`ಹೋರಾಟದ ಕೂಗು, ಪ್ರತ್ಯೇಕ' ಶಬ್ದಗಳನ್ನು ನಾನು ಬಳಸಿಯೇ ಇಲ್ಲ: ಎಂ.ಬಿ.ಪಾಟೀಲ್ ಸ್ಪಷ್ಟನೆ

Update: 2021-09-03 12:26 GMT

ಬೆಂಗಳೂರು, ಸೆ. 3: `ಲಿಂಗಾಯತ ವೀರಶೈವ ಒಳಗೊಂಡಂತೆ 99 ಉಪಪಂಗಡಗಳನ್ನು ಸೇರಿಸಿ, `ಲಿಂಗಾಯತ ಸ್ವತಂತ್ರ ಧರ್ಮ'ದ ಮಾನ್ಯತೆ ಕೇಳಿದ್ದೆವು. ಮುಂದಿನ ಚುನಾವಣೆ ನಂತರ ನಾವೆಲ್ಲ ಒಗ್ಗೂಡಿ ಮುನ್ನೆಡೆಯುತ್ತೇವೆ ಎಂದು ಹೇಳಿದ್ದೆ. ಇಲ್ಲಿ `ಹೋರಾಟದ ಕೂಗು, ಪ್ರತ್ಯೇಕ' ಶಬ್ದಗಳನ್ನು ನಾನು ಬಳಸಿಯೇ ಇಲ್ಲ' ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್  ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ವಿಧಾನಸಭೆ ಚುನಾವಣೆ ಮುಂಚೆ ಮಾಡಿದರೆ ಇದಕ್ಕೆ ಮತ್ತೆ ರಾಜಕೀಯ ಬಣ್ಣ ನೀಡಿ, ಅಪಪ್ರಚಾರ ಮಾಡುತ್ತಾರೆಂಬ ಕಾರಣಕ್ಕೆ ಬರುವ ಚುನಾವಣೆ ನಂತರದಲ್ಲಿ ನಾವು ಪಂಚಪೀಠಾಧೀಶರು, ವೀರಕ್ತಮಠಗಳು, ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಒಗ್ಗೂಡಿ, ಚರ್ಚೆ ಮಾಡಿ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಮುಂದುವರೆಯುತ್ತೇವೆಂದು ಹೇಳಿದ್ದೆ. ಈಗ ನಾವು ಒಂದಾಗುವಾಗ ಅಥವಾ ಒಂದಾದರೆ ಇದು ಯಾರಿಗೆ ಮತ್ತು ಏಕೆ ಸಮಸ್ಯೆ?' ಎಂದು ಪ್ರಶ್ನಿಸಿದರು.

`ನಾನು ಚುನಾವಣೆ ನಂತರ ಎಂದು ಹೇಳಿದ್ದನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಬಿಂಬಿಸಿದ್ದರಿಂದ ಬೇರೆ ಸಂದೇಶ ಹೋಗಿದೆ. ಈಗ ಯಾವುದೇ ಹೋರಾಟ, ಕೂಗು ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮಲ್ಲಿನ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಇದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಒಳ್ಳೆಯದಾಗಬೇಕು. ಸಮಾಜದ ಮಠಗಳು, ಶಿಕ್ಷಣ ಸಂಸ್ಥೆಗಳಿಗೂ ಒಳಿತಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಠದ ಎಲ್ಲ ಶ್ರೀಗಳು, ಪಂಚಪೀಠಾಧೀಶರು, ವೀರಶೈವ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಸಮಾಜದ ಎಲ್ಲ ಗಣ್ಯರನ್ನು ಒಳಗೊಂಡು ಸಮಾಜಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಳ್ಳುತ್ತೇವೆ' ಎಂದರು.

ಸಾಮೂಹಿಕ ನಾಯಕತ್ವ: `ಈ ವಿಚಾರದಲ್ಲಿ ನಾನು ನಾಯಕತ್ವ ವಹಿಸುವುದಿಲ್ಲ. ನಾನು ಎರಡು ಹೆಜ್ಜೆ ಹಿಂದಿಟ್ಟು, ಸಾಮೂಹಿಕ ನಾಯಕತ್ವದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೂ ಗೊತ್ತಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾವು ಹಿಂದೆ ಹೋರಾಟ ಮಾಡಿದ್ದಾಗ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ, ಅಲ್ಪಸಂಖ್ಯಾತರ ಸ್ಥಾನಮಾನ, ಇತರೆ ಸೌಲಭ್ಯಗಳು ಸಿಗುತ್ತಿದ್ದವು. ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣದಲ್ಲಿ ಶೇ.50ರಷ್ಟು ಮೀಸಲಾತಿ ಸಿಗುತ್ತಿತ್ತು. ಯುಪಿಎಸ್ಸಿಯಿಂದ ಕೆಪಿಎಸ್ಸಿಯವರೆಗೆ ಕೇಂದ್ರದಿಂದ ರಾಜ್ಯದವರೆಗೆ ಉದ್ಯೋಗಗಳಲ್ಲಿ ಮೀಸಲಾತಿ ದೊರಕುತಿತ್ತು. ಆದರೆ, ಅಂದು ಸಮಯದ ಅಭಾವದಿಂದ ಮತ್ತು ಗಡಿಬಿಡಿಯಲ್ಲಿ ನಮ್ಮಿಂದಲೂ ಸಣ್ಣ-ಪುಟ್ಟ ಲೋಪದೋಷದಿಂದ ಆ ಕೆಲಸ ಆಗಲಿಲ್ಲ. ಅಂದು ಚುನಾವಣೆ ಹತ್ತಿರವಿದ್ದ ಸಂದರ್ಭದಲ್ಲಿ ಇದಕ್ಕೆ ರಾಜಕೀಯ ಬಣ್ಣ ನೀಡಿದರು' ಎಂದು ವಿವರಿಸಿದರು.

`ಈ ಹಿಂದೆ `ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ'ಕ್ಕೆ ಮಾನ್ಯತೆ ನೀಡುವಂತೆ ವೀರಶೈವ ಮಹಾಸಭಾದವರು ಮನವಿ ಸಲ್ಲಿಸಿದ್ದರು. ಆದರೆ, ಶಬ್ದದ ತಾಂತ್ರಿಕ ಬಳಕೆಯ ತೊಂದರೆಯಿಂದಾಗಿ ಆ ಬೇಡಿಕೆ ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಿದ್ದೆವು. ಈ ಹೋರಾಟವನ್ನು ಮೊದಲು ಬೀದರ ಮತ್ತು ಬೆಳಗಾವಿಯಲ್ಲಿ ಆರಂಭ ಮಾಡಲಾಗಿತ್ತು. ಅದರ ನಂತರ ನಾನು ಹೋರಾಟದಲ್ಲಿ ಪಾಲ್ಗೊಂಡಿದ್ದೆ ಹೊರತು ನಾನು ಈ ಹೋರಾಟವನ್ನು ಆರಂಭಿಸಿರಲಿಲ್ಲ' ಎಂದು ಸ್ಪಷ್ಟಪಡಿಸಿದರು.

`ಒಂದು ವೇಳೆ ಈಗಾಗಲೇ ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ನಮ್ಮ ಉಪಪಂಗಡಗಳು ಪ್ರವರ್ಗ `2 ಎ' ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಪಂಚಮಸಾಲಿ ಸೇರಿದಂತೆ ಬಹುತೇಕ ಎಲ್ಲ ಸಮಾಜಗಳು ಕೃಷಿ ಆಧಾರಿತ ಜೀವನ ಸಾಗಿಸುತ್ತಿವೆ. ಅವರಲ್ಲೂ ಬಡತನವಿದೆ. ಈ ಹಿನ್ನೆಲೆಯಲ್ಲಿ ಕೂಡಲಸಂಗಮ ಮತ್ತು ಹರಿಹರ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ ಅದು ತಪ್ಪಲ್ಲ. ಈ ಸ್ವಾಮೀಜಿಗಳು ನಡೆಸಿದ ಹೋರಾಟದಲ್ಲಿ ನಾನು ಚಿತ್ರದುರ್ಗಕ್ಕೆ ತೆರಳಿ ಪಾಲ್ಗೊಂಡು, ನ್ಯಾಯಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

`ಈ ಮಧ್ಯೆ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ಹಿನ್ನೆಲೆಯಲ್ಲಿ 2023ರ ಚುನಾವಣೆ ದೃಷ್ಟಿಯಿಂದ ಈ ವಿಚಾರ ಪ್ರಸ್ತಾಪಿಸುತ್ತಿದ್ದೀರಿ' ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, `ಕಾಂಗ್ರೆಸ್‍ನಲ್ಲಿ 113 ಸ್ಥಾನಗಳನ್ನು ಗೆದ್ದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಸಮುದಾಯ, ಯಾವುದೇ ಪಕ್ಷಗಳಲ್ಲಿ ನಾವೇ ನಾಯಕರಾಗುತ್ತೇವೆ ಎಂದರೆ ಸಾಧ್ಯವಿಲ್ಲ. ಜನ ಒಪ್ಪಿ ಬೆಂಬಲ ನೀಡಿದಾಗ ಮಾತ್ರ ನಾವು ನಾಯಕರಾಗುತ್ತೇವೆ. ನಾನು ಈ ಹಿನ್ನೆಲೆಯಲ್ಲಿಯೇ ಚುನಾವಣೆಯ ನಂತರ ಸಭೆ ಸೇರುತ್ತೇನೆ ಎಂದು ಹೇಳಿದ್ದೇನೆ. ಈಗಲೇ ಹೇಳಿದರೆ ಅದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ ಎಂಬ ಪರಿಜ್ಞಾನವು ನನಗೆ ಇದೆ' ಎಂದು ಉತ್ತರಿಸಿದರು. 

`ತಾವು ಹೋರಾಟದಿಂದ ಹೆದರಿ ಹಿಂದೆ ಸರಿಯುತ್ತಿದ್ದೀರಾ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ನಾನು ನನ್ನ ತಂದೆ-ತಾಯಿ ಬಿಟ್ಟು ಯಾರಿಗೂ ಹೆದರಲ್ಲ. ನಾನು ಈ ಹಿಂದೆಯೂ ತಪ್ಪು ಮಾಡಿಲ್ಲ. ಇಂದೂ ಮಾಡಿಲ್ಲ. ಮುಂದೆಯೂ ತಪ್ಪು ಮಾಡಲ್ಲ. ಬೀದರನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮನದಾಳದ ಮಾತನ್ನು ಹೇಳಿದ್ದೇನೆ. ಹೋರಾಟದ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳಿಂದ ಪೆಟ್ಟು ತಿಂದಿದ್ದೇನೆ. ಅಧಿಕಾರ ಕಳೆದುಕೊಂಡಿದ್ದೇನೆ ಎಂದು ಅಂದು ಮನದಾಳದ ಮಾತನ್ನು ಹೇಳಿದ್ದೇನೆ. ಇದರಲ್ಲಿ ನನಗೆ ಯಾವುದೇ ರಾಜಕೀಯ ಅಜಂಡಾ ಇಲ್ಲ' ಎಂದು ಸ್ಪಷ್ಟಪಡಿಸಿದರು.

`ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಮುಜುಗರ ಆಗುವುದಿಲ್ಲ. ಈ ಹಿಂದೆ ನಾನು ಹೋರಾಟ ಮಾಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಯಾವುದೆ ಹಿನ್ನೆಡೆ ಆಗಿಲ್ಲ. 2008ರಲ್ಲಿ ಹಾಗೂ 2013ರಲ್ಲಿ ಬಂದಷ್ಟೆ ಲಿಂಗಾಯತ ಮತಗಳು 2018ರಲ್ಲಿಯೂ ಬಂದಿದ್ದನ್ನು ದಾಖಲೆ ಸಮೇತ ಈ ಹಿಂದೆಯೆ ಮಾಹಿತಿ ನೀಡಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನನ್ನ ಹೇಳಿಕೆ ಸ್ಪಷ್ಟವಾಗಿದೆ. ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆಂಬದು ನನಗೆ ಮೊದಲೇ ಗೊತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೂ ನನ್ನ ಹೇಳಿಕೆಗೂ ಈ ಹಿಂದೆಯೂ ಯಾವುದೇ ಸಂಬಂಧವಿಲ್ಲ, ಇಂದು ಸಂಬಂಧವಿಲ್ಲ. ಮುಂದೆಯೂ ಸಂಬಂಧವಿಲ್ಲ. ಪಕ್ಷಕ್ಕೆ ಯಾವುದೇ ಹಾನಿಯೂ ಆಗುವುದಿಲ್ಲ. ವೀರಶೈವ-ಲಿಂಗಾಯತರು ಒಂದಾಗಿ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಏನು ಸಮಸ್ಯೆಯಾಗುತ್ತೆ? ಎಂದು ಪ್ರಶ್ನಿಸಿದರು.

`ನಮ್ಮ ಬೇಡಿಕೆಗಳಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಈ ಹಿಂದೆಯೂ ಸಂಬಂಧವಿರಲಿಲ್ಲ. ಇಂದೂ ಸಂಬಂಧವಿಲ್ಲ. ಮುಂದೆಯೂ ಸಂಬಂಧವಿರುವುದಿಲ್ಲ. ಈ ವಿಷಯದಲ್ಲಿ ಯಾರಲ್ಲಿಯೂ ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ನಾವು ಈಗ ಒಗ್ಗಟ್ಟಾಗುತ್ತಿದ್ದೇವೆ. ಇದರಲ್ಲಿ ಯಾರಿಗೆ ತೊಂದರೆ ಆಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯ ಕುರಿತು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಮಾಹಿತಿ ನೀಡಿದ್ದೇನೆ'

-ಎಂ.ಬಿ.ಪಾಟೀಲ್ ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News