ರಾಜ್ಯದ 25 ಮಂದಿ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ಡಿವೈಎಸ್ಪಿ ಹುದ್ದೆಗೆ ಭಡ್ತಿ
ಬೆಂಗಳೂರು, ಸೆ.4: ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 25 ಮಂದಿಗೆ ಡಿವೈಎಸ್ಪಿ ಹುದ್ದೆಗೆ ಭಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ರಾಜ್ಯದ ವಿವಿಧ ಠಾಣೆಗಳಲ್ಲಿ ಪಿಎಸ್ಐಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 25 ಮಂದಿಗೆ ಇನ್ಸ್ಪೆಕ್ಟರ್ ಹುದ್ದೆಗೆ ಭಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ನಾಗರಾಜ್ ಎಂ.ಎನ್. ಅವರನ್ನು ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿಯನ್ನಾಗಿ ಹಾಗೂ ಸಿಸಿಬಿ ಇನ್ಸ್ಪೆಕ್ಟರ್ ಆಗಿರುವ ತೇರಿ ಬಸವರಾಜ್ ಅಲ್ಲಪ್ಪ ಅವರನ್ನು ರಾಜ್ಯ ಗುಪ್ತ ವಾರ್ತೆ ಡಿವೈಎಸ್ಪಿಯನ್ನಾಗಿ ನಿಯೋಜನೆ ಮಾಡಲಾಗಿದೆ.
ಸಿಟಿಎಸ್ಬಿಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಯೋಗೇಂದ್ರಕುಮಾರ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಯ ಅಪರಾಧ ವಿಭಾಗದ ಡಿವೈಎಸ್ಪಿ ಹುದ್ದೆಗೆ ನಿಯೋಜಿಸಲಾಗಿದೆ.
ಅದೇ ರೀತಿ ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಲಕ್ಷ್ಮಣ್ ಸಿ. ಅವರನ್ನು ಎಸಿಬಿ ಇನ್ಸ್ಪೆಕ್ಟರ್ ಹುದ್ದೆಗೆ ಭಡ್ತಿ ನೀಡಲಾಗಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ರವಿಶಂಕರ್ ಎನ್.ಎಸ್. ರಾವ್ ಅವರನ್ನು ಬೆಂಗಳೂರು ನಗರ ಸಿಟಿಎಸ್ಬಿಗೆ ಹಾಗೂ ತಾವರೆಕೆರೆ ಪೊಲೀಸ್ ಠಾಣೆಯ ಪಿಎಸ್ಐ ನರೇಂದ್ರಬಾಬು ಅವರನ್ನು ಎಸಿಬಿ ಇನ್ಸ್ಪೆಕ್ಟರ್ರನ್ನಾಗಿ ನಿಯೋಜನೆ ಮಾಡಲಾಗಿದೆ.
ಈ ಮೇಲ್ಕಂಡ ಎಲ್ಲ ಭಡ್ತಿ ಹಾಗೂ ವರ್ಗಾವಣೆ ಪ್ರಭಾರಿ ನಿಯಮಕ್ಕೆ ಒಳಪಟ್ಟಿರುವುದರಿಂದ ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಯಾರೊಬ್ಬರೂ ಭಡ್ತಿಯನ್ನು ಪೂರ್ವ ಅನ್ವಯವಾಗಿ ಕ್ರಮಬದ್ಧಗೊಳಿಸುವಂತೆ ಹಕ್ಕೊತ್ತಾಯ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.