ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವು ಚಾಂಪಿಯನ್: ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್

Update: 2021-09-03 15:37 GMT

ಬೆಂಗಳೂರು, ಸೆ.3: ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಟೋಕಿಯೋ ಒಲಿಂಪಿಕ್ಸ್-2020 ರಲ್ಲಿ ಭಾಗವಹಿಸಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಭಾರತದ ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಉತ್ತಮ ಪ್ರರ್ದಶನ ನೀಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ 125 ಆಟಗಾರರ ಅತಿ ದೊಡ್ಡ ತಂಡವನ್ನು ಒಲಿಂಪಿಕ್ಸ್‍ಗೆ ಕಳುಹಿಸಲಾಗಿತ್ತು. ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಆಟಗಾರರು 7 ಪದಕಗಳನ್ನು ಗೆದ್ದಿದ್ದಾರೆ. ಇನ್ನು ಕೆಲವರು ಕಡಿಮೆ ಅಂತರದಿಂದ ಪದಕಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.
ಒಲಿಂಪಿಕ್ಸ್‍ನಲ್ಲಿ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಅನೇಕ ಹೊಸ ದಾಖಲೆಗಳನ್ನು ಬರೆಯುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಭಾರತೀಯ ಆಟಗಾರರ ಈ ಸಾಧನೆ ಶ್ಲಾಘನೀಯ ಮತ್ತು ಯುವ ಆಟಗಾರರಿಗೆ ಸ್ಪೂರ್ತಿದಾಯಕವಾಗಲಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

1900ರಲ್ಲಿ ಮೊದಲ ಬಾರಿಗೆ ಭಾರತವು ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿತು. ಒಲಿಂಪಿಕ್ಸ್-2020ರ ಆರಂಭದವರೆವಿಗೂ ಭಾರತವು ಒಟ್ಟು 28 ಪದಕಗಳನ್ನು ಗೆದ್ದಿದೆ. 1928ರಿಂದ 1980ರವರೆವಿಗೂ ಭಾರತೀಯ ರಾಷ್ಟ್ರೀಯ ಹಾಕಿ ತಂಡವು ಪ್ರಾಬಲ್ಯವನ್ನು ಸಾಧಿಸಿತ್ತು. 2012 ರಲ್ಲಿ 83 ಸದಸ್ಯರ ಭಾರತೀಯ ತಂಡವು ಗರಿಷ್ಟ 6 ಪದಕಗಳನ್ನು ಗೆದ್ದಿತ್ತು. 2012 ರಿಂದೀಚೆಗೆ 2020ರಲ್ಲಿ 7 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಆಟಗಾರರು ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನೀರಜ್ ಚೋಪ್ಡಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ, ಮೀರಾಬಾಯಿ ಚಾನು ವೇಟ್ ಲಿಪ್ಟಿಂಗ್‍ನ 49 ಕೆಜಿ ವಿಭಾಗದಲ್ಲಿ 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ, ಕುಸ್ತಿಪಟು ರವಿ ದಹಿಯಾ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಕಂಚಿನ ಪದಕ, 65 ಕೆಜಿ ತೂಕದ ಫ್ರೀಸ್ಟೈಲ್ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಕಂಚಿನ ಪದಕ, ಲೋವ್ಲಿನಾ ಬರ್ಗೊಹೈನ್ ಬಾಕ್ಸಿಂಗ್‍ನಲ್ಲಿ ಕಂಚಿನ ಪದಕ ಮತ್ತು 41 ವರ್ಷಗಳ ನಂತರ ಪುರುಷರ ಹಾಕಿ ತಂಡವು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ ಎಂದು ಅವರು ಹೇಳಿದರು.

ಭಾರತೀಯ ಮಹಿಳಾ ಹಾಕಿ ತಂಡವು ಪ್ರಸ್ತುತ ಒಲಿಂಪಿಕ್ಸ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ. ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಬಿ.ಎಸ್‍ರವರ ಮಾರ್ಗದರ್ಶನದಿಂದಾಗಿ ಭಾರತೀಯ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ರಾಜ್ಯಪಾಲ ಹೇಳಿದರು.

ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ 11 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಕರ್ನಾಟಕ ರಾಜ್ಯದಿಂದ ಗಾಲ್ಫ್‍ನಲ್ಲಿ ಅದಿತಿ ಅಶೋಕ್, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜನ್ ಮತ್ತು ಕುದುರೆ ಸವಾರಿಯಲ್ಲಿ ಫವಾದ್ ಮಿರ್ಜಾ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ರಾಜ್ಯಪಾಲ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರವು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳಿಗಾಗಿ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಿದೆ ಮತ್ತು ಜಾರಿಗೊಳಿಸಿದೆ. ಆ ಎಲ್ಲ ಯೋಜನೆಗಳ ಫಲದ ಫಲಿತಾಂಶಗಳೇ ಇಂದು ನಮ್ಮ ಮುಂದಿವೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಸರಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಆಟಗಾರರಿಗೆ ಬಹುಮಾನ ನೀಡುವುದರ ಜೊತೆಗೆ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಆಟಗಾರರಿಗೆ ಒದಗಿಸಲಾಗುತ್ತಿದೆ ಎಂದು ರಾಜ್ಯಪಾಲ ತಿಳಿಸಿದರು.

ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿದ್ದ ಅದಿತಿ ಅಶೋಕ್, ಶ್ರೀಹರಿ ನಟರಾಜನ್ ಮತ್ತು ಫವಾದ್ ಮಿರ್ಜಾ ಅವರಿಗೆ ತಲಾ 1 ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು. ಫವಾದ್ ಮಿರ್ಜಾ ಬದಲಾಗಿ ಅವರ ತಂದೆ ಹಸ್ನೈನ್ ಮಿರ್ಜಾ  ಪ್ರೋತ್ಸಾಹ ಧನವನ್ನು ಸ್ವೀಕರಿಸಿದರು. ಮಹಿಳಾ ಹಾಕಿ ತಂಡದ ತರಬೆತುದಾರರಾದ ಅಂಕಿತಾ ಸುರೇಶ್ ಅವರಿಗೆ 1 ಲಕ್ಷ ರೂ.  ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News