ಕರ್ನಾಟಕದಲ್ಲಿ ಏರೋಸ್ಪೇಸ್ ಉತ್ಪಾದನೆಯನ್ನು ಶೇ.60ಕ್ಕೆ ಏರಿಸುವ ಗುರಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-03 15:24 GMT

ಬೆಂಗಳೂರು, ಸೆ.3: ಕರ್ನಾಟಕ, ದೇಶದ ಶೇ.40ರಷ್ಟು ಏರೋಸ್ಪೇಸ್ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಇದನ್ನು ಶೇ.60ಕ್ಕೆ ಏರಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ನಡೆದ ಅಮೇರಿಕನ್ ಛೇಂಬರ್ ಆಫ್ ಕಾಮರ್ಸ್‍ನ ಇನ್ ಇಂಡಿಯಾ (ಆಮ್‍ಚಾಮ್) ಸಂಸ್ಥೆಯ 29ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಮ್‍ಚಾಮ್ ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕವು ಅಮೆರಿಕಾನಂತೆಯೇ ಆಧುನಿಕ ತಂತ್ರಜ್ಞಾನದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಸ್ಥಾನಮಾನವನ್ನು ಹೊಂದಿದೆ. ರಾಜ್ಯ ಕೈಗಾರಿಕೋದ್ಯಮದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯಪೂರ್ವದಿಂದಲೂ, ಖಾಸಗಿ ವಲಯದವರು ಇಲ್ಲದ ಸಂದರ್ಭದಲ್ಲಿ ಬಿ.ಎಚ್.ಇ.ಎಲ್, ಎಚ್.ಎಂ.ಟಿ ಮುಂತಾದ ಪ್ರಮುಖ ಸಂಸ್ಥೆಗಳು ಇಲ್ಲಿದ್ದವು ಎಂದು ಅವರು ಹೇಳಿದರು.

ಭಾರತ ನಿರ್ಮಾಣದಲ್ಲಿ ಕರ್ನಾಟಕ ರಾಜ್ಯ ತನ್ನದೇ ಕೊಡುಗೆ ನೀಡಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿಯೂ ಕರ್ನಾಟಕ ಪ್ರಮುಖ ಪಾತ್ರವನ್ನು ವಹಿಸಿದೆ. ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸುವ ಇಸ್ರೋ ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ. ರಾಜ್ಯದಲ್ಲಿ ಅತಿ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳಿದ್ದು, ಐಐಟಿ, ಐಐಎಂ ಹಾಗೂ ಐಐಎಸ್ಸಿ ಮುಂತಾದ ಶ್ರೇಷ್ಠ ಕಾಲೇಜುಗಳನ್ನು ಬೆಂಗಳೂರು ಹೊಂದಿದೆ. ಇವುಗಳು ರಾಜ್ಯದ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ನೀತಿ ಆಯೋಗದ ಸೂಚ್ಯಂಕದಲ್ಲಿ ಕರ್ನಾಟಕ 2019 ಹಾಗೂ 2020ರಲ್ಲಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಅಮೆರಿಕ ಮತ್ತು ಕರ್ನಾಟಕದ ಮಧ್ಯೆ ಉತ್ತಮ ಸಂಬಂಧವಿದ್ದು, ಈ ಸಂಬಂಧವು ಸಂಸ್ಕೃತಿ ಹಾಗೂ ಚಿಂತನೆಗಳಲ್ಲಿ ನಾವೀನ್ಯತೆಯನ್ನು ತರುವಲ್ಲಿ ಸಹಕಾರಿಯಾಗಲಿದೆ. ಕರ್ನಾಟಕದೊಂದಿಗಿನ ಸಹಭಾಗಿತ್ವವು ಅಮೆರಿಕಾ ಹಾಗೂ ಕರ್ನಾಟಕಕ್ಕೆ ಲಾಭದಾಯಕವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಕೋವಿಡ್ 19 ಸಾಂಕ್ರಾಮಿಕವು ಸವಾಲುಗಳ ಜೊತೆ ಅವಕಾಶಗಳನ್ನೂ ಒದಗಿಸಿದೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ನೆರವಿಗೆ ನಿಂತ ಅಮೆರಿಕ ಹಾಗೂ ಉಳಿದ ಎಲ್ಲ ಖಾಸಗಿ ವಲಯದ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಮೆರಿಕಾ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ಮನುಕುಲದ ಏಳಿಗೆಗೆ ಬದ್ಧವಾಗಿರುವುದನ್ನು ಶ್ಲಾಘಿಸಿದರು.

ಕರ್ನಾಟಕದಲ್ಲಿ ಹೂಡಿಕೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆಯಿತ್ತ ಮುಖ್ಯಮಂತ್ರಿ, ಆರ್ಥಿಕತೆಯಲ್ಲಿ ಯಾವುದೇ ಚಮತ್ಕಾರ ಸಾಧ್ಯವಿಲ್ಲ, ಕೇವಲ ಫಲಿತಾಂಶ ಮಾತ್ರ ಎಂದು ಅರಿತಿದ್ದು, ಜಾಗತಿಕ ಆರ್ಥಿಕತೆಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಕರ್ನಾಟಕ ಶ್ರಮಿಸುತ್ತಿದೆ. ಮುಂಬರುವ ದಿನಗಳಲ್ಲಿ ಆಮ್‍ಚಾಮ್‍ನ ಸಹಕಾರದಿಂದ ನಾವೀನ್ಯತೆಯಲ್ಲಿ ಕರ್ನಾಟಕ ಹೆಚ್ಚಿನ ಸಾಧನೆ ಮಾಡುವ ಇಂಗಿತವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News