಗಿದೆ' ಎಂದು ವಿವರಣೆ ನೀಡಿದರು.

`ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದ ಆಸ್ತಿಗಳ ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಿಸಲಾಗುವುದು. ಉಳಿದಂತೆ ನಿವೇಶನ ಮತ್ತು ಮನೆ ಖರೀದಿಗೆ ಮಾರ್ಗಸೂಚಿ ದರವನ್ನು ಇಳಿಕೆ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಅಧ್ಯಯನ ನಡೆಸಿ, ಡಿಸೆಂಬರ್ ಒಳಗಾಗಿ ದರ ಪರಿಷ್ಕರಣೆಗೆ ಸೂಚಿಸಲಾಗಿದೆ. ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು  ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಅಶೋಕ್ ವಿವರಿಸಿದರು.

ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ: `ರಾಜ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ನಾಳೆ(ಸೆ.4) ರಾಜ್ಯಕ್ಕೆ ಆಗಮಿಸಲಿದ್ದು, ಸೆ.7ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ತಾಲೂಕುಗಳಲ್ಲಿ ಪ್ರವಾಸ ನಡೆಸಲಿದ್ದು, ಕೃಷಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ಅತಿವೃಷ್ಟಿಯ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ' ಎಂದು ಅಶೋಕ್ ತಿಳಿಸಿದರು.

ರಾಜ್ಯದಲ್ಲಿನ ಮಳೆ-ಪ್ರವಾಹದಿಂದ ಒಟ್ಟು 5,690 ಕೋಟಿ ರೂ.ಮೊತ್ತದ ಹಾನಿಯಾಗಿದೆ ಎಂದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರಾಜ್ಯಕ್ಕೆ 765 ಕೋಟಿ ರೂ.ಪರಿಹಾರ ದೊರೆಯಬೇಕಿದೆ. ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸುವುದರಿಂದ ನಷ್ಟಕ್ಕೆ ಒಳಗಾಗಿರುವವರು ಸೇರಿದಂತೆ ರಾಜ್ಯಕ್ಕೆ ಪರಿಹಾರ ದೊರಕಲು ಅನುಕೂಲವಾಗಲಿದೆ' ಎಂದು ಸಚಿವ ಅಶೋಕ್ ತಿಳಿಸಿದರು.

ಸರ್ವೇಯರ್ ಗಳ ನೇಮಕ: `ರಾಜ್ಯದಲ್ಲಿ ಭೂಮಾಪಕರ ಕೊರತೆ ಇರುವುದರಿಂದ ಸ್ಥಿರಾಸ್ತಿಗಳ ಭೂಮಾಪನ, ಪೋಡಿ ಪ್ರಕ್ರಿಯೆಗೆ ತೊಂದರೆ ಆಗಿದೆ. ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಅರ್ಜಿಗಳು ಬಾಕಿ ಇವೆ. ಅವುಗಳ ತ್ವರಿತ ವಿಲೇವಾರಿಗಾಗಿ ಹೆಚ್ಚಿನ ಸಂಖ್ಯೆಯ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದೀಗ 820 ಭೂಮಾಪಕರಿಗೆ ನೇಮಕಾತಿ ಆದೇಶ ನೀಡಲಾಗಿದೆ' ಎಂದು ಅಶೋಕ್ ಮಾಹಿತಿ ನೀಡಿದರು.
`ಎಂಟರಿಂದ ಹತ್ತು ತಿಂಗಳ ಅವಧಿಯಲ್ಲಿ ಭೂಮಾಪಕರ ಸಮಸ್ಯೆಯಿಂದ ಬಹುತೇಕ ಅರ್ಜಿಗಳು ಬಾಕಿ ಉಳಿದಿವೆ. ಡಿಸೆಂಬರ್ ಅಂತ್ಯದೊಳಗೆ ಇನ್ನೂ 600 ಮಂದಿ ಪರವಾನಗೆ ಪಡೆದ ಭೂಮಾಪಕರ ನೇಮಕಾತಿ ಪೂರ್ಣಗೊಳ್ಳಲಿದೆ. ಹೊಸದಾಗಿ ನೇಮಕಗೊಂಡ ಭೂಮಾಪಕರನ್ನು ಹೆಚ್ಚು ಅರ್ಜಿಗಳು ಬಾಕಿ ಇರುವ ಸ್ಥಳಗಳಿಗೆ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News